ಮುಂದಿನ ಪೀಳಿಗೆಗೆ ಭಾಷೆ ವರ್ಗಾಯಿಸಿ; ರಿಷಬ್‌

| Published : Aug 18 2024, 01:53 AM IST

ಮುಂದಿನ ಪೀಳಿಗೆಗೆ ಭಾಷೆ ವರ್ಗಾಯಿಸಿ; ರಿಷಬ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಅರಮನೆ ಮೈದಾನದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ‘ಕುಂದಾಪ್ರ ಕನ್ನಡ ಹಬ್ಬ’ದ ಉದ್ಘಾಟನಾ ಕಾರ್ಯಕ್ರಮವನ್ನು ನಟ ನಿರ್ದೇಶಕ ರಿಷಬ್‌ ಶೆಟ್ಟಿ ಉದ್ಘಾಟನೆ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಎಷ್ಟೇ ಎತ್ತರಕ್ಕೇರಿದರೂ ನಮ್ಮ ನೆಲಮೂಲ ಮರೆಯಬಾರದು. ಹಿರಿಯರ ಹಾದಿ, ಭಾಷೆ- ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯಗಳು ಆಗಬೇಕು’ ಎಂದು ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.

ಶನಿವಾರ ಬೆಂಗಳೂರು ಅರಮನೆ ಮೈದಾನದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ‘ಕುಂದಾಪ್ರ ಕನ್ನಡ ಹಬ್ಬ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ದಂಪತಿ ಸಮೇತ ‘ಊರ ಗೌರವ’ ಪ್ರಶಸ್ತಿ ಸ್ವೀಕರಿಸಿ ಕುಂದಾಪುರ ಕನ್ನಡದಲ್ಲಿ ಮಾತನಾಡಿದರು.

‘ಕುಂದಾಪುರ ಭಾಷೆ ನಮ್ಮ ಬದುಕು. ಹೊಸ ಪೀಳಿಗೆ ಸಂಸ್ಕೃತಿಯಿಂದ ದೂರ ಉಳಿಯುತ್ತಿದೆ. ನಮಗೆ ರಾಮಾಯಣ, ಮಹಾಭಾರತಗಳೆಲ್ಲವೂ ತಿಳಿದಿದ್ದು ಯಕ್ಷಗಾನದಿಂದ. ಕುಂದಾಪ್ರ ಕನ್ನಡ ಹಬ್ಬದಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳು ನಮ್ಮತನ ಅರಿತು ಪುನಃ ಆಚರಣೆಗೆ ತರುವಂತಾಗಬೇಕು. ಸಿನಿಮಾದಲ್ಲೂ ಅವಕಾಶ ಸಿಕ್ಕಲ್ಲೆಲ್ಲ ಅಕ್ಕಿಮುಡಿ, ಮೀನುಗಾರಿಕೆ, ಕಂಬಳ, ನಾಟಿ ಸೇರಿ ಹಲವು ಸಂಸ್ಕೃತಿಯನ್ನು ತೋರಿಸಿದ್ದೇವೆ’ ಎಂದರು.

‘ನಾವು ಎಲ್ಲಿಗೆ ಹೋದರೂ, ಎಷ್ಟೆ ಎತ್ತರಕ್ಕೆ ಬೆಳೆದರೂ ನಾವು ಎಲ್ಲಿಂದ ಬಂದವರು ಎನ್ನುವುದನ್ನು ಮರೆಯಬಾರದು. ಅದೇ ನಮ್ಮ ವ್ಯಕ್ತಿತ್ವ ಹೇಳುತ್ತದೆ ಹಾಗೂ ಸರಿಯಾದ ದಾರಿಯಲ್ಲಿ ನಡೆಯಲು ನೆರವಾಗುತ್ತದೆ. ನಮ್ಮ ಸಾಧನೆ ಅದರ ಖುಷಿ ನಮ್ಮವರಿಗೆ, ನಮ್ಮ ಮನಸ್ಸಿಗೆ ಸೀಮಿತವಾಬೇಕು. ಅದನ್ನು ತಲೆಗೇರಿಸಿಕೊಳ್ಳಬಾರದು’ ಎಂದು ಹೇಳಿದರು.

ಕುಂದಾಪುರ ಶಾಸಕ ಕಿರಣ ಕೊಡ್ಗಿ, ‘ಭಾಷೆಯ ಹೆಸರಿನಲ್ಲಿ ಹಬ್ಬ ಆಚರಿಸುತ್ತಿರುವುದು ವಿಶೇಷ ವಿಚಾರ. ಆಧುನಿಕ ಯುಗದಲ್ಲಿ ಇಂಗ್ಲಿಷ್ ಸೇರಿ ವಿವಿಧ ಭಾಷೆಗಳ ವ್ಯಾಮೋಹದಿಂದ ಕುಂದಾಪುರ ಭಾಷೆಯನ್ನು ಮುಂದಿನ ಪೀಳಿಗೆಯವರು ಮಾತನಾಡುವುದು ಕಷ್ಟವಾಗಬಹುದು. ಆದರೆ ಇಂತಹ ಕಾರ್ಯಕ್ರಮ ಕುಂದಾಪುರ ಭಾಷೆಯ ಮೇಲೆ ಅಭಿಮಾನ ಮೂಡಿಸಿ ಮಾತನಾಡುವಂತೆ ಮಾಡುತ್ತದೆ’ ಎಂದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಚಲನಚಿತ್ರ ಸಂಗೀತ ನಿರ್ದೇಶಕ ರವಿ ಬಸ್ರೂರು, ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ, ಎಂ.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್‌ನ ಕೃಷ್ಣಮೂರ್ತಿ ಮಂಜ, ಲೈಫ್‌ಲೈನ್ ಫೀಡ್ಸ್ ಪ್ರೈ ಮ್ಯಾನೇಜಿಂಗ್ ಡೈರೆಕ್ಟರ್ ಕಿಶೋರ್ ಕುಮಾರ್ ಹೆಗ್ಡೆ, ಉದ್ಯಮಿ ಶಿವರಾಮ ಹೆಗ್ಡೆ, ಸತೀಶ್ ಶೆಟ್ಟಿ ಇದ್ದರು.

ಅರಮನೆ ಮೈದಾನದಲ್ಲಿ ಕಳೆಗಟ್ಟಿದ ಕುಂದಪ್ರಾ ಸೊಬಗು

ಕನ್ನಡಪ್ರಭ ವಾರ್ತೆ ಬೆಂಗಳೂರುವಿಶಿಷ್ಟವಾದ ‘ಕುಂದಾಪುರ ಕನ್ನಡ’ದ ಕಲರವ, ನೆಲದ ಕಲೆ, ಸಂಸ್ಕೃತಿಯ ಪ್ರದರ್ಶನ, ಬಾಯಲ್ಲಿ ನೀರೂರಿಸುವ ತಿಂಡಿ ತಿನಿಸುಗಳು, ಎಲ್ಲೆಲ್ಲೂ ಸಡಗರ, ಸಂಭ್ರಮದ ವಾತಾವರಣ ನಗರದ ಅರಮನೆ ಮೈದಾನದಲ್ಲಿ ಶನಿವಾರದಿಂದ ಆರಂಭವಾದ ‘ಕುಂದಾಪ್ರ ಕನ್ನಡ’ ಮೇಳದಲ್ಲಿ ಕಂಡು ಬಂದ ದೃಶ್ಯಾವಳಿಗಳು.

ಬದುಕು ಕಟ್ಟಿಕೊಳ್ಳಲು ಹುಟ್ಟಿದೂರು ಬಿಟ್ಟು ಬಂದ ಜನ ಒಂದೆಡೆ ಸೇರಿ ವಿಶಿಷ್ಟ ಭಾಷೆ, ಸಂಸ್ಕೃತಿಯ ಕುಂದಾಪ್ರ ತೇರನ್ನು ಎಳೆಯುತ್ತಿದ್ದಾರೆ. ಅರಮನೆ ಮೈದಾನದ ವೈಟ್‌ ಪೆಟಲ್‌ನಲ್ಲಿ ಎರಡು ದಿನಗಳ ‘ಕುಂದಾಪ್ರ ಕನ್ನಡ ಹಬ್ಬ’ ಉದ್ಘಾಟನೆಗೊಂಡಿತು.ಕುಂದಾಪ್ರ ಕನ್ನಡಿಗರು ‘ನಮ್‌ ಕುಂದಾಪ್ರ ಭಾಷಿ ಚೆಂದ, ಬದ್ಕ್ ಚೆಂದ, ಕುಂದಾಪ್ರ ಭಾಷಿ ಕೆಮಿಗೆ ಬಿದ್ರೆ ಕೆಮಿ ಚುಳ್ ಅನ್ನತ್‌’ ಎನ್ನುತ್ತ ಲುಘುಬಗೆಯಿಂದ ಓಡಾಡುವ, ಆಹಾರ ಸವಿಯುವ, ವಹಿಸಿಕೊಂಡ ಜವಾಬ್ದಾರಿ ನಿಭಾಯಿಸುವ ಸಂಭ್ರಮದಲ್ಲಿದ್ದರು.

ಮಧ್ಯಾಹ್ನ 2ರಿಂದಲೇ ಕಾರ್ಯಕ್ರಮದ ಸೊಬಗು ಕಳೆಗಟ್ಟಿತ್ತು. ರಾತ್ರಿ 11ರವರೆಗೆ ಜನ ಕಿಕ್ಕಿರಿದು ಸೇರಿದ್ದರು. ಪುರುಷರು ಪಂಚೆ, ಶರ್ಟು, ಮಹಿಳೆಯರು ಸೀರೆಯುಟ್ಟ, ಕೈಯಲ್ಲಿ ಕಳಸ ಹಿಡಿದು ಅರಮನೆ ಮೈದಾನದಲ್ಲಿ ನೆರೆದಿದ್ದರು. ಯಕ್ಷಗಾನ, ಹುಲಿವೇಷ ಸೇರಿ ಇತರೆ ಸಂಸ್ಕೃತಿ ಹಾಗೂ ಕಲೆಯನ್ನು ಬಿಂಬಿಸುವ ವೇಷಧಾರಿಗಳ ಮೆರವಣಿಗೆ ಆಕರ್ಷಿಸಿತು.ಕುಂದಾಪುರ ಕನ್ನಡ ಗೀತೆ

ಕುಂದಾಪುರ ಸಂಸ್ಕೃತಿಯನ್ನು ವಿಶೇಷ ರೀತಿಯಲ್ಲಿ ಬಿತ್ತರಿಸುವ ಕಾರ್ಯಕ್ರಮಗಳು ನಡೆದವು. ನಾಕ್ ಘನಾ ಸುರ್ಲ್ ಜಾನಪದ, ರಂಗ, ಕುಂದಾಪುರ ಕನ್ನಡ ಗೀತೆಗಳನ್ನು ಉಡುಪಿಯ ಜರ್ನಿ ಥೇಟರ್ ಗ್ರೂಪ್‌ ಪ್ರಸ್ತುತ ಪಡಿಸಿದರು. ಸಭಾ ಕಾರ್ಯಕ್ರಮದ ಬಳಿಕ ಏಕಕಾಲದಲ್ಲಿ ಎರಡು ರಂಗಸ್ಥಳಗಳಲ್ಲಿ ಮಂದಾರ್ತಿ ಜೋಡಾಟ ಯಕ್ಷಗಾನವನ್ನು ಕರಾವಳಿಯ ಖ್ಯಾತ ಕಲಾವಿದರು ಪ್ರಸ್ತುತ ಪಡಿಸಿದರು.ಆಹಾರೋತ್ಸವ

ಕುಂದಾಪುರದ ವಿಶೇಷ ಕರಾವಳಿ ಶೈಲಿಯ ಖಾದ್ಯಮೇಳ ಕೈಬೀಸಿ ಕರೆಯುತ್ತಿದೆ. ಹೊಟ್ಟಿ ಕಂಡದ್ದ್ ನಾವೇ ಸೈ ಎನ್ನುವಂತೆ ಕಡಬು, ನೀರ್ ದೋಸೆ, ಹಲಸಿನ ಗಟ್ಟಿ, ಪುಂಡಿ, ಕಾಯಿ ಹೊಳಿಗೆ, ಗೊಳಿಬಜೆ, ವಡೆ, ರಾಗಿ ಬಾಯಾರ, ಎಳ್ಳು ಬಾಯಾರ ಸೇರಿದಂತೆ ಇತರೆ ಖಾದ್ಯಗಳು ಆಹಾರ ಮೇಳದಲ್ಲಿವೆ. ಇನ್ನೂ ಕಡಲೂರಿನ ವಸ್ತು, ಒಡವೆ, ವಸ್ತ್ರಪ್ರದರ್ಶನ ಮತ್ತು ಮಾರಾಟದ ‘ಕುಂದಾಪ್ರ ಸಂತಿ’ ಆಕರ್ಷಿಸುತ್ತಿದೆ.ಇಂದು ರಾಜ್‌ ಶೆಟ್ಟಿ, ಗಣೇಶ್‌ಕುಂದಾಪುರ ಕನ್ನಡ ಹಬ್ಬದ ಭಾನುವಾರದ ಕಾರ್ಯಕ್ರಮಕ್ಕೆ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ, ನಟ-ನಿರ್ದೇಶಕ ರಾಜ್ ಬಿ.ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್, ನಟ-ನಿರ್ಮಾಪಕ ಪ್ರಮೋದ್ ಶೆಟ್ಟಿ ಆಗಮಿಸಲಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಬರುವ ನಿರೀಕ್ಷೆ ಇದೆ. ಅಲ್ಲದೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಇದೇ ಮೊದಲು ಸಂಗೀತ ಸಂಜೆ ಕಾರ್ಯಕ್ರಮ ನೀಡುತ್ತಿದ್ದಾರೆ.

ಇಂದೇನು ಕಾರ್ಯಕ್ರಮ ?

ಬೆ.10 ಬಯಲಾಟ- ಗ್ರಾಮೀಣ ಉತ್ಸವಬೆ.10 ತಾರೆಯರ ಜೊತೆ ಮಾತುಕತೆ, ಕವಿತೆ.

ಬೆ.11 ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ʼಡಾನ್ಸ್ ಕುಂದಾಪ್ರ ಡಾನ್ಸ್ʼಬೆ.11.15 ಕುಂದಾಪುರ ಭಾಷೆ ಬದುಕು ಬರಹ ಕುರಿತ ನುಡಿಚಾವಡಿ.

ಮ.12 ಮನು ಹಂದಾಡಿ ಅವರಿಂದ ʼಹಂದಾಡ್ತಾ ನೆಗ್ಯಾಡಿʼ ಹಾಸ್ಯ ಕಾರ್ಯಕ್ರಮ.ಮ.1.30 ಚಂಡೆ-ಜಂಬೆ ಜುಗಲ್ಬಂದಿ ಕಾರ್ಯಕ್ರಮ ʼಪೆಟ್ ಒಂದೇ, ಸ್ವರ ಬೇರೆʼ

ಮ.2.30 ಮಂದರ್ತಿ ಶ್ರೀ ದುರ್ಗಾಪರಮೇಶ್ವರಿಯ ನೃತ್ಯಗಾಥೆ ʼಮಂದಾರ್ತಿ ಮಾದೇವಿʼಸಂ.4.30 ರಥೋತ್ಸವ

ರಾ.7.30 ʼರವಿ ಬಸ್ರೂರ್ ನೈಟ್ಸ್ʼ ವಿಶೇಷ ಸಂಗೀತ ಸಂಜೆ.