ಸಾರಾಂಶ
ಕಡೂರಿನ ಗೆದ್ಲೇಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ 5ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ಗಳಿಗೆ ತರಬೇತಿ ಉದ್ಘಾಟನೆ । ಪೊಲೀಸ್ ಗೌರವ ರಕ್ಷೆ ಸ್ವೀಕಾರ
ಕನ್ನಡಪ್ರಭ ವಾರ್ತೆ, ಕಡೂರುಜೀವನ ಪಾಠದ ಜೊತೆಗೆ ಶಿಸ್ತನ್ನು ಹೇಳಿಕೊಡುವ ಪೊಲೀಸ್ ತರಬೇತಿಯಲ್ಲಿ ಕಲಿತ ಶಿಕ್ಷಣದಿಂದ ಕಾನೂನು ಸುವ್ಯವಸ್ಥೆ ಯನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತರಬೇತಿ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ಕುಮಾರ್ ಹೇಳಿದರು.
ಬುಧವಾರ ಕಡೂರು ತಾಲೂಕಿನ ಗೆದ್ಲೇಹಳ್ಳಿ ಸಮೀಪದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಪೊಲೀಸ್ ಗೌರವ ರಕ್ಷೆ ಸ್ವೀಕರಿಸಿ 5ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ರವರ ಬುನಾದಿ ತರಬೇತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ತರಬೇತಿ ಶಿಕ್ಷಣದಲ್ಲಿ ಸ್ಥಳೀಯ ಪೊಲೀಸ್ ಇಲಾಖೆ ಜೊತೆ ಸಮನ್ವಯತೆ ಕಾಯ್ದುಕೊಂಡಲ್ಲಿ ಸ್ಥಳೀಯ ಸಮಸ್ಯೆಗಳು ಅರ್ಥವಾಗುತ್ತದೆ. ಇದರಿಂದ ವಾಸ್ತವ ಚಿತ್ರಣ ಸಮರ್ಪಕವಾಗಿ ಸಿಗುತ್ತದೆ ಎಂದು ತಿಳಿಸಿದರು.ಆಧುನಿಕ ಪ್ರಪಂಚದ ವಿದ್ಯಮಾನಗಳ ಬಗ್ಗೆ ಹೆಚ್ಚು ಗಮನಕೊಡಲು ಈ ತರಬೇತಿ ಸಹಕಾರಿಯಾಗಲಿದೆ. ವೃತ್ತಿ ಯಲ್ಲಿ ಸಂವಿಧಾನ ಮುಖ್ಯವಾಗಲಿದೆ. ಇದಕ್ಕೆ ಜಿಲ್ಲೆಯ ಪೊಲೀಸ್ ಇಲಾಖೆ ಅಧಿಕಾರಿಗಳು ತರಬೇತಿ ಕೇಂದ್ರದಲ್ಲಿ ಒಂದಷ್ಟು ಸಮಯ ಪ್ರಶಿಕ್ಷಣಾರ್ಥಿಗಳಿಗೆ ಸಂವಾದದ ಮೂಲಕ ಮಾಹಿತಿ ನೀಡಿದರೆ ಹೆಚ್ಚು ಪ್ರಯೋಜನವಾಗಲಿದೆ ಎಂದರು.
ಪ್ರಶಿಕ್ಷಣಾರ್ಥಿಗಳು ತರಬೇತಿ ಸಮಯದಲ್ಲೆ ಪರಿಪೂರ್ಣ ಮಾಹಿತಿ ಪಡೆದರೆ ಉತ್ತಮವಾಗಿ ವೃತ್ತಿಪರ ಜೀವನದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರತಿಯೊಂದು ವಿಷಯ ಅರ್ಥಮಾಡಿಕೊಂಡು ಅಭ್ಯಾಸ ಮಾಡಿದರೆ ಜ್ಞಾನದ ಮಟ್ಟ ಹೆಚ್ಚಾಗುತ್ತದೆ. ಶಿಸ್ತು ಮತ್ತು ಸಮಯ ಪಾಲನೆಗೆ ಹೆಚ್ಚು ಮಹತ್ವ ನೀಡಿದಾಗ ಉತ್ತಮ ಗುರಿ ತಲುಪಲು ಸಾಧ್ಯ. ಸಮಯ ವನ್ನು ಯಾರೂ ವ್ಯರ್ಥ ಮಾಡದೆ ಶ್ರಮವಹಿಸಿ ತರಬೇತಿಯಲ್ಲಿ ಪರಿಪೂರ್ಣವಾಗಿ ಕಲಿಯಬೇಕು. ಕಂಪ್ಯೂಟರ್, ಅಂತರ್ಜಾಲದ ಜ್ಞಾನಕ್ಕೆ ಹೆಚ್ಚು ಒತ್ತು ನೀಡಿದಲ್ಲಿ ಸೈಬರ್ ಪ್ರಕರಣಗಳ ಬಗ್ಗೆ ನಿಗಾವಹಿ, ಬೇಧಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ಮಾಡಿದರು.ಕರ್ನಾಟಕದ ಪೊಲೀಸ್ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳಿಗೆ ವೇತನ ಸಹಿತ ತರಬೇತಿ ನೀಡುತ್ತಿರುವ ರಾಜ್ಯ ಸರ್ಕಾರದ ಔದಾರ್ಯ. ಇದಕ್ಕೆ ಕೃತಜ್ಞರಾಗಿರಬೇಕು. ಸರಕಾರ ಎಲ್ಲ ಸವಲತ್ತು ನೀಡುವ ಜೊತೆಗೆ ಕಾನೂನು ವ್ಯವಸ್ಥೆಗೆ ಬುನಾದಿ ಹಾಕಲು ತರಬೇತಿಗಳಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದರು. ದಕ್ಷಿಣದ ತೆಲಂಗಾಣ ಸೇರಿದಂತೆ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಉತ್ತಮ ತರಬೇತಿ, ಸೌಲಭ್ಯವಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಮಾತನಾಡಿ, ಕಾನೂನು ಪರಿಪಾಲನೆಗೆ ತರಬೇತಿ ಶಿಕ್ಷಣ ಬಹು ಮುಖ್ಯವಾಗಲಿದೆ. ಇಲ್ಲಿ ಕಲಿತ ಪ್ರಶಿಕ್ಷಣಾರ್ಥಿಗಳು ಇಲಾಖೆಯಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಲು ಸಾಧ್ಯವಾಗುತ್ತದೆ. ಉತ್ತಮ ಕ್ಯಾಂಪಸ್ ಹೊಂದಿರುವ ತರಬೇತಿ ಕೇಂದ್ರ ಸೌಲಭ್ಯಗಳ ಕೊರತೆ ಇಲ್ಲದಂತೆ ಸುಸಜ್ಜಿತ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿದೆ. ತರಬೇತಿಯಲ್ಲಿ ಒಳಾಂಗಣ ಮತ್ತು ಹೊರಾಂಗಣ ಎರಡು ಮುಖ್ಯವಾಗಲಿದೆ ಎಂದರು. ಈ ಸಂದರ್ಭದಲ್ಲಿ ಮಾದರಿ ಪೊಲೀಸ್ ಠಾಣೆಯನ್ನು ಉದ್ಘಾಟಿಸಲಾಯಿತು. ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲ ಪಿ.ಪಾಪಣ್ಣ ತರಬೇತಿ ಕೇಂದ್ರದಲ್ಲಿ 480 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆಯುತ್ತಿರುವ ಬಗ್ಗೆ ಪ್ರಾಸ್ತಾವಿಕ ವರದಿ ಮಂಡಿಸಿದರು. ಡಿವೈಎಸ್ಪಿ ಹಾಲುಮೂರ್ತಿರಾವ್ ಹಾಗೂ ಸತ್ಯನಾರಾಯಣ್, ತರಬೇತಿ ಕೇಂದ್ರದ ಪಿಎಸೈಗಳು, ಪ್ರಶಿಕ್ಷಣಾರ್ಥಿಗಳು ಇದ್ದರು.12ಕೆಕೆಡಿಯು1.ಕಡೂರು ತಾಲೂಕಿನ ಗೆದ್ಲೇಹಳ್ಳಿ ಸಮೀಪದ ಪೊಲೀಸ್ ತರಬೇತಿ ಕೇಂದ್ರದಲ್ಲಿ 5ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ಗಳ ತರಬೇತಿಯನ್ನು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ಕುಮಾರ್ ಉದ್ಘಾಟಿಸಿದರು. ಡಾ. ವಿಕ್ರಮ ಅಮಟೆ, ಪಿ.ಪಾಪಣ್ಣ ಇದ್ದರು.