ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಕೇರಳ ಸಮಾಜಂ ವತಿಯಿಂದ ಡಿ.15ರಂದು ಬೆಳಗ್ಗೆ 10.30ಕ್ಕೆ ವಾಜಪೇಯಿ ಬಡಾವಣೆಯಲ್ಲಿ ಇರುವ ಕೇರಳ ಸಮಾಜಂ ಸಮುದಾಯ ಭವನದಲ್ಲಿ ಓಣಾಘೋಷಂ- 2024 (ಓಣಂ) ಹಬ್ಬವನ್ನು ವೈಭವದಿಂದ ಆಚರಿಸಲಾಗುವುದು ಎಂದು ಸಮಾಜದ ಕಾರ್ಯದರ್ಶಿ ಗಿರೀಶ್ ಕುಮಾರ್ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 50 ವರ್ಷಗಳಿಂದ ಕೇರಳ ಸಮಾಜಂ ಶಿವಮೊಗ್ಗ ನಗರದಲ್ಲಿ ಕೆಲಸ ಮಾಡುತ್ತ ಬಂದಿದೆ. ಸಮಾಜದ ಬಂಧುಗಳಿಗೆ ನೆರವು ನೀಡುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಶಿವಮೊಗ್ಗದಲ್ಲಿ ಸುಮಾರು 8 ಸಾವಿರ ಕೇರಳ ಮಂದಿ ಇದ್ದೇವೆ. ಇದೊಂದು ಜಾತ್ಯಾತೀತ ಸಮಾಜವಾಗಿದ್ದು, ಕ್ರಿಶ್ಚಿಯನ್, ಹಿಂದೂ, ಮುಸ್ಲಿಂ ಎಲ್ಲಾ ಧರ್ಮದವರು ಸೇರಿಕೊಂಡಿದ್ದಾರೆ. ಕೇರಳಂ ಸಮಾಜ ಭಾವೈಕ್ಯತೆಯನ್ನು ಸಾರುತ್ತಿದೆ ಎಂದರು.ಪ್ರತಿವರ್ಷದಂತೆ ಈ ವರ್ಷವೂ ಕೂಡ ನಮ್ಮ ಸಮಾಜದಿಂದ ಓಣಾ ಘೋಷಂ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಿಶೇಷ ತಿನಿಸುಗಳು ಇರುತ್ತವೆ. ನಮ್ಮಲ್ಲಿ ಸುಮಾರು 22 ಬಗೆಯ ತಿನಿಸುಗಳಿದ್ದು, ಅವೆಲ್ಲವನ್ನು ಓಣಂ ಹಬ್ಬದಲ್ಲಿ ಪ್ರದರ್ಶನ ಮಾಡಲಾಗುವುದು ಎಂದು ಹೇಳಿದರು.ಮಹಿಳಾ ಸಂಘದ ಅಧ್ಯಕ್ಷೆ ಬ್ರಿಜಿಟ್ ವರ್ಗೀಶ್ ಮಾತನಾಡಿ, ಕೇರಳ ಸಮಾಜಂನಿಂದ ಮುಂದಿನ ದಿನಗಳಲ್ಲಿ ಸಮಾಜ ಬಾಂಧವರು ಹಾಗೂ ನಗರದ ಬಡಜನರಿಗಾಗಿ ಶಾಲೆ ಮತ್ತು ಆಸ್ಪತ್ರೆಯನ್ನು ನಿರ್ಮಿಸುವ ಉದ್ದೇಶವಿದೆ. ರಾಜ್ಯ ಸರ್ಕಾರ ಹಾಗೂ ಸಮಾಜ ಬಾಂಧವರು ಇದಕ್ಕೆ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ, ಪ್ರಮುಖರಾದ ಆರ್.ಎಂ. ಮಂಜುನಾಥಗೌಡ, ವಿ. ರಾಜು, ಎಚ್.ಎಸ್. ಸುಂದರೇಶ್, ಎಂ. ಶ್ರೀಕಾಂತ್, ಸಿಗಂಧೂರು ಕ್ಷೇತ್ರದ ಡಾ.ಎಸ್. ರಾಮಪ್ಪ, ರಾಮಕೃಷ್ಣ ವಿವೇಕಾನಂದಶ್ರಮದ ಸ್ವಾಮಿ ವಿವೇಕಾನಂದ ಸರಸ್ವತಿ, ರೆವರೆಂಟ್ ಡಾ. ಫಾದರ್ ಅಬ್ರಹಂ, ಧರ್ಮಗುರುಗಳಾದ ಅಬ್ದುಲ್ ಲತೀಫ್ ಸಾದಿ ಮುಂತಾದವರು ಉಪಸ್ಥಿತರಿರುವರು ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಪ್ರದೀಪ್ ಮಿತ್ತಲ್ ವಹಿಸುವರು. ನಂತರ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಕೂಡ ನಡೆಯಲಿದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಪ್ರಮುಖರಾದ ಸುರೇಶ್ ಕುಮಾರ್, ವನಜಾಕ್ಷಿ, ಸೌಮ್ಯ ಗಿರೀಶ್, ರಾಮಕೃಷ್ಣನ್, ಶ್ರೀಧರನ್, ಶಾಂತ, ಸರಸ, ವಿನಿತಾ ಮುಂತಾದವರು ಇದ್ದರು.