ಸಾರಾಂಶ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಸತ್ಸಂಗದಿಂದ ಎಂತಹ ವ್ಯಕ್ತಿಯಾಗಿದರೂ ಸಜ್ಜನ ವ್ಯಕ್ತಿಯಾಗಿ ಪರಿವರ್ತನೆ ಹೊಂದಲು ಸಾಧ್ಯ ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಸಾಕ್ಷಿಯಾಗಿದ್ದಾರೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ದರೋಡೆಕೋರನಾಗಿದ್ದ ರತ್ನಾಕರನು ನಾರದ ಮುನಿಗಳ ಉಪದೇಶದಿಂದ ಮಹರ್ಷಿಯಾಗಿ ರಾಮಾಯಣದಂತಹ ಮೇರು ಕೃತಿ ರಚಿಸಿದರು. ಮಹಾತ್ಮರು, ಶರಣರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಅವರು ಎಲ್ಲ ಸಮಾಜದವರಿಗೂ ಆದರ್ಶಪ್ರಾಯರು. ರಾಮಾಯಣ ನಮಗೆ ಸಹನೆ, ತಾಳ್ಮೆ, ಭ್ರಾತೃತ್ವ, ಪಿತೃವಾಕ್ಯ ಪರಿಪಾಲನೆಯಂತಹ ಸಂಗತಿಗಳನ್ನು ತಿಳಿಸಿಕೊಟ್ಟಿದೆ. ಆದ್ದರಿಂದ ಅದರಲ್ಲಿನ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವಾಲ್ಮೀಕಿಯವರಿಗೆ ಗೌರವ ಸಲ್ಲಿಸಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸತೀಶ ಜಾರಕಿಹೊಳಿ ಜತೆ ಚರ್ಚಿಸಿ ನಗರದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮಹರ್ಷಿ ವಾಲ್ಮೀಕಿ ಜೀವನ ಕುರಿತು ತಾಲೂಕು ಕಸಾಪ ಕಾರ್ಯದರ್ಶಿ ಜಗದೀಶ ಹುಳ್ಳಾಳ ಉಪನ್ಯಾಸ ನೀಡಿದರು.ನಗರಸಭೆ ಸದಸ್ಯರಾದ ಪ್ರಭಾವತಿ ತಿಳವಳ್ಳಿ, ಪ್ರಕಾಶ ಪೂಜಾರ, ಗಂಗಮ್ಮ ಹಾವನೂರ, ಜಯಶ್ರೀ ಪಿಸೆ, ಶಶಿಧರ ಬಸೇನಾಯ್ಕರ, ಕೆಸಿಸಿ ಬ್ಯಾಂಕ್ ನಿರ್ದೇಶಕ ತಿರಪತಿ ಅಜ್ಜನವರ, ಮಳ್ಳೆಪ್ಪ ನಿಂಗಜ್ಜನವರ, ಸಣ್ಣತಮ್ಮಪ್ಪ ಬಾರ್ಕಿ, ಬಸವರಾಜ ತಳವಾರ, ಚಂದ್ರಣ್ಣ ಬೇಡರ, ಹನುಮಂತಪ್ಪ ಬ್ಯಾಲದಹಳ್ಳಿ, ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ, ನೀಲಕಂಠಪ್ಪ ಕುಸಗೂರ, ನಾಗಪ್ಪ ಸಣ್ಣಮನಿ, ರಾಜು ಮಾದಮ್ಮನವರ, ಮಲ್ಲೇಶಪ್ಪ ಮದ್ಲೇರ, ತಹಸೀಲ್ದಾರ ಹನುಮಂತಪ್ಪ ಶಿರಹಟ್ಟಿ, ಬಿಇಒ ಎಂ.ಎಚ್. ಪಾಟೀಲ, ತಾಪಂ ಇಒ ಸುಮಲತಾ ಎಸ್.ಪಿ., ಡಿವೈಎಸ್ಪಿ ಡಾ. ಗಿರೀಶ ಬೋಜಣ್ಣನವರ, ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೇವಲಾನಾಯ್ಕ್ ಜೆ., ಟಿಎಚ್ಒ ಡಾ. ರಾಜೇಶ್ವರಿ ಕದರಮಂಡಲಗಿ, ಸಿಪಿಐ ಡಾ. ಶಂಕರ್ ಎಸ್.ಕೆ. ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಇದಕ್ಕೂ ಪೂರ್ವದಲ್ಲಿ ಬೆಳಗ್ಗೆ 10ರ ಸುಮಾರು ನಗರದ ತಳವಾರ ಗಲ್ಲಿ ಬಳಿಯಿಂದ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಮೆರವಣಿಗೆ ಮೂಲಕ ತಾಪಂ ಕಚೇರಿವರೆಗೆ ತರಲಾಯಿತು.