ಹರಿಹರ: ಸಮಾಪನಾ ಪ್ರಕ್ರಿಯೆಯಲ್ಲಿರುವ ಇಲ್ಲಿನ ಮೈಸೂರು ಕಿರ್ಲೋಸ್ಕರ್ ಕಂಪನಿಯ ಭಾಗಶಃ ಜಮೀನನ್ನು ಖರೀದಿಸಿದ ಉದ್ಯಮಿಯೊಬ್ಬರು ತುಂಗಭದ್ರಾ ನದಿ ದಡದ (ನದಿ ಖರಾಬ್) ಮರಗಳನ್ನೂ ಕಡಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಉದ್ಯಮಿಯೊಬ್ಬರು ಸದರಿ ಜಮೀನನ್ನು ಖರೀದಿಸಿದ್ದು, ಜಮೀನಿನ ಹದ್ದುಬಸ್ತು ಕಾರ್ಯ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಈ ಜಮೀನಿನ ಅಂಚಿನಲ್ಲಿ ತುಂಗಭದ್ರಾ ನದಿ ಪ್ರದೇಶದಲ್ಲಿರುವ ಗಿಡ, ಮರಗಳನ್ನೂ ಕಡಿಸುತ್ತಿದ್ದಾರೆಂದು ತಾಲೂಕು ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಮಗ್ದುಮ್ ಆರೋಪಿಸಿದ್ದಾರೆ.ಖಾಸಗಿ ಜಮೀನಿನಲ್ಲಿರುವ ಮರಗಳನ್ನು ಕಡಿಸಬೇಕೆಂದರೂ ಪ್ರಾದೇಶಿಕ ಅರಣ್ಯ ಇಲಾಖೆಗೆ ಅರ್ಜಿ ನೀಡಿ, ಅನುಮತಿ ಪಡೆಯಬೇಕು. ಆದರೆ ಇಲ್ಲಿ ಅನುಮತಿ ಪಡೆದಿಲ್ಲ. ಇದರ ಹೊರತಾಗಿ ಮೇಲ್ನೋಟಕ್ಕೆ ನದಿಗೆ ಸೇರಿದ್ದು ಎನಿಸುವ ಜಾಗದ ಮರಗಳನ್ನು ಕಡಿಯಲಾಗುತ್ತಿದೆ ಎಂದು ದೂರಿದ್ದಾರೆ.
ಆರೇಳು ದಶಕಗಳಷ್ಟು ಹಳೆಯ ಹಾಗೂ ವಿಶಾಲವಾಗಿದ್ದ ಈ ಮರಗಳು ಹರಿಹರದ ವಾತಾವರಣದಲ್ಲಿ ತೇವಾಂಶ ಹಾಗೂ ಆಮ್ಲಜನಕ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಆ ಮರಗಳಲ್ಲಿ ಆಶ್ರಯ ಪಡೆದಿದ್ದ ಪಕ್ಷಿಗಳು ಈ ನಿರಾಶ್ರಿತವಾಗಿವೆ. ವಿಶಾಲವಾದ 60ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ ಎಂದು ತಿಳಿಸಿದ್ದಾರೆ.ಅರಣ್ಯ, ಕಂದಾಯ, ಭೂ ಮಾಪನಾ ಹಾಗೂ ಜಲಸಂಪನ್ಮೂಲ ಇಲಾಖೆಯವರು ಜಂಟಿಯಾಗಿ ಸದರಿ ಉದ್ಯಮಿಯವರ ಜಮೀನನ್ನು ಅಳತೆ ಮಾಡಬೇಕು. ನದಿ ಪ್ರದೇಶದ ಜಮೀನು ಒತ್ತುವರಿ ಮಾಡದಂತೆ ತಂತಿಬೇಲಿ ಹಾಕಿಸಬೇಕು. ಅಕ್ರಮವಾಗಿ ಮರಗಳನ್ನು ಕಡಿದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
- - -
(ಟಾಪ್ ಕೋಟ್) ಖಾಸಗಿ ಸ್ವತ್ತಿನಲ್ಲಿರುವ ಮರ ಕಡಿಯಬೇಕೆಂದರೂ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು. ನಮ್ಮ ಸಿಬ್ಬಂದಿ ಸದರಿ ಸ್ಥಳಕ್ಕೆ ಹೋಗಿ ಎಚ್ಚರಿಸಿದ ನಂತರ ಅನುಮತಿಗಾಗಿ ಖಾಸಗಿ ಜಮೀನಿನವರು ಅರ್ಜಿ ನೀಡಿದ್ದಾರೆ. ತುಂಗಭದ್ರಾ ನದಿಯ ಖರಾಬು ಪ್ರದೇಶದ ಮರಗಳನ್ನು ಕಡಿದಿದ್ದಾರೆಯೇ ಎಂದು ಪರಿಶೀಲಿಸಲು ಅಳತೆಗಾಗಿ ಭೂ ಮಾಪನಾ ಇಲಾಖೆಗೆ ಕೋರುತ್ತೇವೆ.
- ಶಣ್ಮುಖಪ್ಪ, ವಲಯ ಅರಣ್ಯಾಧಿಕಾರಿ, ಹರಿಹರ.- - -
-27HRR.02: ನದಿ ಪ್ರದೇಶಕ್ಕೆ ಸೇರಿದ್ದು ಎನ್ನಲಾದ ಜಾಗದಲ್ಲಿ ಮರ ಕಡಿದಿರುವುದು.-27HRR.02A: ನದಿ ಪ್ರದೇಶದ ಗಿಡಗಳನ್ನು ಬೆಂಕಿ ಹಾಕಿ ಸುಟ್ಟಿರುವುದು.