ನೊಂದು ಬಂದವರೊಂದಿಗೆ ಸೌಜನ್ಯದಿಂದ ವರ್ತಿಸಿ

| Published : Feb 14 2025, 12:32 AM IST

ಸಾರಾಂಶ

ನೊಂದು ಬಂದವರೊಂದಿಗೆ ಅತ್ಯಂತ ಸೌಜನ್ಯದಿಂದ ವರ್ತಿಸಬೇಕು.

ಸಂಡೂರು: ಪ್ರತಿನಿತ್ಯ ಹಲವರು ಒಂದಿಲ್ಲೊಂದು ಪ್ರಕರಣದಲ್ಲಿ ನೊಂದು ಠಾಣೆಗೆ ಬರುತ್ತಾರೆ. ಹೀಗೆ ನೊಂದು ಬಂದವರೊಂದಿಗೆ ಅತ್ಯಂತ ಸೌಜನ್ಯದಿಂದ ವರ್ತಿಸಬೇಕು. ಜನಸ್ನೇಹಿಯಾಗಿ ಕೆಲಸ ಮಾಡಿ ಎಂದು ಬಳ್ಳಾರಿ ವಲಯದ ಐಜಿಪಿ ಲೋಕೇಶ್ ಕುಮಾರ್ ಬಿ.ಎಸ್. ಹೇಳಿದರು.

ಬಳ್ಳಾರಿ-ವಿಜಯನಗರ ಜಿಲ್ಲೆಗಳ ೨೦೦೫ನೇ ಬ್ಯಾಚ್‌ನ ಪೊಲೀಸರು ಇಲಾಖೆಯಲ್ಲಿ ನೇಮಕಗೊಂಡು ೨೦ ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ತಾಲೂಕಿನ ತಾರಾನಗರದ ಬಳಿಯ ಮೌಂಟೇನ್ ವ್ಯಾಲಿ ರೆಸಾರ್ಟ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೊಂದವರ ಸ್ಥಾನದಲ್ಲಿ ನಿಂತು ನೀವು ಅವರ ಕಷ್ಟ, ನೋವುಗಳನ್ನು ಅರ್ಥ ಮಾಡಿಕೊಳ್ಳಿ. ಪೊಲೀಸರೆಂದರೆ ಭಯ ಅಲ್ಲ; ಭರವಸೆ ಎಂಬುವುದನ್ನು ಜನಮಾನಸದಲ್ಲಿ ಪ್ರತಿಷ್ಠಾಪಿಸಿ. ಅದಕ್ಕಾಗಿ ನೀವು ನಿಮ್ಮ ಸೇವಾವಧಿ ಉದ್ದಕ್ಕೂ ಶ್ರಮಿಸಬೇಕು. ಸಮಾಜಕ್ಕೆ ಉತ್ತಮ ಸೇವೆ ನೀಡುವ ಧ್ಯೇಯ ನಿಮ್ಮದಾಗಿರಲಿ ಎಂದರು.

ವಿಜಯನಗರ ಜಿಲ್ಲೆಯ ಎಸ್ಪಿ ಶ್ರೀಹರಿಬಾಬು ಬಿ.ಎಲ್. ಮಾತನಾಡಿ, ಇಂದಿನ ಧಾವಂತದ, ಯಾಂತ್ರಿಕ ಬದುಕಿನಲ್ಲಿ ಸ್ನೇಹ, ಪ್ರೀತಿ, ಸಂಬಂಧ ಮುಂತಾದ ಮೌಲ್ಯಗಳು ತಮ್ಮ ಅರ್ಥ ಮತ್ತು ಮಹತ್ವ ಪಡೆದುಕೊಳ್ಳುತ್ತಿವೆ. ಈ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಿಮ್ಮಲ್ಲಿಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸುತ್ತದೆ. ಈ ಅನುಬಂಧ ಹೀಗೆ ಇರಲಿ ಎಂದರು.

ಬಳ್ಳಾರಿ ಜಿಲ್ಲಾ ಎಸ್ಪಿ ಡಾ. ಶೋಭಾರಾಣಿ ವಿ.ಜೆ. ಮಾತನಾಡಿ, ೨೦೦೫ನೇ ಬ್ಯಾಚ್‌ನ ಪೊಲೀಸ್ ಅಧಿಕಾರಿಗಳ ಕರ್ತವ್ಯನಿಷ್ಠೆ ಶ್ಲಾಘನೀಯ. ನಿಮ್ಮ ಕೊಡುಗೆ ಇಲಾಖೆಗೆ ಭವಿಷ್ಯದಲ್ಲಿಯೂ ಹೀಗೆ ಇರಲಿ. ಕರ್ತವ್ಯದ ಜತೆಗೆ ನಿಮ್ಮ ವೈಯಕ್ತಿಕ, ಕೌಟುಂಬಿಕ ಜೀವನದಲ್ಲಿ ಇದೇ ರೀತಿಯ ಯಶಸ್ಸನ್ನು ಸಾಧಿಸಿ ಎಂದು ಶುಭಹಾರೈಸಿದರು.

೨೦೦೫ನೇ ಬ್ಯಾಚ್‌ನಲ್ಲಿ ಸೇವೆಗೆ ಸೇರಿ ನಂತರದಲ್ಲಿ ಅಗಲಿದ ಸಹೋದ್ಯೋಗಿಗಳ ಸೇವೆಯನ್ನು ಸ್ಮರಿಸಿ, ಅವರಿಗೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆ ನಡೆಸಲಾಯಿತು. ೨೦೦೫ನೇ ಬ್ಯಾಚ್‌ನ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಚಂದ್ರಶೇಖರ, ಶಿವಲೀಲಾ, ಬೊಮ್ಮನಗೌಡ, ರಾಜೇಂದ್ರಪ್ರಸಾದ, ಲಕ್ಷ್ಮಣನಾಯ್ಕ್, ರಾಜೇಶ್ವರಿ, ಕೆ. ಹನುಮಂತ ಮುಂತಾದವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ತೋರಣಗಲ್ಲು ಡಿವೈಎಸ್‌ಪಿ ಪ್ರಸಾದ್ ಗೋಖಲೆ, ಸಂಡೂರು ಸಿಪಿಐ ಮಹೇಶ್ ಗೌಡ, ಪಿಎಸ್‌ಐ ವೀರೇಶ್ ಮಾಳಶೆಟ್ಟಿ, ತೋರಣಗಲ್ಲು ಪಿಎಸ್‌ಐ ಯು. ಡಾಕೇಶ್, ಕಲಬುರಗಿಯ ಸಿಎಆರ್ ಎಸಿಪಿ ಎಚ್.ಎಂ.ಡಿ. ಸರದಾರ್ ಹಾಗೂ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ನಾಗರಾಜ ಕೊಟ್ರಪ್ಪನವರ್ ಕಾರ್ಯಕ್ರಮ ನಿರೂಪಿಸಿದರು. ಬಸವಕುಮಾರ್ ಸ್ವಾಗತಿಸಿದರು. ಸ್ವರೂಪ್ ಕೊಟ್ಟೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಮಾ, ಮಂಜುಳಾ ಪ್ರಾರ್ಥಿಸಿದರು. ವಿಶ್ವನಾಥ ವಂದಿಸಿದರು.