ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಹೆಚ್ಚಿನದ್ದಾಗಿತ್ತು. ಆ ನಿಟ್ಟಿನಲ್ಲಿ ಸಹಕಾರ ಸಂಘಗಳ ಬಲವರ್ಧನೆಗೆ ಮತ್ತಷ್ಟು ಪ್ರಯತ್ನಗಳು ನಡೆಯಬೇಕು ಎಂದು ಕೊಡಂದೇರ ಬಾಂಡ್‌ ಗಣಪತಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಹೆಚ್ಚಿನದ್ದಾಗಿದ್ದು, ಆ ನಿಟ್ಟಿನಲ್ಲಿ ಸಹಕಾರ ಸಂಘಗಳ ಬಲವರ್ಧನೆಗೆ ಮತ್ತಷ್ಟು ಪ್ರಯತ್ನಗಳು ನಡೆಯಬೇಕು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷರಾದ ಕೊಡಂದೇರ ಬಾಂಡ್ ಗಣಪತಿ ಅವರು ತಿಳಿಸಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರಿಗೆ ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ‘ಉನ್ನತಿ’ ಭವನದ ಸಭಾಂಗಣದಲ್ಲಿ ‘ಸಹಕಾರ ಸಂಘಗಳ ಆಡಳಿತ ಪರಿಣಾಮಕಾರಿ ನಿರ್ವಹಣೆ’ ಸಂಬಂಧ ಒಂದು ವಾರಗಳ ಕಾಲ ನಡೆದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಗುಣಾತ್ಮಕ ಆಡಳಿತ ನಿರ್ವಹಣೆ ಅಗತ್ಯ. ಆ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಕಲಿಕೆ ನಿರಂತರ: ಸಹಕಾರ ವ್ಯವಸ್ಥೆಯಲ್ಲಿ ಕಲಿಕೆಯು ನಿರಂತರವಾಗಿದ್ದು, ಸಾಲದ ಪ್ರಕ್ರಿಯೆ ಮತ್ತು ಮಾರ್ಗಸೂಚಿಗಳು ಕಾಲ ಕಾಲಕ್ಕೆ ಬದಲಾಗುತ್ತಾ ಹೋಗುತ್ತವೆ. ಆದ್ದರಿಂದ ಸಹಕಾರ ಕಾಯ್ದೆ ಮತ್ತು ತಿದ್ದುಪಡಿ ಬಗ್ಗೆ ಮನನ ಮಾಡಿಕೊಳ್ಳಬೇಕು ಎಂದು ಬಾಂಡ್ ಗಣಪತಿ ಅವರು ಸಲಹೆ ಮಾಡಿದರು. ಸಹಕಾರ ಕಾಯ್ದೆಗಳು, ಕಾನೂನುಗಳನ್ನು ತಿಳಿದುಕೊಂಡಲ್ಲಿ ಸಹಕಾರ ಸಂಘಗಳನ್ನು ಇನ್ನಷ್ಟು ಉತ್ತಮ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ. ಇದರಿಂದ ಕೃಷಿಕರಿಗೆ ಸಹಕಾರ ಸಂಘದ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲೆಯ 74 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಒಳಗೊಂಡಂತೆ 518 ಜನ ನಿರ್ದೇಶಕರು ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದರು. ಕೊಡಗು ಜಿಲ್ಲೆಯ ಡಿಸಿಸಿ ಬ್ಯಾಂಕಿನ ನಿರಂತರ ಪ್ರಯತ್ನದಿಂದ ಸಹಕಾರ ಸಂಘಗಳಲ್ಲಿ ಷೇರಿನ ಮೊತ್ತವನ್ನು ಹೆಚ್ಚಿಸುವಲ್ಲಿ ಬೈಲಾ ತಿದ್ದುಪಡಿ ಮಾಡಲಾಗಿದೆ. ಇದು ಸಹಕಾರ ಸಂಘಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಬಾಂಡ್ ಗಣಪತಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ‘ಸಹಕಾರ ಹೊಸ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಲಾಗಿದ್ದು, ಈ ಸಂಬಂಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗುತ್ತದೆ. ಈ ಸಂಬಂಧ ಇನ್ನೂ ಸಹ ಕಾನೂನು ಜಾರಿಯಾಗದಿರುವ ಹಿನ್ನೆಲೆ ಹೈಕೋರ್ಟ್ಗೆ ದಾವೆ ಹೂಡಿಲ್ಲ ಎಂದು ಬಾಂಡ್ ಗಣಪತಿ ಅವರು ತಿಳಿಸಿದರು. ಸಹಕಾರ ಇಲಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರವಣ ಕುಮಾರ್ ಅವರು ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದ್ದು, ಸದೃಢವಾಗಿದೆ ಎಂದರು. ಶ್ಲಾಘನೀಯ ಕಾರ್ಯವಾಗಿದೆ:

ಕೊಡಗು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಹೊಸ ಹೊಸ ಕಲ್ಪನೆಗಳು ಆಧುನಿಕತೆಗೆ ಹೊಂದಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತೊರೆನೂರು ಸಹಕಾರ ಸಂಘದ ನಿರ್ದೇಶಕರಾದ ಕೃಷ್ಣೇಗೌಡ ಅವರು ಮಾತನಾಡಿ ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ನೂತನವಾಗಿ ಜಾರಿಗೊಳಿಸಲು ಉದ್ದೇಶಿಸಿರುವ ಕಾಯ್ದೆಯು ಕೃಷಿಕರಿಗೆ ಮರಣ ಶಾಸನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಹಕಾರ ಸಂಘಗಳಿಗೆ ಸರ್ಕಾರದಿಂದ ಹಣಕಾಸಿನ ನೆರವು ನೀಡುವಂತಾಗಬೇಕು. ಯಾವುದೇ ಕಾರಣಕ್ಕೂ ಸಹಕಾರ ಸಂಘಗಳ ಮೇಲೆ ಗದಪ್ರಹಾರ ಮಾಡಬಾರದು ಎಂದು ಅವರು ಒತ್ತಿ ಹೇಳಿದರು. ಜನರಿಗೆ ಅನುಕೂಲವಾಗಿದೆ:

ಸಹಕಾರ ಸಂಘಗಳನ್ನು ಉಳಿಸಬೇಕು ಮತ್ತು ಬೆಳೆಸಬೇಕು. ಇವು ಕೃಷಿಕರಿಗೆ, ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಿದೆ ಎಂದು ಕೃಷ್ಣೇಗೌಡ ಅವರು ನುಡಿದರು. ಅಪೆಕ್ಸ್ ಬ್ಯಾಂಕಿನ ಕೃಷಿ ಸಹಕಾರಿ ಸಿಬ್ಬಂದಿ ತರಬೇತಿ ಸಂಸ್ಥೆಯ ಬೋಧಕರಾದ ಗುರುಸ್ವಾಮಿ ಅವರು ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಅನ್ವಯವಾಗುವ ಸಹಕಾರ ಕಾಯ್ದೆ 1959 ಮತ್ತು ನಿಯಮಗಳು 1960 ಹಾಗೂ ಸಹಕಾರ ಕಾಯ್ದೆ ಮತ್ತು ನಿಯಮಗಳಲ್ಲಾದ ಇತ್ತೀಚಿನ ಬದಲಾವಣೆಗಳು ವಿಷಯದ ಬಗ್ಗೆ ವಿವರಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ನಡೆಸಬಹುದಾದ ವಿವಿಧ ಪ್ರಕಾರದ ಸಭೆಗಳು ಮತ್ತು ಕಾರ್ಯವಿಧಾನ, ಸಾಮಾನ್ಯ ಸಭೆ, ವಿಶೇಷ ಸಾಮಾನ್ಯ ಸಭೆ, ಆಡಳಿತ ಮಂಡಳಿ ಸಭೆ ಮತ್ತಿತರ ಕುರಿತು ಮಾಹಿತಿ ನೀಡಿದರು. ಬೋಧಕರಾದ ಆದಪ್ಪ ಅವರು ಉತ್ತಮ ಗುಣಾತ್ಮಕ ಆಡಳಿತ ನಿರ್ವಹಣೆಯ ಸೂತ್ರಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವ್ಯಾಪಾರ ಅಭಿವೃದ್ಧಿಯಲ್ಲಿ ಹಾಗೂ ಬೆಳವಣಿಗೆಯಲ್ಲಿ ನಿರ್ದೇಶಕರ ಪಾತ್ರ ಮತ್ತು ಹೊಣೆಗಾರಿಕೆಗಳು ವಿಷಯದ ಬಗ್ಗೆ ಮಾಹಿತಿ ನೀಡಿದರು.

ಬ್ಯಾಂಕಿನ ವೃತ್ತಿಪರ ನಿರ್ದೇಶಕರು ಹಾಗೂ ಶಾಸನ ಬದ್ಧ ಲೆಕ್ಕಪರಿಶೋಧಕರಾದ ಎ.ಗೋಪಾಲಕೃಷ್ಣ ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಶಾಸನ ಬದ್ಧ ಲೆಕ್ಕ ಪರಿಶೋಧನೆಯಲ್ಲಿ ನಿರ್ದೇಶಕರ ಪಾತ್ರ ಹಾಗೂ ಜಿಎಸ್‌ಟಿ, ಟಿಡಿಎಸ್ ಆದಾಯ ತೆರಿಗೆ ಇತ್ಯಾದಿ ವಿಷಯಗಳ ಬಗ್ಗೆ ವಿವರ ನೀಡಿದರು. ಕಡಂಗ ಸಹಕಾರ ಸಂಘದ ನಿರ್ದೇಶಕರಾದ ಕೆ.ಎಂ.ತಮ್ಮಯ್ಯ ಮಾತನಾಡಿ, ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ಸಹಕಾರಿಗಳ ಪಾತ್ರ ಕುರಿತು ಗಮನ ಸೆಳೆದರು. ತರಬೇತಿಯಲ್ಲಿ ಭಾಗವಹಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಎಲ್ಲಾ ನಿರ್ದೇಶಕರಿಗೆ ಬ್ಯಾಂಕಿನ ವತಿಯಿಂದ ತರಬೇತಿ ಪ್ರಮಾಣ ಪತ್ರವನ್ನು ನೀಡಲಾಯಿತು.ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಕೇಟೋಳಿರ ಎಸ್.ಪೂವಯ್ಯ, ನಿರ್ದೇಶಕರಾದ ಪೂಳಂಡ ಪಿ.ಪೆಮ್ಮಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ.ರವಿಕುಮಾರ್, ಡಿಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಭೋಜಮ್ಮ, ಇತರರು ಇದ್ದರು.