ಧಾರವಾಡ:

ಪ್ರಸ್ತುತ ದಿನಗಳಲ್ಲಿ ವಾಹನ ಸಂಚಾರವು ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ನಿಯಮಗಳ ಪಾಲನೆಯಿಲ್ಲದೆ ಸಂಭವಿಸುವ ಅಪಘಾತಗಳಿಂದ ಅಮೂಲ್ಯ ಜೀವಗಳು ಬಲಿಯಾಗುತ್ತಿರುವುದು ವಿಷಾದಕರ ಎಂದು ಪ್ರಾಚಾರ್ಯ ಡಾ. ಎನ್‌.ಬಿ. ನಾಲತವಾಡ ಹೇಳಿದರು.

​ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಅಂಜುಮನ್‌ ಕಾಲೇಜಿನಲ್ಲಿ ಟ್ರಾಫಿಕ್‌ ಪೊಲೀಸ್‌ ಠಾಣೆ ಆಯೋಜಿಸಿದ್ದ ಟ್ರಾಫಿಕ್ ಜಾಗೃತಿಯ ಅಧ್ಯಕ್ಷತೆ ವಹಿಸಿದ್ದ ಅವರು, ಟ್ರಾಫಿಕ್ ನಿಯಮಗಳು ಕೇವಲ ಕಾನೂನಲ್ಲ. ಅವು ನಮ್ಮ ಜೀವ ರಕ್ಷಣೆಗಾಗಿ ಇರುವ ಸೂತ್ರಗಳು. ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಧರಿಸುವುದು, ವೇಗ ಮಿತಿ ಪಾಲನೆ ಹಾಗೂ ಸಿಗ್ನಲ್‌ ಗೌರವಿಸುವುದು ಹಾಗೂ ಪರವಾನಗಿ, ಇನ್ಸೂರೆನ್ಸ್‌ ನವೀಕರಣ ಪ್ರತಿಯೊಬ್ಬರ ಸುರಕ್ಷತೆಗೆ ಅತ್ಯಂತ ಅಗತ್ಯ ಎಂದರು.

ಟ್ರಾಫಿಕ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ ಮೇಟಿ, ಹೆಡ್ ಕಾನ್ಸ್‌ಟೇಬಲ್ ಶೇಖರ ಹಾದಿಮನಿ, ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಕಡ್ಡಾಯ ಪಾಲನೆ, ನಿಯಮ ಉಲ್ಲಂಘನೆಯಿಂದ ಆಗುವ ದುಷ್ಪರಿಣಾಮ ಹಾಗೂ ಸುರಕ್ಷಿತ ರಸ್ತೆ ಸಂಚಾರದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿಯ ಬಗ್ಗೆ ಮಾತನಾಡಿದರು.

ಕಾಲೇಜಿನ ಡಾ. ತಾಜುನ್ನಿಸ್ಸಾ ಸೈದ್‌, ಪ್ರೊ. ಎನ್.ಎನ್. ಕನಕನೆ, ಸರ್ಫರಾಜ್ ಮಿಶ್ರಿಕೋಟಿ, ಇರ್ಷಾದ್ ಪಟೇಲ್, ಹಜರತ್‌ ಅಲಿ ತೊರ್ಗಲ್ ಇದ್ದರು.