ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಾಗನಹಳ್ಳಿಯ ಕೃಷಿ ವಿಸ್ತರಣಾ ಶಿಕ್ಷಣ ಘಟಕವು ತಾಲೂಕಿನ ಜಯಪುರ ಗ್ರಾಮದಲ್ಲಿ ಅಣಬೆ ಬೇಸಾಯ ತಾಂತ್ರಿಕತೆ ಹಾಗೂ ಪೌಷ್ಟಿಕ ಕೈತೋಟದ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಜಯಪುರ ಗ್ರಾಪಂ ಮಾಜಿ ಅಧ್ಯಕ್ಷೆ ಮಹದೇವಮ್ಮ ಉದ್ಘಾಟಿಸಿದರು. ತೋಟಗಾರಿಕೆ ಇಲಾಖೆ ಸಹಾಯಕ ಪ್ರಾಧ್ಯಾಪಕ ಶಿವಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ರೈತರಿಗೆ ಅಣಬೆ ಬೇಸಾಯದ ಪ್ರಾಮುಖ್ಯತೆ, ಬೇಸಾಯ ಕ್ರಮಗಳ ತಾಂತ್ರಿಕತೆ ಹಾಗೂ ಹಾಗೂ ಅಣಬೆಯ ಮಾರುಕಟ್ಟೆ ಬಗ್ಗೆ ಹೆಚ್ಚಿಿನ ಮಾಹಿತಿ ಬೇಕಾಗುತ್ತದೆ. ಗ್ರಾಮದಲ್ಲಿ ಮಹಿಳೆಯರು ಸ್ವಸಹಾಯ ಗುಂಪುಗಳನ್ನು ಮಾಡಿಕೊಂಡು ಸ್ವಯಂ ಉದ್ಯೋಗ ಮಾಡುವುದರಿಂದ ಸ್ವಂ ಉದ್ಯೋಗ ಸೃಷ್ಟಿಸಿಕೊಂಡು ಆದಾಯ ವೃದ್ಧಿಮಾಡಿಕೊಳ್ಳಬಹುದು ಎಂದು ತಿಳಿಸಿದರು.ಚಿಪ್ಪು ಅಣಬೆ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳಿಗೆ ತಗಲುವ ವೆಚ್ಚ ಕಡಿಮೆ ಇದ್ದು, ಇದನ್ನು ಉತ್ಪಾದಿಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.ಚಿಪ್ಪು ಅಣಬೆಯು ಕಡಿಮೆ ಪ್ರಮಾಣದ ಕ್ಯಾಲೋರಿಯನ್ನು ಒಳಗೊಂಡಿದೆ. ಇದು ದೇಹದ ಆರೋಗ್ಯ ಸುಧಾರಣೆಗೆ ಸಹಾಯ ಮಾಡುವುದು. ಆರೋಗ್ಯ ಪ್ರಜ್ಞೆ ಮತ್ತು ತೂಕ ಕಡಿಮೆ ಮಾಡಿಕೊಳ್ಳುವ ಹವಣಿಕೆಯಲ್ಲಿ ಇರುವವರು ಅಣಬೆಯನ್ನು ತಪ್ಪದೆ ಸೇವಿಸಬೇಕು. ಅಣಬೆ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತದೆ. ಅಣಬೆಯು ಅಧಿಕ ಪ್ರಮಾಣದ ಪ್ರೊಟೀನ್ ಗಳಿಂದ ಕೂಡಿದೆ. ಇದು ದೇಹದಲ್ಲಿ ಇರುವ ಕೊಬ್ಬನ್ನು ಸುಲಭವಾಗಿ ಕರಗಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.ಅಣಬೆಯಲ್ಲಿರುವ ಗುಣಮಟ್ಟದ ಕಬ್ಬಿಣಾಂಶವು ರಕ್ತಹೀನತೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ ಅಣಬೆ ಮಾರುಕಟ್ಟೆಯ ವಿಫುಲ ಅವಕಾಶ ಬಗ್ಗೆ ಮತ್ತು ಅಣಬೆಯನ್ನು ಸಂಸ್ಕರಿಸುವ ಮತ್ತು ಶೇಖರಣೆ ಮಾಡುವ ವಿವಿಧ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಿದರು. ಅಲ್ಲದೇ ಅಣಬೆ ಬೇಸಾಯದ ಕ್ರಮಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.ಪೌಷ್ಟಿಕ ಕೈತೋಟದ ಬಗ್ಗೆ ಮಾಹಿತಿ ನೀಡುತ್ತಾ, ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯ ಯಾವುದು ಇಲ್ಲ. ಪೌಷ್ಟಿಕ ಆಹಾರ ಸೇವನೆಯು ದೈನಂದಿನ ಚಟುವಟಿಕೆಗೆ ಸಮರ್ಪಕ ಶಕ್ತಿ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪೌಷ್ಟಿಕಾಂಶ ಇರುವ ಆಹಾರದಲ್ಲಿ ಸಮರ್ಪಕ ಪ್ರಮಾಣದಲ್ಲಿ ಜೀವಸತ್ವಗಳು, ಪ್ರೋಟೀನ್, ಶರ್ಕರ ಪಿಷ್ಟಗಳು ಹಾಗೂ ಖನಿಜಾಂಶಗಳಿರಬೇಕು. ಪೌಷ್ಟಿಕ-ಕೈತೋಟದಲ್ಲಿ ಬೆಳೆದ ಉತ್ಪನ್ನಗಳನ್ನು ಕೊಯ್ಲು ಮತ್ತು ಬಳಕೆಯ ಸಮಯದ ಅಂತರ ಕಡಿಮೆಯಾಗಿರುವ ಕಾರಣ ಉತ್ತಮ ದರ್ಜೆಯಾಗಿದ್ದು ಪೋಷಕಾಂಶಗಳು ಪೋಲಾಗುವುದಿಲ್ಲ. ಇದರಿಂದ ಪೌಷ್ಟಿಕ ಆಹಾರದ ಸಮಸ್ಯೆ ನಿವಾರಿಸಬಹುದು ಎಂದರು.ಅಲ್ಲದೆ ಬಿಡುವಿನ ವೇಳೆಗಳಲ್ಲಿ ಇಂತಹ ಕೈತೋಟದ ಕೆಲಸಗಳಲ್ಲಿ ನಿರತರಾಗುವುದರಿಂದ ಕುಟುಂಬದ ಸದಸ್ಯರೆಲ್ಲರೂ ಒಳ್ಳೆಯ ಅಭಿರುಚಿಯಿಂದ ಭಾಗಿಗಳಾಗಬಹುದು, ಸಸಿಮಡಿ, ನೀರಾವರಿ, ಕೊಯ್ಲು, ಇತ್ಯಾದಿ ಬೇಸಾಯದ ಕ್ರಮಗಳನ್ನು ಶ್ರದ್ಧೆಯಿಂದ ಮಾಡಲು ಸಾಧ್ಯವಾಗುತ್ತದೆ. ಪೌಷ್ಟಿಕ-ಕೈತೋಟದಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ಬೇರೆ ಬೇರೆಯಾಗಿ ಅಥವಾ ಒಟ್ಟುಗೂಡಿಸಿ ಬೆಳೆಯಬಹುದು. ಆದ್ದರಿಂದ ಬೇಸಾಯವನ್ನು ಲಾಭದಾಯಕವಾಗಿರಿಸಲು ಬಹಳ ಸಮಗ್ರ ರೀತಿಯಲ್ಲಿ ರೂಪಿಸುವುದು ಮುಖ್ಯ ಎಂದರು.ಪುಷ್ಪಾಮೇರಿ, ಓಡಿಪಿ ಕಾರ್ಯಕರ್ತರು ಇದ್ದರು. ಡಿ.ಸಿ. ಪ್ರಜ್ವಲ್ ಇದ್ದರು.