ಸಾರಾಂಶ
ಏಳು ಮರಗಳನ್ನು ಕೇವಲ ಬಸ್ ಪಾರ್ಕಿಂಗ್ ಮಾಡುವ ಸಲುವಾಗಿ ಕಡಿದು ಹಾಕಿದ್ದು ವಿಪರ್ಯಾಸದ ಸಂಗತಿ
ಕುಷ್ಟಗಿ: ಬಸ್ ಪಾರ್ಕಿಂಗ್ ಮಾಡುವುದು ಮತ್ತು ಖಾಲಿ ಜಾಗೆ ಬಾಡಿಗೆ ಕೊಡುವ ಸಲುವಾಗಿ ಬೃಹತ್ ಗಾತ್ರದ ಏಳು ಮರಗಳನ್ನು ಮಾರಣ ಹೋಮ ಮಾಡಲಾಗಿದ್ದು ಇದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು. ಇದು ಪಟ್ಟಣದ ಬಸ್ ಡಿಪೋದ ಆವರಣದಲ್ಲಿ ಹತ್ತಾರು ವರ್ಷಗಳಿಂದ ಸೊಂಪಾಗಿ ಬೆಳೆದಿದ್ದ ಸುಮಾರು ಏಳು ಮರಗಳನ್ನು ಕೇವಲ ಬಸ್ ಪಾರ್ಕಿಂಗ್ ಮಾಡುವ ಸಲುವಾಗಿ ಕಡಿದು ಹಾಕಿದ್ದು ವಿಪರ್ಯಾಸದ ಸಂಗತಿಯಾಗಿದೆ. ಸಾರಿಗೆ ಇಲಾಖೆಯ ಸಿಬ್ಬಂದಿಗಳ ಈ ನಡೆಗೆ ಆಕ್ರೋಶ ವ್ಯಕ್ತವಾಗಿದ್ದು ಮೇಲಾಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಈ ಕುರಿತು ಕನ್ನಡಪ್ರಭದೊಂದಿಗೆ ಸಾರಿಗೆ ಇಲಾಖೆಯ ಅಧಿಕಾರಿ ಜಯಪ್ರಕಾಶ ಮಾತನಾಡಿ, ಬಸ್ ಡಿಪೊದ ಆವರಣದಲ್ಲಿರುವ ಖಾಲಿ ಜಾಗೆ ವ್ಯಾಪಾರಸ್ಥರಿಗೆ ಬಾಡಿಗೆ ಕೊಡುವದಕ್ಕಾಗಿ ಟೆಂಡರು ಕೊಡಲಾಗಿದ್ದು ಅದರ ಸಲುವಾಗಿ ಮರಗಳನ್ನು ಅರಣ್ಯ ಇಲಾಖೆಯ ಒಪ್ಪಿಗೆ ಪಡೆದುಕೊಂಡು ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.
ಹೈದ್ರಾಬಾದ ಕರ್ನಾಟಕ ಯುವಶಕ್ತಿ ಸಂಘಟನೆಯ ಅಧ್ಯಕ್ಷ ಬಸವರಾಜ ಗಾಣಿಗೇರ ಪ್ರತಿಕ್ರಿಯಿಸಿ, ಕುಷ್ಟಗಿ ಬಸ್ ಡಿಪೋದ ಆವರಣದಲ್ಲಿರುವ ಗಿಡಗಳು ಯಾವುದೆ ರೀತಿಯಲ್ಲಿ ತೊಂದರೆ ನೀಡುತ್ತಿರಲಿಲ್ಲ. ಈ ಕುರಿತು ನಮ್ಮ ಸಂಘಟನೆ ಹಾಗೂ ಪರಿಸರ ಪ್ರೇಮಿಗಳು ಡಿಪೋ ಮ್ಯಾನೇಜರಗೆ ಹಲವು ಸಲ ಮೌಖಿಕವಾಗಿ ಗಿಡ ಕಡಿಯಬಾರದು ಎಂದು ತಿಳಿಸಲಾಗಿತ್ತು ಆದರೂ ಸಹಿತ ಗಿಡಗಳನ್ನು ಕಡಿಸಿ ಹಾಕಿರುವದು ಖಂಡನೀಯ ಮೇಲಾಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.