ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಅರೇಹಳ್ಳಿ ಪಟ್ಟಣದ ಇಂದಿರಾನಗರ ವ್ಯಾಪ್ತಿಯ ಮನೆಗಳಿಗೆ ಬೆಳಕು ಹಾಗೂ ಗೃಹೋಪಯೋಗಿ ಉಪಕರಣಗಳ ಬಳಕೆಗೆ ವಿದ್ಯುತ್ ಪೂರೈಸಲು 25 ಕೆ.ವಿ ಸಾಮರ್ಥ್ಯದ ಪರಿವರ್ತಕ ಅಳವಡಿಸಿದ್ದು, ಅಧಿಕ ವಿದ್ಯುತ್ ಪ್ರವಹಿಸಿ ಸುಟ್ಟು ಕರಕಲಾಗಿದೆ. ಕಡಿಮೆ ಸಾಮರ್ಥ್ಯದ ಟ್ರಾನ್ಸ್ಫಾರ್ಮರ್ ಅಳವಡಿಸಿದ ಚೆಸ್ಕಾಂ ನಿರ್ಲಕ್ಷ್ಯವೇದಿದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಪಟ್ಟಣದ ಇಂದಿರಾನಗರ ವ್ಯಾಪ್ತಿಗೆ ಸೇರಿರುವ ಸುಮಾರು ಇನ್ನೂರಕ್ಕೂ ಹೆಚ್ಚಿನ ಮನೆ ಹಾಗೂ ಆರೇಳು ಪಂಪ್ಸೆಟ್ಗಳಿಗೆ ಸರಿಸುಮಾರು 100 ಕೆ.ವಿ.ಎ ಕ್ಕಿಂತಲೂ ಅಧಿಕ ಸಾಮರ್ಥ್ಯ ಹೊಂದಿರುವ ವಿದ್ಯುತ್ ಪರಿವರ್ತಕ ಅತ್ಯವಶ್ಯಕವಾಗಿದ್ದು, ಪರ್ಯಾಯವಾಗಿ ಎರಡು 25 ಕೆ.ವಿ ಪರಿವರ್ತಕ ಅಳವಡಿಸಿದ್ದು ಇದೀಗ ಅಧಿಕ ಭಾರ ಹೊರಲಾರದೆ ಸುಟ್ಟು ಕರಕಲಾಗಿದೆ. ಇದೇ ರೀತಿ ಕಳೆದ ಎರಡು ವರ್ಷಗಳಲ್ಲಿ ಮೂರ್ನಾಲ್ಕು ಬಾರಿ ಟ್ರಾನ್ಸ್ಫಾರ್ಮರ್ ಸುಟ್ಟು ಹೋಗಿದ್ದು ಈ ಬಗ್ಗೆ ಸಂಬಂಧಪಟ್ಟ ಕೆಇಬಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದರೂ ಭಾರ ಹೊರುವಷ್ಟು ಸಾಮರ್ಥ್ಯದ ಪರಿವರ್ತಕ ಅಳವಡಿಸಲಾಗುತ್ತಿಲ್ಲ ಎಂದು ಸ್ಥಳೀಯರು ಒಂದೆಡೆ ಆರೋಪಿಸಿದರೆ, ಇನ್ನೊಂದೆಡೆ ಇದ್ದಕ್ಕಿದ್ದಂತೆಯೇ ನಮ್ಮ ಮನೆಯ ಹಿಂಭಾಗದಲ್ಲಿರುವ ಟ್ರಾನ್ಸ್ಫಾರ್ಮರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಜೀವಭಯದಲ್ಲಿ ಮನೆಯಿಂದ ಹೊರ ಬಂದಿದ್ದೇವೆ, ಒಂದು ವೇಳೆ ಬೆಂಕಿ ವ್ಯಾಪಿಸಿ ವೃದ್ಧರು ಚಿಕ್ಕ ಮಕ್ಕಳು ಇರುವ ನಮ್ಮ ಮನೆಗೆ ತಗುಲಿ ಏನಾದರೂ ಹೆಚ್ಚಿನ ಅನಾಹುತಗಳಾದರೆ ಯಾರು ಹೊಣೆ? ಇಲಾಖೆಯವರು ಮನೆಯ ಹತ್ತಿರದಿಂದ ಪರಿವರ್ತಕವನ್ನು ಸ್ಥಳಾಂತರ ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ಟ್ರಾನ್ಸ್ಫಾರ್ಮರ್ ಪಕ್ಕದಲ್ಲಿರುವ ಮನೆಯವರು ತಿಳಿಸಿದ್ದಾರೆ.
------------------------------------------------*ಹೇಳಿಕೆ:
ಪಟ್ಟಣದ ಇಂದಿರಾನಗರದಲ್ಲಿರುವ ವಿದ್ಯುತ್ ಪರಿವರ್ತಕದಿಂದ ವಿತರಣೆಯಾಗುತ್ತಿರುವ ಮನೆಗಳ ಬೇಡಿಕೆಯ ಅನುಸಾರ ವಿದ್ಯುತ್ ಪರಿವರ್ತಕವು ಭಾರವನ್ನು ಹೊರುವಷ್ಟು ಸಾಮರ್ಥ್ಯ ಹೊಂದಿದ್ದು, ಕಳೆದ ರಾತ್ರಿ ಪರಿವರ್ತಕವು ಸುಟ್ಟು ಹೋಗಿರುವುದಕ್ಕೆ ಸಕಾರಣವನ್ನು ಪರಿಶೀಲಿಸಿ ಪರ್ಯಾಯ ಪರಿವರ್ತಕವನ್ನು ತ್ವರಿತವಾಗಿ ಅಳವಡಿಸಲು ಕ್ರಮ ವಹಿಸಲಾಗುವುದು. - ರೇವಣ್ಣ, ಜೆ.ಇ ಸೆಸ್ಕ್ ಅರೇಹಳ್ಳಿ