ಅನುವಾದ ದೇಶ, ಭಾವ ಜೋಡಿಸುವ ಸಾಧನ

| Published : Dec 14 2024, 12:48 AM IST

ಸಾರಾಂಶ

ಅನುವಾದ ಸಾಹಿತ್ಯದಿಂದ ವಿಶ್ವದ ಎಲ್ಲ ಸಾಹಿತ್ಯ ಅರಿಯಲು ಸಾಧ್ಯ. ಅನುವಾದವಿರದೆ ಹೋಗಿದ್ದರೆ ನಾವು ಬಾವಿ ಕಪ್ಪೆಯಂತಾಗಿರುತ್ತಿದ್ದೇವು

ಗದಗ: ಅನುವಾದ ಭಾವ ಮತ್ತು ದೇಶ ಜೋಡಿಸುವ ಸಾಧನವಾಗಿದೆ. ಅನುವಾದ ಕಾರ್ಯದಿಂದ ಕೊಡುಕೊಳ್ಳುವಿಕೆ ನಡೆಯುತ್ತದೆ.ಇದರಿಂದ ಒಂದು ಭಾಷೆಯು ಶ್ರೀಮಂತವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಕೇಶವ ಜಾಗೀರದಾರ ಹೇಳಿದರು.

ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಂಗ್ಲ ವಿಭಾಗದ ವತಿಯಿಂದ ನಡೆದ ಅನುವಾದದ ಸಮಸ್ಯೆ ಮತ್ತು ಪರಿಹಾರಗಳು ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನುವಾದ ಸಾಹಿತ್ಯದಿಂದ ವಿಶ್ವದ ಎಲ್ಲ ಸಾಹಿತ್ಯ ಅರಿಯಲು ಸಾಧ್ಯ. ಅನುವಾದವಿರದೆ ಹೋಗಿದ್ದರೆ ನಾವು ಬಾವಿ ಕಪ್ಪೆಯಂತಾಗಿರುತ್ತಿದ್ದೇವು. ಅನುವಾದದ ಮೂಲಕ ಸ್ಥಳೀಯ ಭಾಷೆಗಳು ಜಾಗತಿಕ ಮನ್ನಣೆ ಗಳಿಸಿಕೊಳ್ಳುತ್ತವೆ. ಒಂದು ಭಾಷೆಯ ಸಾಹಿತ್ಯ ಇನ್ನೊಂದು ಭಾಷೆಗೆ ತರುವ ಕಷ್ಟ ಅನುಭವಿಸಿದವರಿಗಷ್ಟೇ ಗೊತ್ತು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ.ಎ.ಕೆ. ಮಠ ಮಾತನಾಡಿ, ಭಾಷಾಂತರ ಸೋಮಾರಿಗಳ ಕೆಲಸವಲ್ಲ, ಅದು ಪ್ರತಿಭಾವಂತರು ಕೈಗೊಳ್ಳಬೇಕಾದ ಕಾರ್ಯ. ಭಾಷಾಂತರ ಎಂಬುದು ಒಂದು ಕಲೆ ಸಾಹಿತಿಯ ಕಾರ್ಯ ಸೃಷ್ಟಿ ಎಂದಾದರೆ ಭಾಷಾಂತರಕಾರನ ಕಾರ್ಯ ಪುನಃಸೃಷ್ಟಿ ಎಂದು ಕರೆಯುವುದು ಉಚಿತ. ಸೃಷ್ಟಿಯಾದ ಸಾಹಿತ್ಯ ಮೂಲಕ ಓದುಗರ ಮನಸೆಳೆಯುವಂತೆ ಪುನಃ ಸೃಷ್ಟಿಯಾದ ಸಾಹಿತ್ಯ ಬೇರೊಂದು ಭಾಷೆಯ ಓದುಗರ ಮನ ಸೆಳೆಯಬೇಕು, ಇಲ್ಲವಾದಲ್ಲಿ ಭಾಷಾಂತರ ವಿಫಲವಾಗುತ್ತದೆ ಎಂದು ತಿಳಿಸಿದರು.

ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು ಇದ್ದರು. ಭೂಮಿಕಾ ಬೆಳದಡಿ ಸ್ವಾಗತಿಸಿದರು. ದೀಪಾ ಬಾಚನಹಳ್ಳಿ ಪರಿಚಯಿಸಿದರು. ಬಸವರಾಜ ಕಮತರ ವಂದಿಸಿದರು. ವತ್ಸಲಾ ನಿರೂಪಿಸಿದರು. ಪ್ರೊ.ವಿಶಾಲ ತೆಳಗಡೆ, ಪ್ರೊ.ಕವಿತಾ ರಬನಾಳ ಕಾರ್ಯಕ್ರಮ ಸಂಘಟಿಸಿದರು.