ಹಾವೇರಿ: ನಗರದಲ್ಲಿ ಫೆ. 14ರಂದು ನಡೆಯಲಿರುವ ಸರ್ಕಾರದ ಸಾಧನಾ ಸಮಾವೇಶದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಕೆಲವು ರಸ್ತೆ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಿ ಪೊಲೀಸ್ ಇಲಾಖೆ ಬದಲಾಯಿಸಿರುವ ಮಾರ್ಗಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮನವಿ ಮಾಡಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇವಗಿರಿ ಗ್ರಾಮದ ಶಿಬಾರ ವೃತ್ತದಿಂದ ದೇವಗಿರಿ ಯಲ್ಲಾಪುರ ಮಾರ್ಗವಾಗಿ ಇಜಾರಿಲಕಮಾಪುರ ದುಂಡಿ ಬಸವೇಶ್ವರ ದೇವಸ್ಥಾನದ ಕ್ರಾಸ್‌ವರೆಗೆ ಯಾವುದೇ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ, ಹಾವೇರಿ-ದೇವಗಿರಿ ನಡುವೆ ಸಂಚರಿಸುವವರು ಕರ್ಜಗಿ ಮೂಲಕ ಇಲ್ಲವೇ ಕಾಗಿನೆಲೆ ರಸ್ತೆ, ಹಾನಗಲ್ ರಸ್ತೆಗಳ ಬ್ರಿಡ್ಜ್ ಮೂಲಕ ರಾಷ್ಟ್ರೀಯ ಹೆದ್ದಾರಿ ಮೇಲೆ ತೆರಳಿ ದೇವಿಹೊಸೂರ ಕ್ರಾಸ್ ಮೂಲಕ ದೇವಗಿರಿ ಕಡೆಗೆ ತೆರಳಬೇಕು.

ದೈನಂದಿನ ಚಲಿಸುವ ವಾಹನಗಳ ಮಾರ್ಗ: ಹಾವೇರಿ ಶಹರದ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ಕಡೆಗೆ ತೆರಳುವ ಬಸ್‌ಗಳು ಹಾನಗಲ್ ಬ್ರಿಡ್ಜ್ ಮುಖಾಂತರ ರಾಷ್ಟ್ರೀಯ ಹೆದ್ದಾರಿ ಮೂಲಕ ತೆರಳಬೇಕು. ಹುಬ್ಬಳ್ಳಿ ಕಡೆಯಿಂದ ಹಾವೇರಿ ಶಹರಕ್ಕೆ ಬರುವವರು, ಹಾವೇರಿಯಿಂದ ಹುಬ್ಬಳ್ಳಿ ಕಡೆಗೆ ಹೋಗುವ ಖಾಸಗಿ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕು.

ಸಮಾವೇಶಕ್ಕೆ ಆಗಮಿಸುವ ಕೆಎಸ್‌ಆರ್‌ಟಿಸಿ ಬಸ್ ಮಾರ್ಗ: ಹುಬ್ಬಳ್ಳಿ, ಹಾನಗಲ್ ರಸ್ತೆ ಕಡೆಯಿಂದ ಸಮಾವೇಶಕ್ಕೆ ಆಗಮಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾವೇರಿ ಶಹರದ ಹೊರ ಭಾಗದಲ್ಲಿರುವ ದೇವಗಿರಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಬಳಿ ಎಚ್.ಪಿ. ಪೆಟ್ರೋಲ್ ಬಂಕ್ ಹತ್ತಿರ ಇರುವ ಕೆಎಸ್‌ಆರ್‌ಟಿಸಿ ಬಸ್ ಪಾರ್ಕಿಂಗ್ ಸ್ಥಳಕ್ಕೆ ತೆರಳಿ ಸಮಾವೇಶಕ್ಕೆ ಆಗಮಿಸುವವರನ್ನು ಅಲ್ಲಿಯೇ ಇಳಿಸಿ, ಪಾರ್ಕಿಂಗ್ ಮಾಡಬೇಕು.

ಗುತ್ತಲ ಕಡೆಯಿಂದ ಸಮಾವೇಶಕ್ಕೆ ಆಗಮಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾವೇರಿ ಶಹರದ ಸಿದ್ದಪ್ಪ ಸರ್ಕಲ್, ಹಳೆ ಪಿಬಿ ರಸ್ತೆ, ವಾಲ್ಮೀಕಿ ಸರ್ಕಲ್, ಜಿ.ಎಚ್. ಕಾಲೇಜ್ ಮೂಲಕ ಹೋಂಡಾ ಶೋರೂಂ ಎದುರುಗಡೆ ನಿರ್ಮಿಸಿರುವ ಪಾರ್ಕಿಂಗ್ ಸ್ಥಳಕ್ಕೆ ತೆರಳಿ ಸಮಾವೇಶಕ್ಕೆ ಆಗಮಿಸುವವರನ್ನು ಅಲ್ಲಿಯೇ ಇಳಿಸಿ, ಪಾರ್ಕಿಂಗ್ ಮಾಡಬೇಕು. ದಾವಣಗೆರೆ, ರಾಣಿಬೆನ್ನೂರ ಕಡೆಯಿಂದ ಆಗಮಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ನೇರವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ದೇವಗಿರಿ ಬೈಪಾಸ್ ಬ್ರಿಡ್ಜ್ ಕೆಳಗೆ ಇಳಿದು ಬಲಕ್ಕೆ ತಿರುಗಿ ಬ್ರಿಡ್ಜ್ ಪಕ್ಕದಲ್ಲಿರುವ ಅಜ್ಜಯ್ಯನ ಗದ್ದುಗೆ ಹಿಂಭಾಗ ಸರ್ವೀಸ್ ರಸ್ತೆ ಪಕ್ಕದ ಜಮೀನಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಾರ್ಕಿಂಗ್ ಸ್ಥಳಕ್ಕೆ ತೆರಳಿ, ಸಮಾವೇಶಕ್ಕೆ ಆಗಮಿಸುವವರನ್ನು ಅಲ್ಲಿಯೇ ಇಳಿಸಿ, ಪಾರ್ಕಿಂಗ್ ಮಾಡಬೇಕು.


ಕಾರ್, ಬೈಕ್ ಹಾಗೂ ಇತರ ಖಾಸಗಿ ವಾಹನ ಮಾರ್ಗ: ಸಮಾವೇಶಕ್ಕೆ ಹುಬ್ಬಳ್ಳಿ ಕಡೆಯಿಂದ ಬರುವ ಕಾರ್, ಬೈಕ್ ಹಾಗೂ ಇತರ ಖಾಸಗಿ ವಾಹನಗಳು ದೇವಗಿರಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾವೇರಿ ಸರ್ವೀಸ್ ರಸ್ತೆಗೆ ಇಳಿದು ನೇರವಾಗಿ ಅಜ್ಜಯ್ಯನ ಗದ್ದುಗೆ (ಹಳೇ ಪಿ.ಬಿ. ರಸ್ತೆ) ಎದುರು ನಿರ್ಮಿಸಿರುವ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು.

ಹಾನಗಲ್, ಗುತ್ತಲ, ರಾಣಿಬೆನ್ನೂರ, ಕಾಗಿನೆಲೆ ಕಡೆಯಿಂದ ಬರುವ ಕಾರ್ ಹಾಗೂ ಇತರ ಖಾಸಗಿ ವಾಹನಗಳು ಹಾವೇರಿ ಶಹರದ ಹಳೇ ಪಿ.ಬಿ. ರಸ್ತೆ, ಸಿದ್ದಪ್ಪ ವೃತ್ತ, ವಾಲ್ಮೀಕಿ ವೃತ್ತ, ಆರ್‌ಟಿಒ ಕಚೇರಿ ರಸ್ತೆ ಮೂಲಕ ಸ್ಮಾರ್ಟ್ ಮೂವೀಸ್ ಎದುರುಗಡೆ ಹೋಂಡಾ ಶೋರೂಂ ಪಕ್ಕ ನಿರ್ಮಿಸಿರುವ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು. ಸಮಾವೇಶಕ್ಕೆ ಬರುವ ಬೈಕ್‌ಗಳು ಹಾವೇರಿ ಶಹರದ ಹಳೇ ಪಿ.ಬಿ. ರಸ್ತೆ, ಸಿದ್ದಪ್ಪ ವೃತ್ತ, ವಾಲ್ಮೀಕಿ ವೃತ್ತ, ಆರ್‌ಟಿಒ ಕಚೇರಿ ರಸ್ತೆ ಮೂಲಕ ಹೋಂಡಾ ಶೋರೂಂ ಎದುರುಗಡೆ ನಿರ್ಮಿಸಿರುವ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕೆಂದು ತಿಳಿಸಿದರು.

ಬಂದೋಬಸ್ತ್‌ಗೆ ಸಿಬ್ಬಂದಿ ನಿಯೋಜನೆ: ಸಮಾವೇಶದ ಬಂದೋಬಸ್ತಿಗೆ 2 ಎಸ್‌ಪಿ, 6 ಎಎಸ್‌ಪಿ, 21 ಡಿಎಸ್‌ಪಿ, 72 ಪಿಐ/ಸಿಪಿಐ, 162 ಪಿಎಸ್‌ಐ, 220 ಎಎಸ್‌ಐ, ಎಚ್‌ಸಿ-ಪಿಸಿ 1790, ಎಚ್‌ಐ 500, 13 ಡಿಎಆರ್, 12 ಕೆಎಸ್‌ಆರ್‌ಪಿ, 12 ಎಎಸ್‌ಸಿ, 3 ಕ್ಯೂಆರ್‌ಟಿ ನಿಯೋಜನೆ ಮಾಡಲಾಗಿದೆ. ಸಮಾವೇಶಕ್ಕೆ ನಿಯೋಜನೆ ಮಾಡಲ್ಪಟ್ಟ ಎಲ್ಲ ಪಾರ್ಕಿಂಗ್ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು, ಕಂಟ್ರೋಲ್ ರೂಂ ಹಾಗೂ ಕಮಾಂಡ್ ಸೆಂಟರ್ ತೆರೆಯಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಹಾವೇರಿ ಎಸ್ಪಿ ಯಶೋದಾ ವಂಟಗೋಡಿ ಹೇಳಿದರು.