ತೂಬಗೆರೆಯಲ್ಲಿ ಪಾರಂಪರಿಕ ‘ಭೂತನೆರಿಗೆ’ ಸಂಭ್ರಮ

| Published : Jul 19 2024, 12:47 AM IST

ಸಾರಾಂಶ

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯಲ್ಲಿ ಆಷಾಢ ಏಕಾದಶಿ ಅಂಗವಾಗಿ ಸಾಂಪ್ರದಾಯಿಕ ಭೂತನೆರಿಗೆ ಜಾನಪದ ಆಚರಣೆ ಗುರುವಾರ ಸಂಜೆ ಸಂಭ್ರಮದಿಂದ ಜರುಗಿತು.

-ಆಷಾಢ ಏಕಾದಶಿಯ ಜಾನಪದ ಆಚರಣೆ

-ಭೂತಾವೇಶ ಕಣ್ತುಂಬಿಕೊಂಡ ಸಹಸ್ರಾರು ಜನಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ತಾಲೂಕಿನ ತೂಬಗೆರೆಯಲ್ಲಿ ಆಷಾಢ ಏಕಾದಶಿ ಅಂಗವಾಗಿ ಸಾಂಪ್ರದಾಯಿಕ ಭೂತನೆರಿಗೆ ಜಾನಪದ ಆಚರಣೆ ಗುರುವಾರ ಸಂಜೆ ಸಂಭ್ರಮದಿಂದ ಜರುಗಿತು.

ಉಟ್ಲು ಗೋಪುರದ ಬಳಿಯಿಂದ ತಮಟೆ ವಾದ್ಯಗಳೊಂದಿಗೆ ಆರಂಭವಾದ ಭೂತಗಳ ಆರ್ಭಟ ಊರಿನ ವಿವಿಧೆಡೆ ಸಂಚರಿಸಿ, ಶ್ರೀ ಲಕ್ಷಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ಮುಕ್ತಾಯಗೊಂಡಿತು.

ಕೆಂಚಣ್ಣ ವೇಷಧಾರಿಯಾಗಿ ತೇರಿನಬೀದಿಯ ಕೃಷ್ಣಪ್ಪ, ಕರಿಯಣ್ಣ ವೇಷಧಾರಣೆಯನ್ನು ಶೇಖರ್ ಆವಾಹಿಸಿದ್ದರು. ಕೆಂಚಣ್ಣ - ಕರಿಯಣ್ಣ ಭೂತ ವೇಷಧಾರಿಗಳು ನರಸಿಂಹಸ್ವಾಮಿ ದೇವಾಲಯದಿಂದ ಆರಂಭಗೊಂಡು ಭಕ್ತಾದಿಗಳಿಂದ ಪೂಜೆ ಸ್ವೀಕರಿಸಿ, ಧೂಪ ಹಾಕಿಸಿಕೊಂಡು ಮಂತ್ರ ಪಠಣೆಯಿಂದ ಕೆರಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಈ ಭೂತಾವೇಶವನ್ನು ವೀಕ್ಷಿಸಲು ಸಹಸ್ರಾರು ಜನರು ಆಗಮಿಸಿದ್ದರು.

ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಗ್ರಾಮಗಳು, ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳ ಸಾವಿರಾರು ಜನರೂ ಆಗಮಿಸಿ ಭೂತಗಳ ಆರ್ಭಟ ವೀಕ್ಷಿಸಿದರು.

ಪ್ರತಿ ವರ್ಷ ಆಷಾಢ ಮಾಸದ ಏಕಾದಶಿಯ ಮಾರನೇ ದಿನ ದ್ವಾದಶಿಯಂದು ಪುರಾತನ ಕಾಲದಿಂದಲೂ ತೂಬಗೆರೆ ಗ್ರಾಮದಲ್ಲಿ ಈ ಭೂತನೆರಿಗೆ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ 6 ಶತಮಾನಗಳ ಇತಿಹಾಸವಿದೆ ಎನ್ನುತ್ತಾರೆ. ವಿಷ್ಣುವಿನ ದ್ವಾರಪಾಲಕರಾದ ಜಯ-ವಿಜಯರು ಕಲಿಯುಗದಲ್ಲಿ ಕರಿಯಣ್ಣ-ಕೆಂಚಣ್ಣರಾಗಿ ಪರಿವರ್ತನೆಗೊಂಡಿದ್ದು ಈ ಹಬ್ಬವನ್ನು ಸುಮಾರು 600 ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದಿರುವುದಾಗಿ ಇತಿಹಾಸ ಹೇಳುತ್ತದೆ.

ಗ್ರಾಮದ ಹೊರವಲಯದ ನರಸಿಂಹ ಸ್ವಾಮಿ ದೇವಾಲಯದ ಬಳಿ ಕೋಪಗೊಳ್ಳುವ ಕೆಂಚಣ್ಣ ಕರಿಯಣ್ಣ ಕೈಯಲ್ಲಿ ಭೂತದ ಗುರಾಣಿ ಹಿಡಿದು, ನರ್ತನ ಮಾಡುತ್ತ ಕೈಯಲ್ಲಿನ ಬೆತ್ತವನ್ನು ಬೀಸುತ್ತ ಜನರ ಗುಂಪಿನತ್ತ ನುಗ್ಗಲು ಆರಂಭಿಸುತ್ತವೆ. ಕೋಪಗೊಂಡಿರುವ ಭೂತಗಳನ್ನು ಸಮಾಧಾನಪಡಿಸಲು ಹಲಸಿನ ಹಣ್ಣಿನಿಂದ ತಯಾರಿಸಲಾದ ರಸಾಯನವನ್ನು ಭೂತಗಳಿಗೆ ತಿನ್ನಿಸುತ್ತಾರೆ.

ಗ್ರಾಮದಲ್ಲಿ ಈ ಭೂತ ವೇಷಾಧಾರಣೆ ಮಾಡಿಕೊಂಡು ಸಂಚರಿಸುವುದರಿಂದ ಗ್ರಾಮದಲ್ಲಿ ಯಾವುದೇ ಭೂತ, ಪ್ರೇತ, ಪಿಶಾಚಿಗಳು ಸುಳಿಯುವುದಿಲ್ಲ ಎಂದು ಜನ ನಂಬಿದ್ದಾರೆ. ಕೆಲ ಭಕ್ತರು ಬಾಳೆ ಹಣ್ಣು ಮತ್ತು ತೂಬಗೆರೆ ಗ್ರಾಮದ ವಿಶೇಷ ರೀತಿಯ ಹಲಸಿನ ಹಣ್ಣಿನ ರಸಾಯನವನ್ನು ತಯಾರಿಸಿ ಭೂತ ವೇಷಾಧರಿಗಳು ಜನತೆಯ ಮೇಲೆ ಎರಗಲು ಬಂದಾಗ ರಸಾಯನವನ್ನು ನೀಡುತ್ತಾರೆ. ಅಲ್ಲದೆ ಕೆಲ ಭಕ್ತರು ಕೋಳಿಗಳನ್ನು ನೀಡುತ್ತಾರೆ. ಭೂತಗಳನ್ನು ಶಾಂತಗೊಳಿಸಲು ಬಕೀಟುಗಟ್ಟಲೆ ರಸಾಯವನ್ನು ತಿನ್ನಿಸಲಾಗುತ್ತದೆ .ಕೊನೆಯಲ್ಲಿ ಭೂತ ವೇಷಧಾರಿಗಳು ಕೋಳಿಗಳ ರಕ್ತ ಹೀರುವುದೂ ಉಂಟು. ಭೂತಗಳು ಮನೆಯನ್ನು ಹೊಕ್ಕರೆ ಯಾವುದೇ ಗ್ರಹಕಾಟವಿರುವುದಿಲ್ಲ ಎಂಬುದು ಜನರ ನಂಬಿಕೆಯಾಗಿದೆ.