ಟ್ರಾಫಿಕ್ ಜಾಮ್: ದತ್ತಪೀಠದ ಮಾರ್ಗದಲ್ಲಿ ತಲೆ ಎತ್ತಿರುವ ಅಕ್ರಮ ಟೀ ಸ್ಟಾಲ್‌ಗಳು, ಎಲ್ಲೆಂದರಲ್ಲಿ ನಿಲ್ಲುವ ಜೀಪ್‌ಗಳು,

ಪ್ಯಾಕೇಜ್ ಟೂರಿಸ್ಟ್‌ಗಳಿಗೆ ಓಪನ್ ಶಡ್‌ಗಳಲ್ಲಿ ಊಟ- ತಿಂಡಿ । ಎಲ್ಲೆಂದರಲ್ಲಿ ನಿಲ್ಲುವ ಜೀಪ್‌ಗಳು,ಗಿರಿಯಲ್ಲಿ ರೌಂಡ್ಸ್- 1

ಆರ್. ತಾರಾನಾಥ್

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಗಿರಿಯಲ್ಲಿ ಟ್ರಾಫಿಕ್ ಜಾಮ್ . . . !

- ಕಳೆದ ಒಂದು ದಶಕದ ಹಿಂದೆ ದತ್ತ ಜಯಂತಿಯ ಸಂದರ್ಭದಲ್ಲಿ ಇದನ್ನು ಕೇಳುತ್ತಿದ್ದೆವು. ಆದರೆ, ಇತ್ತೀಚಿನ ವರ್ಷಗಳಲ್ಲಿ ವಾರದ ಕೊನೆಯಲ್ಲಿ ಈ ಮಾತು ಕೇಳಿ ಬರುತ್ತಿತ್ತು. ಆದರೆ, ಇದೀಗ ಪ್ರತಿ ದಿನ ಈ ರೀತಿಯ ಪರಿಸ್ಥಿತಿಯನ್ನು ಗಿರಿ ಪ್ರದೇಶದಲ್ಲಿರುವ ಜನರು ಕಣ್ಣಾರೆ ನೋಡುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಟೂರಿಸಂಗೆ ಪ್ರತ್ಯೇಕ ಪಾಲಿಸಿ ಮಾಡಲಾಗುವುದು ಎಂಬ ಜಿಲ್ಲಾಡಳಿತದ ಮಾತು ಕಾಫಿಯ ನಾಡಿನ ಜನರಿಗೆ ಹಳೆಯ ಡೈಲಾಗ್ ಆಗಿದೆ. ಆಗಾಗ ಇದನ್ನು ಕೇಳಿ ಕೇಳಿ ಇದೀಗ ಕಾಮಿಡಿಯಂತೆ ಆಗಿದೆ. ಕಾರಣ, ಹಿಂದಿನ ಕೆಲವು ವರ್ಷಗಳಿಂದ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಯಾವುದೇ ರೀತಿಯಲ್ಲೂ ಯಶಸ್ವಿ ಪ್ರಯತ್ನ ಮಾಡಲೇ ಇಲ್ಲ. ಒಂದು ಹೆಜ್ಜೆ ಮುಂದಕ್ಕೆ ಇಡುವ ಬದಲಿಗೆ ಹತ್ತು ಹೆಜ್ಜೆ ಹಿಂದಕ್ಕೆ ಇಟ್ಟಿದ್ದೆ ಜಾಸ್ತಿ. ದೃಢವಾದ ನಿರ್ಧಾರ ತೆಗೆದುಕೊಂಡು ಮುಂದೆ ಸಾಗಿದ್ದರೆ ಗಿರಿಯಲ್ಲಿ ಟ್ರಾಫಿಕ್ ಸಮಸ್ಯೆ ಎಂಬುದು ದಿನೇ ದಿನೇ ಹೆಚ್ಚಾಗುತ್ತಿರಲಿಲ್ಲ. ಇಲ್ಲಿಗೆ ಬರುವ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರವಾಸಿಗರ ಸಂಖ್ಯೆಯೂ ಕೂಡ ಅಧಿಕವಾಗುತ್ತಿದೆ. ಅದೇ ರೀತಿಯಲ್ಲಿ ಟ್ರಾಫಿಕ್ ಜಾಮ್‌ ಆಗುವ ಸ್ಥಳಗಳು ಕೂಡ ಹೆಚ್ಚಾಗುತ್ತಿವೆ. ಅಕ್ರಮ ಟೀ ಸ್ಟಾಲ್:

ಈ ಹಿಂದೆ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ ಮಾರ್ಗದಲ್ಲಿ ವಾರದ ಕೊನೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿತ್ತು. ಸಿಂಗಲ್ ರೋಡ್ ಇರುವುದರಿಂದ ಟ್ರಾಫಿಕ್ ಜಾಮ್ ಆಗುವುದು ಸಹಜ ಎನ್ನುವವರೇ ಹೆಚ್ಚು ಮಂದಿ.

ಮುಳ್ಳಯ್ಯನಗಿರಿಯಲ್ಲಿ ವಾಹನಗಳ ದಟ್ಟಣೆ ತಡೆಯಲು ಸೀತಾಳಯ್ಯನಗಿರಿಯಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಿಂದ ಚೆಕ್ ಪೋಸ್ಟ್ ತೆರೆಯಲಾಗಿದೆ. ಮುಳ್ಳಯ್ಯನಗಿರಿಗೆ ಹೋಗಿರುವ ವಾಹನಗಳು ವಾಪಸ್ ಬಂದ ನಂತರವಷ್ಟೇ ಬೇರೆ ವಾಹನಗಳನ್ನು ಬಿಡಲಾಗುತ್ತಿದೆ. ಪ್ರವಾಸಿಗರಿಗೆ ತೊಂದ್ರೆ ಎನಿಸಿದರೂ ಟ್ರಾಫಿಕ್ ಜಾಮ್ ಆಗುವುದನ್ನು ತಡೆಯಲು ಸಾಧ್ಯವಾಗಿದೆ.

ಆದರೆ, ಹೊನ್ನಮ್ಮನಹಳ್ಳದಿಂದ ಝರಿ ಫಾಲ್ಸ್, ಅತ್ತಿಗುಂಡಿ ಸರ್ಕಲ್, ಹಾಲಿ ಡೇ ಹೋಂ ಸ್ಟೇವರೆಗೆ ವಾರದ ಕೊನೆಯಲ್ಲಿ ಮಾತ್ರವಲ್ಲ ಸರಣಿ ರಜೆಗಳ ಸಂದರ್ಭದಲ್ಲೂ ಪ್ರತಿದಿನ ಟ್ರಾಫಿಕ್ ಜಾಮ್ ಆಗಿರುತ್ತದೆ. ಇದಕ್ಕೆ ಕಾರಣ ಒಂದಲ್ಲಾ ಪಟ್ಟಿ ಮಾಡಲು ಹೋದರೆ ಹಲವು ಇವೆ. ಇದಕ್ಕೆ ಯಾರು ಕಾರಣ, ಕಾಫಿ ತೋಟದ ಮಾಲೀಕರೇ, ಹೋಂ ಸ್ಟೇ ಮಾಲೀಕರೇ ಅಥವಾ ಪ್ರವಾಸಿಗರೇ. ಇದನ್ನು ಪ್ರತ್ಯೇಕಿಸಿ ನೋಡುವ ಬದಲಿಗೆ ಇದರಲ್ಲಿ ಎಲ್ಲರ ಪಾತ್ರವೂ ಇದೆ. -- ಬಾಕ್ಸ್ --

ಟ್ರಾಫಿಕ್ ಜಾಮ್‌ಗೆ ಕಾರಣ ಯಾರು ?

1- ಹೊನ್ನಮ್ಮನಹಳ್ಳ, ಝರಿ ಫಾಲ್ಸ್, ಅತ್ತಿಗುಂಡಿಯ ಕನ್ನಡಶಾಲೆ, ಅತ್ತಿಗುಂಡಿ ಸರ್ಕಲ್, ಹೊಯ್ಸಳ ಹೋಂ ಸ್ಟೇಗೆ ಹೋಗುವ ದಾರಿ, ಹಾಲಿ ಡೇ, ಇವುಗಳು ಟ್ರಾಫಿಕ್ ಜಾಮ್ ಆಗುವ ಸ್ಥಳಗಳು.

2- ಹೊನ್ನಮ್ಮನಹಳ್ಳದಿಂದ ಝರಿ ಫಾಲ್ಸ್‌ವರೆಗೆ ರಸ್ತೆಯ ಉದ್ದಕ್ಕೂ ಪ್ರವಾಸಿಗರ ಕಾರ್‌ಗಳು ನಿಂತಿರುತ್ತವೆ. ಕೆಲವೆಡೆ ಎರಡು ಕಡೆ ನಿಂತಿರುತ್ತವೆ. ಹಾಗಾಗಿ ಹೋಗುವ ಮತ್ತು ಬರುವ ವಾಹನಗಳಿಗೆ ತುಂಬಾ ತೊಂದರೆಯಾಗುತ್ತದೆ.

3- ಹೋಂ ಸ್ಟೇಗಳು, ರೇಸಾರ್ಟ್‌ಗಳ ಮಾಲೀಕರು ಕಾಸು ಮಾಡಿಕೊಳ್ಳುತ್ತಿದ್ದಾರೆ. ತಮ್ಮಿಂದ ಪ್ರವಾಸಿಗರಿಗೆ, ಸಾರ್ವಜನಿಕರಿಗೆ ಆಗುವ ತೊಂದರೆಗಳ ಬಗ್ಗೆ ಗಮನ ಹರಿಸುತ್ತಿಲ್ಲ.

4- ಇದೇ ಮಾರ್ಗದಲ್ಲಿ ಕೆಲವೆಡೆ ಹೊಸದಾಗಿ ಟೀ ಸ್ಟಾಲ್‌ಗಳು, ಕೇರಳದಿಂದ ಪ್ಯಾಕೇಜ್ ಟೂರ್‌ನಲ್ಲಿ ಬರುವ ವಿದ್ಯಾರ್ಥಿ ಗಳಿಗೆ ಹಾಗೂ ಪ್ರವಾಸಿಗರಿಗೆ ಊಟ ಮತ್ತು ತಿಂಡಿಗಾಗಿ ಓಪನ್ ಶೆಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲೂ ಕೂಡ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ.

5- ಈ ಶೆಡ್‌ಗಳು ಅಕ್ರಮವಾಗಿ ಕಟ್ಟಲಾಗಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಯಾವುದೇ ಕಟ್ಟಡ ಅಥವಾ ಶೆಡ್‌ಗಳು ನಿರ್ಮಾಣ ಮಾಡುವುದಾದರೆ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯಬೇಕು, ಇವೆಲ್ಲವೂ ಅತ್ತಿಗುಂಡಿ ಗ್ರಾಪಂ ನಿಂದ ಅನುಮತಿ ಪಡೆದಿವೆಯಾ ಎಂಬ ಸಂಶಯದ ಪ್ರಶ್ನೆ ಇದೆ. ಹಾಗೇನಾದರೂ ಅನುಮತಿ ನೀಡಿದ್ದೆಯಾದರೆ, ಸಂಬಂಧಿತರು, ವಾಹನಗಳ ಪಾರ್ಕಿಂಗ್‌ ಮಾಡಿಕೊಳ್ಳಬೇಕಾಗಿತ್ತು. ಆದರೆ, ಅವರಿಗೆ ಸೇರಿರುವ ಜೀಪ್‌ಗಳು ರಸ್ತೆ ಯಲ್ಲಿಯೇ ನಿಂತಿರುತ್ತವೆ. ಟ್ರಾಫಿಕ್ ಜಾಮ್‌ನಿಂದ ಪ್ರವಾಸಿಗರಿಗೆ ಹಾಗೂ ಜನರಿಗೆ ಆಗುತ್ತಿರುವ ಅನಾನೂಕೂಲದ ಹೊಣೆಯನ್ನು ಗ್ರಾಮ ಪಂಚಾಯ್ತಿ ಹೊರ ಬೇಕಾಗುತ್ತದೆ. 10 ಕೆಸಿಕೆಎಂ 1

ದತ್ತಪೀಠದ ಮಾರ್ಗದಲ್ಲಿರುವ ಅತ್ತಿಗುಂಡಿಯ ದೊಡ್ಡಕಲ್ಲು ಬಳಿ ಟ್ರಾಫಿಕ್ ಜಾಮ್ ಆಗಿರುವುದು.

---

10 ಕೆಸಿಕೆಎಂ 2

ಅತ್ತಿಗುಂಡಿಯ ಕನ್ನಡಶಾಲೆ ಬಳಿ ಕೇರಳ ಪ್ರವಾಸಿಗರಿಗೆ ಊಟ ಮತ್ತು ತಿಂಡಿ ವ್ಯವಸ್ಥೆ ಮಾಡಲು ಓಪನ್ ಶೆಡ್ ನಿರ್ಮಾಣ ಮಾಡಿರುವುದು.