ಅರಣ್ಯಕ್ಕೆ ಪ್ಲಾಸ್ಟಿಕ್‌ ಒಯ್ಯೋದು ತಡೆಯಲು 2 ಹಂತದ ತಪಾಸಣೆ

| Published : Jul 21 2024, 01:24 AM IST

ಅರಣ್ಯಕ್ಕೆ ಪ್ಲಾಸ್ಟಿಕ್‌ ಒಯ್ಯೋದು ತಡೆಯಲು 2 ಹಂತದ ತಪಾಸಣೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಅರಣ್ಯ ಪ್ರದೇಶದೊಳಗೆ ಸಂಚರಿಸುವ ವಾಹನಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ತೆಗೆದುಕೊಂಡು ಹೋಗುವುದನ್ನು ತಡೆಯಲು ಎರಡು ಹಂತದ ತಪಾಸಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಚಿವ ಈಶ್ವರ್‌ ಖಂಡ್ರೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಅರಣ್ಯ ಪ್ರದೇಶದೊಳಗೆ ಸಂಚರಿಸುವ ವಾಹನಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ತೆಗೆದುಕೊಂಡು ಹೋಗುವುದನ್ನು ತಡೆಯಲು ಎರಡು ಹಂತದ ತಪಾಸಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಚಿವ ಈಶ್ವರ್‌ ಖಂಡ್ರೆ ಸೂಚಿಸಿದ್ದಾರೆ.

ಅರಣ್ಯ ಪ್ರದೇಶದೊಳಗಿನ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸಾಗುವ ವಾಹನಗಳಲ್ಲಿನ ಪ್ರಯಾಣಿಕರು ಬಳಸಿದ ನೀರಿನ ಬಾಟಲಿ, ಪ್ಲಾಸ್ಟಿಕ್‌ ಕವರ್‌ ಸೇರಿದಂತೆ ಇನ್ನಿತರ ಏಕಬಳಕೆ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಅರಣ್ಯದೊಳಗೆ ಎಸೆಯುತ್ತಿರುವುದು ಹೆಚ್ಚುತ್ತಿದೆ. ಅಲ್ಲದೆ, ಹೀಗೆ ಎಸೆಯುವ ಪ್ಲಾಸ್ಟಿಕ್‌ ವಸ್ತುಗಳನ್ನು ವನ್ಯಜೀವಿಗಳು ಸೇವಿಸುವಂತಾಗಿದೆ ಹಾಗೂ ಪರಿಸರಕ್ಕೆ ಮಾರಕವಾಗುತ್ತಿದೆ. ಅದರಲ್ಲೂ ನಾಗರಹೊಳೆ ಮತ್ತು ಬಂಡೀಪುರದಂತಹ ಸಂರಕ್ಷಿತಾರಣ್ಯಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ಸಿಬ್ಬಂದಿ ಮತ್ತು ವಾಹನ ನಿಯೋಜಿಸುವಂತಾಗಿದೆ.

ಹೀಗಾಗಿ ಅರಣ್ಯ ಪ್ರದೇಶದೊಳಗೆ ಸಂಚರಿಸುವ ವಾಹನಗಳು ಏಕಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ತೆಗೆದುಕೊಂಡು ಹೋಗುವುದನ್ನು ತಡೆಯಬೇಕು. ಅದಕ್ಕಾಗಿ ಅರಣ್ಯ ಪ್ರದೇಶವನ್ನು ಪ್ರವೇಶಿಸುವ ವಾಹನಗಳನ್ನು 2 ಹಂತದಲ್ಲಿ ತಪಾಸಣೆಗೊಳಪಡಿಸುವ ವ್ಯವಸ್ಥೆ ಜಾರಿ ಮಾಡಬೇಕಿದೆ. ಅದಕ್ಕಾಗಿ ಮುಂದಿನ 7 ದಿನಗಳೊಳಗಾಗಿ ಸುತ್ತೋಲೆ ಅಥವಾ ಆದೇಶ ಹೊರಡಿಸಬೇಕು ಎಂದು ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಏಕಬಳಕೆ ಪ್ಲಾಸ್ಟಿಕ್‌ ದೊರೆತರೆ ದಂಡ: ಮೊದಲ ಹಂತದಲ್ಲಿ ಅರಣ್ಯ ಪ್ರದೇಶಕ್ಕೆ ಬರುವ ವಾಹನಗಳಲ್ಲಿನ ಪ್ರಯಾಣಿಕರು ಸ್ವಯಂ ಪ್ರೇರಿತವಾಗಿ ತಮ್ಮ ವಾಹನದಲ್ಲಿರುವ ಏಕಬಳಕೆ ಪ್ಲಾಸ್ಟಿಕ್‌ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕಬೇಕು. ಎರಡನೇ ಹಂತದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ಪ್ರದೇಶ ಪ್ರವೇಶಿಸುವಲ್ಲಿನ ಟೋಲ್‌ ಬಳಿ ವಾಹನಗಳನ್ನು ತಪಾಸಣೆ ಮಾಡಬೇಕು. ಈ ವೇಳೆ ವಾಹನಗಳಲ್ಲಿ ಪ್ಲಾಸ್ಟಿಕ್ ಬಾಟಲಿ, ಮದ್ಯದ ಬಾಟಲಿ ಸೇರಿದಂತೆ ಇನ್ನಿತರ ಏಕ ಬಳಕೆ ಪ್ಲಾಸ್ಟಿಕ್‌ ವಸ್ತುಗಳು ದೊರೆತರೆ ಅದನ್ನು ಕೂಡಲೆ ವಶಕ್ಕೆ ಪಡಬೇಕು ಹಾಗೂ ಅದನ್ನು ಇಟ್ಟುಕೊಂಡ ಪ್ರಯಾಣಿಕರಿಗೆ ದಂಡ ವಿಧಿಸುವ ವ್ಯವಸ್ಥೆ ಜಾರಿ ಮಾಡಬೇಕು ಎಂದು ಖಂಡ್ರೆ ನಿರ್ದೇಶಿಸಿದ್ದಾರೆ.