ಕನ್ನಡಪ್ರಭ ವಾರ್ತೆ ವಿಜಯಪುರ

ತಂತ್ರಜ್ಞಾನ ಆಧಾರಿತ ನಿಖರ ಮಾಹಿತಿ ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ದೃಷ್ಟಿಯಿಂದ ಸುಧಾರಿತ ಕೆ-ಜಿಐಎಸ್ 2.0 ತಾಂತ್ರಿಕ ಸೇವೆಯಯನ್ನು ಸರ್ಕಾರದ 10ಕ್ಕೂ ಅಧಿಕ ಇಲಾಖೆಗಳಲ್ಲಿ ಬಳಕೆ ಮಾಡಿಕೊಳ್ಳಲು ತರಬೇತಿ ನೀಡಲಾಗುತ್ತಿದೆ ಎಂದು ಕೆಎಸ್‌ಆರ್‌ಎಸ್‌ಎಸಿ, ಡಿಪಿಎಆರ್ ನಿರ್ದೇಶಕ ರಾಜೇಶ.ಎನ್.ಎಲ್ ಹೇಳಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮ ಪಂಚಾಯತಿ, ತಾಲೂಕು ಆಡಳಿತ, ಜಿಲ್ಲಾಡಳಿತ ಸೇರಿದಂತೆ ಎಲ್ಲ ಇಲಾಖೆಗಳು ಹೈ ರೇಜಿಲ್ಯೂಷನ್ ಚಿತ್ರಗಳನ್ನು ಬಳಸಿಕೊಂಡು ನಿಖರವಾದ ಮಾಹಿತಿ ಕಲೆಹಾಕಬಹುದಾಗಿದ್ದು, ಕೃಷಿ ಇಲಾಖೆ ಸರ್ವೇ ಕಾರ್ಯಗಳಲ್ಲಿ, ಬೆಳೆ ಹಾನಿ ಪರಿಹಾರ ನೀಡುವಾಗ ಆ ಜಮೀನಿನಲ್ಲಿ ಅದೇ ಬೆಳೆಯನ್ನು ಬಿತ್ತಲಾಗಿದೆಯೇ ಎನ್ನುವುದನ್ನು ಉಪಗ್ರಹ ಆಧಾರಿತ ಸರ್ಕಾರಿ ಅಪ್ಲಿಕೇಶನ್ ಮೂಲಕ ತಿಳಿದುಕೊಳ್ಳಬಹುದಾಗಿದೆ ಎಂದರು. ಯಾವುದೇ ಸರ್ಕಾರಿ ಕಾಮಗಾರಿಗಳ ಪ್ರಗತಿಯನ್ನು ಹಾಗೂ ಲಭ್ಯವಿರುವ ಸ್ಥಾಳಾವಕಾಶದ ಮಾಹಿತಿಯನ್ನು ನಿಖರವಾಗಿ ಅಳತೆ ಮಾಡಿಕೊಳ್ಳಬಹುದಾಗಿದೆ. ಸರ್ಕಾರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಾಗ ಮತ್ತೊಂದು ಹಾಸ್ಟೇಲ್ ನಿರ್ಮಾಣ ಮಾಡಲು ಸ್ಥಳ ಹಾಗೂ ಅದು ಎಷ್ಟು ಸೂಕ್ತವಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.ಸರ್ಕಾರದ ನೆಟ್‌ವರ್ಕ್‌ನಲ್ಲಿ ಒಟ್ಟು 251 ಅಪ್ಲಿಕೇಶನ್‌ಗಳನ್ನು ಸಿದ್ಧಪಡಿಸಲಾಗಿದ್ದು, ಪ್ರಸ್ತುತ 101 ಅಪ್ಲಿಕೇಶನ್‌ಗಳು ಜೀಯೋಗ್ರಾಫಿಕಲ್ ಸಿಸ್ಟಮ್ ಬಳಸಿಕೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟಗಳಲ್ಲಿ ಕೆ-ಜಿಐಎಸ್ 2.0 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಜಿಲ್ಲಾಡಳಿತ ವಿಜಯಪುರ ಸಹಯೋಗದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 41 ಮೊಬೈಲ್ ಅಪ್ಲಿಕೇಶನ್‌ಗಳು ಹಾಗೂ 60 ವೆಬ್ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿವೆ. ಒಟ್ಟು 600 ಟೆರಾ ಬೈಟ್‌ನಷ್ಟು ಡೇಟಾ ನಮ್ಮಲ್ಲಿ ಸೇವ್ ಮಾಡಲಾಗಿದೆ. ಇಲ್ಲಿ ಮೈನ್ಸ್ ಹೇಗಿದೆ ಹಾಗೂ ಎಷ್ಟು ರಾಯಲಿಟಿ ಕಟ್ಟಬೇಕು. ಎಷ್ಟು ಕೃಷಿ ಕಾರ್ಯಕ್ರಮಗಳು ನಡೆಯುತ್ತಿವೆ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ. ಡಿಜಿಟಲ್ ವ್ಯವಸ್ಥೆಯಲಲ್ಲಿ 30-40 ವರ್ಷಗಳ ಹಿಂದೆ ಲೋ ರೇಜಲ್ಯೂಷನ್ ಇತ್ತು. ಈಗ ಹೈ ರೆಜಲ್ಯೂಷನ್ ವ್ಯವಸ್ಥೆ ಇದೆ. ಆದ್ದರಿಂದ ಎಲ್ಲವನ್ನು ಸರಿಯಾಗಿ ಲೆಕ್ಕ ಹಾಕಲು ಸಾಧ್ಯವಿದೆ ಎಂದರು.ಹಂತ-ಹಂತವಾಗಿ ಇನ್ನಷ್ಟು ಟೆಕ್ನಾಲಜಿ ಅಭಿವೃದ್ಧಿ ಮಾಡುವ ಪ್ರಯತ್ನದಲ್ಲಿದ್ದೇವೆ. ಗ್ರಾಮ ಪಂಚಾಯತಿಯಿಂದ ಹಿಡಿದು ತಾಲೂಕು ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಕೆ-ಜಿಐಎಸ್ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ವಿವರಿಸಿದರು.