ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗದ ನಮ್ ಟೀಮ್ ವತಿಯಿಂದ ಅ.26 ಮತ್ತು 27ರಂದು ಕುವೆಂಪು ರಂಗಮಂದಿರದಲ್ಲಿ ನೀನಾಸಂ ನಾಟಕೋತ್ಸವವನ್ನು ಆಯೋಜಿಸಲಾಗಿದೆ ಎಂದು ನಮ್ ಟೀಮ್ನ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ನಮ್ ಟೀಮ್ ವತಿಯಿಂದ ನೀನಾಸಂ ನಾಟಕೋತ್ಸವವನ್ನು ಆಯೋಜಿಸಲಾಗುತ್ತಿದ್ದು, ಈಗಾಗಲೇ ರಾಜ್ಯಾದಾದ್ಯಂತ ಪ್ರದರ್ಶನ ಕಂಡು ವೀಕ್ಷಕರ ಮೆಚ್ಚುಗೆ ಪಡೆದಿರುವ ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.ಕಳೆದ 24 ವರ್ಷಗಳಿಂದ ಶಿವಮೊಗ್ಗವನ್ನು ಕೇಂದ್ರಿಕರಿಸಿ ರಂಗ ಚಟುವಟಿಕೆಯನ್ನು ಮಾಡುತ್ತಿರುವ ನಮ್ ಟೀಮ್ ರಂಗತಂಡವು ಇಲ್ಲಿಯವರೆಗೆ ಶಿವಮೊಗ್ಗದಲ್ಲಿ 37 ನಾಟಕೋತ್ಸವವನ್ನು ಆಯೋಜಿಸಿದ್ದು, ಸ್ವನಿರ್ಮಿತ 46 ನಾಟಕಗಳನ್ನು ರಂಗದ ಮೇಲೆ ತಂದಿದೆ. ರಾಜ್ಯ ಮತ್ತು ಹೊರರಾಜ್ಯದಲ್ಲಿ ಇದುವರೆಗೆ 245 ನಾಟಕಗಳ ಪ್ರದರ್ಶನ ಹಾಗೂ ಆಯೋಜನೆ ಮಾಡಿದೆ ಎಂದರು.
ಅ.26ರಂದು ಸಂಜೆ 6.45ಕ್ಕೆ "ಮಾಲತೀಮಾಧವ " ನಾಟಕ ಪ್ರದರ್ಶನಗೊಳ್ಳಲಿದ್ದು, ಅಕ್ಷರ ಕೆ.ವಿ.ನಿರ್ದೇಶನ ಮಾಡಿದ್ದಾರೆ. ವಿದ್ಯಾ ಹೆಗಡೆ ಸಂಗೀತ ವಿನ್ಯಾಸ, ರಚನೆ ಭವಭೂತಿ, ಕನ್ನಡ ರೂಪಾಂತರವನ್ನು ಎಚ್.ಎಂ.ಗಣೇಶ್ ಹಾಗೂ ಕೆ.ಎಸ್.ಭಾರ್ಗವ ಮಾಡಿದ್ದಾರೆ ಎಂದು ಹೇಳಿದರು.ಅ.27ರಂದು ಸಂಜೆ 6.45ಕ್ಕೆ ಅಂಕದ ಪರದೆ ನಾಟಕ ಪ್ರದರ್ಶನಗೊಳ್ಳಲಿದ್ದು, ಅಭಿರಾಮ್ ಭಡ್ಯಮ್ಕರ್ರಿಂದ ರಚನೆ, ಜಯಂತ್ ಕಾಯ್ಕಿಣಿ ಕನ್ನಡಕ್ಕೆ ರೂಪಾಂತರ, ನಿರ್ದೇಶನವನ್ನು ವಿದ್ಯಾನಿಧಿ ವನಾರಸೆ ಮಾಡಿದ್ದಾರೆ. ನೇರ ನಾಟಕ ಪ್ರದರ್ಶನಗಳು ನಡೆಯಲಿದ್ದು, ವೇದಿಕೆ ಕಾರ್ಯಕ್ರಮ ಇರುವುದಿಲ್ಲ ಎಂದು ಮಾಹಿತಿ ನೀಡಿದರು. ಒಬ್ಬರಿಗೆ ಎರಡು ನಾಟಕಕ್ಕೆ 100ರು. ಪ್ರವೇಶ ದರವನ್ನು ನಿಗದಿಪಡಿಸಲಾಗಿದೆ. ಶಿವಮೊಗ್ಗದ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು. ಆಸಕ್ತರು ಮುಂಗಡ ಟಿಕೆಟ್ ಪಡೆಯಲು ದೂ-9845518866 ಈ ನಂಬರ್ ಸಂಪರ್ಕಿಸಬಹುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ನಮ್ ಟೀಮ್ನ ಖಜಾಂಚಿ ಸಮನ್ವಯ ಕಾಶಿ ಇದ್ದರು.