ಸಾರಾಂಶ
ಲಕ್ಷ್ಮೇಶ್ವರ: ಆಧುನಿಕತೆಯ ಭರದಲ್ಲಿ ಹಿರಿಯರನ್ನು ಕಡೆಗಣಿಸುವ ಕಾರ್ಯವಾಗುತ್ತಿರುವುದು ವಿಷಾದದ ಸಂಗತಿ. ಮೊದಲು ಹಿರಿಯರನ್ನು ಗೌರವಿಸುವುದರ ಜತೆಗೆ ಅವರ ಕಾಯಕ, ನಡೆ- ನುಡಿಗಳನ್ನು ಅಳವಡಿಸಿಕೊಳ್ಳುವ ಕಾರ್ಯವಾಗಬೇಕಾಗಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮಿಗಳು ತಿಳಿಸಿದರು.
ಬುಧವಾರ ಸಂಜೆ ಪಟ್ಟಣದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನ ವತಿಯಿಂದ ಸಾಂಪ್ರದಾಯಿಕವಾಗಿ ನಡೆದು ಬಂದ ನಂದಾ ದೀಪಾರಾಧನಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದರು.ಪಟ್ಟಣದಲ್ಲಿ ಲಿಂಬಯ್ಯಸ್ವಾಮಿಮಠ ಕಾಯಕ ದಾಸೋಹ ಅನುಭವ ಸಿದ್ಧಾಂತದ ಪರಂಪರೆ, ಆಚಾರ ತಳಹದಿ ಮೇಲೆ ನಿಂತು ಕೆಲಸ ಮಾಡುವ ಮಠ ವಾಗಿದೆ. ಈ ಮಠದ ಪ್ರತಿಷ್ಠಾನದಿಂದ ಸುಪ್ತ ಚೇತನಗಳನ್ನು ಗೌರವಿಸಿ ಅವರ ಕಾರ್ಯವನ್ನು ಸಮಾಜಕ್ಕೆ ತಿಳಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಆಧುನಿಕ ಜಗತ್ತು ವೇಗವಾಗಿ ಸಾಗುತ್ತಿದ್ದರೂ ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಂಪರೆಯ ಮಹತ್ವ ತಿಳಿಸುವುದು ಅಗತ್ಯವಾಗಿದೆ. ಇಂತಹ ಮಾದರಿ ಕಾರ್ಯಗಳು ಇನ್ನೊಬ್ಬರಿಗೆ ಮಾರ್ಗದರ್ಶನವಾಗಲಿ ಎಂದರು.ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಹಿರಿಯರಾದ ಲಿಂ. ಎಲ್.ಸಿ. ಲಿಂಬಯ್ಯಸ್ವಾಮಿಮಠ, ಲಿಂ. ಶರಣಯ್ಯನವರು ಲಿಂಬಯ್ಯಸ್ವಾಮಿಮಠ ಅವರು ಹಾಕಿಕೊಟ್ಟ ಮಾರ್ಗದಂತೆ ಕಾರ್ಯಕ್ರಮಗಳ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಈಶ್ವರ ಮೇಡ್ಲೇರಿ ಹಾಗೂ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಅತಿಥಿಗಳಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಆವಿಷ್ಕಾರಗೊಂಡ ಸುಪ್ತ ಚೇತನ, ಸಂಘ ಜೀವಿ, ಸಮಾಜಮುಖಿ ಈರಣ್ಣ ಯರ್ಲಗಟ್ಟಿ, ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಶ್ರೇಷ್ಠ ತನಿಖಾಧಿಕಾರಿ ಎಂಬ ಪ್ರಶಸ್ತಿ ಪುರಸ್ಕೃತ ಸಮೀಪದ ರಾಮಗಿರಿ ಗ್ರಾಮದ ಹಾಗೂ ಕಲಬುರಗಿ ಜಿಲ್ಲೆಯ ಡಿವೈಎಸ್ಪಿ ಶಂಕರಗೌಡ ಪಾಟೀಲ, ಅರಳು ವಿಶೇಷ ಅಗತ್ಯತೆಯುಳ್ಳ ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ಶಾಲೆಯ ಸಂಸ್ಥಾಪಕಿ ನೀಲಮ್ಮ ಮಂಜುನಾಥ ದಾಸಪ್ಪನವರ ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಘ ಹುಬ್ಬಳ್ಳಿಯ ನೂತನ ಅಧ್ಯಕ್ಷ ಗೋವಿಂದಗೌಡ್ರ ಆದಪ್ಪಗೌಡ್ರ ಅವರನ್ನು ಗೌರವಿಸಲಾಯಿತು.ಪ್ರತಿಷ್ಠಾನದ ಧರ್ಮದರ್ಶಿ ಚಿದಾನಂದ ಲಿಂಬಯ್ಯಸ್ವಾಮಿಮಠ, ಆನಂದ ಗಡ್ಡದೇವರಮಠ, ಕೆ.ಎಸ್. ಕುಲಕರ್ಣಿ, ನಿರಂಜನ ಲಿಂಬಯ್ಯಸ್ವಾಮಿಮಠ, ಬಸಣ್ಣ ಗಾಂಜಿ, ಶೇಖರಗೌಡ ಪಾಟೀಲ, ಮಹೇಶ ಲಿಂಬಯ್ಯಸ್ವಾಮಿಮಠ, ಶಾಂತರಾಜ ಓದುನವರ, ಪ್ರವೀಣ ಬಾಳಿಕಾಯಿ, ಸಾಹೇಬಜಾನ್ ಹವಾಲ್ದಾರ, ರಾಮಣ್ಣ ಪಡಗೇರಿ, ನಿಂಗಪ್ಪ ಕೋರದಾಳ ಮುಂತಾದವರು ಇದ್ದರು.