ಸಾರಾಂಶ
ವಿಕಲಚೇತನ ಮಕ್ಕಳನ್ನು ಸಮಾನತೆ ಹಾಗೂ ಮಾನವೀಯತೆಯಿಂದ ನೋಡುವಂತೆ ಯುವ ಧುರೀಣ, ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ವಿಕಲಚೇತನ ಮಕ್ಕಳನ್ನು ಸಮಾನತೆ ಹಾಗೂ ಮಾನವೀಯತೆಯಿಂದ ನೋಡುವಂತೆ ಯುವ ಧುರೀಣ, ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.ಶನಿವಾರ ನಗರದ ಎನ್ಎಸ್ಎಫ್ ವಸತಿ ಪ್ರೌಢಶಾಲೆಯಲ್ಲಿ ಗೋಕಾಕ ಹಾಗೂ ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಅಲಿಮ್ಕೊ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ವಿಕಲಚೇತನ ಮಕ್ಕಳಿಗಾಗಿ ಉಚಿತ ವೈದ್ಯಕೀಯ ಮೌಲ್ಯಾಂಕನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದಿವ್ಯಚೇತನ ಮಕ್ಕಳಿಗೆ ಪಾಲಕರೆ ದೇವರಾಗಿದ್ದು, ಅವರನ್ನು ಪ್ರೋತ್ಸಾಹಿಸಿ ಮಾನಸಿಕ ಹಾಗೂ ದೈಹಿಕವಾಗಿ ಸದೃಢರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ಈ ನಿಮ್ಮ ಕಾರ್ಯಕ್ಕೆ ಸರ್ಕಾರ, ಸಂಘ-ಸಂಸ್ಥೆಗಳು ಸೇರಿದಂತೆ ನಮ್ಮೆಲ್ಲರ ಸಹಕಾರ ಇದೆ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.ಮೂಡಲಗಿ ವಲಯ ಕ್ಷೇತ್ರಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳೊಂದಿಗೆ ವಿಕಲಚೇತನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಎಲ್ಲ ವೀಕಲಚೇತನ ಮಕ್ಕಳಿಗೆ ಸೌಲಭ್ಯ ನೀಡಲಾಗುತ್ತಿದೆ. ಪಿಜಿಯೊ ಥೇರಪಿ ಚಿಕಿತ್ಸೆ, ವಿಶೇಷ ಭತ್ಯೆ, ವಿವಿಧ ಸಾಧನ-ಸಲಕರಣೆ ವಿತರಿಸಲಾಗುತ್ತಿದ್ದು , ಇವುಗಳನ್ನು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪಾಲಕರು ಉಪಯೋಗಿಸುವಂತೆ ತಿಳಿಸಿದರು.
ವೇದಿಕೆಯ ಮೇಲೆ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಗೋಕಾಕ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಗಾರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಬಿ. ಕುಲಕರ್ಣಿ, ಡಾ.ಎಸ್.ಕೆ. ಹುಕ್ಕೇರಿ, ಮುಖ್ಯಶಿಕ್ಷಕ ಎ.ಜಿ. ಕೋಳಿ, ಸಂಪನ್ಮೂಲ ವ್ಯಕ್ತಿಗಳಾದ ಐ.ಬಿ. ಸಂಪಗಾಂವಿ, ಎಚ್.ಎಚ್. ಕೌಜಗೇರಿ, ಎಸ್.ಬಿ. ಕೊಂತಿ, ಎ.ಬಿ. ದಳವಾಯಿ ಇದ್ದರು.