ಭೋರಿ ನಾಲಾದಿಂದ ಅಫಜಲಪುರ ತಾಲೂಕಿನ 10 ಹಾಗೂ ಆಳಂದ ತಾಲೂಕಿನ 3 ಕೆರೆಗಳು ಮತ್ತು ಅಮರ್ಜಾ ಬ್ಯಾರೇಜ್ ತುಂಬಿಸುವ 318 ಕೋಟಿ ರು.ವೆಚ್ಚದ ಮಹತ್ವಾಕಾಂಕ್ಷೆಯ ನೀರಿನ ಯೋಜನೆಯ ಪ್ರಾಯೋಗಿಕ ನೀರು ಹರಿಸುವ ಕಾರ್ಯ ಯಶಸ್ವಿಯಾಗಿದ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿಭೋರಿ ನಾಲಾದಿಂದ ಅಫಜಲಪುರ ತಾಲೂಕಿನ 10 ಹಾಗೂ ಆಳಂದ ತಾಲೂಕಿನ 3 ಕೆರೆಗಳು ಮತ್ತು ಅಮರ್ಜಾ ಬ್ಯಾರೇಜ್ ತುಂಬಿಸುವ 318 ಕೋಟಿ ರು.ವೆಚ್ಚದ ಮಹತ್ವಾಕಾಂಕ್ಷೆಯ ನೀರಿನ ಯೋಜನೆಯ ಪ್ರಾಯೋಗಿಕ ನೀರು ಹರಿಸುವ ಕಾರ್ಯ ಯಶಸ್ವಿಯಾಗಿದ. ಇದರೊಂದಿಗೆ 8 ವರ್ಷದಿಂದ ಕುಂಟುತ್ತಿದ್ದ ಕೆರೆ- ಕಟ್ಟೆ ತುಂಬಿಸುವ ಬಹುಕೋಟಿ ಮೊತ್ತದ ಯೋಜನೆ ಸುತ್ತ ಸಂಚಲನ ಮೂಡಿದೆ. ಸದರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಅಫಜಲ್ಪುರ ಹಾಗೂ ಆಳಂದ ರೈತ ಸಮೂಹದೊಂದಿಗೆ ಕಲಬುರಗಿ ಹಾಲು ಒಕ್ಕೂಟದ ಅಧ್ಯಕ್ಷ ಆರ್‌ ಕೆ ಪಾಟೀಲ್‌ ನೇತೃತ್ವದಲ್ಲಿ ನಡೆದ 19 ದಿನಗಳ (ಆ. 27 ರಿಂದ) ಧರಣಿ, ಅದು ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರ ಹಾಗೂ ಕೆಎನ್‌ಎನ್‌ಎಲ್‌ ಮೇಲೆ ಹುಟ್ಟು ಹಾಕಿದ್ದ ಒತ್ತಡದಿಂದಾಗಿ ಸದರಿ ಯೋಜನೆಯಲ್ಲಿ ಕೊನೆಗೂ ನೀರು ಹರಿದಿದ್ದು, ಈ ಯೋಜನೆಯ ಬಗ್ಗೆ, ಹೋರಾಟಗಳ ಬಗ್ಗೆ ರೈತರಲ್ಲಿ, ಸಾಮಾನ್ಯ ಜನರಲ್ಲಿ ವಿಶ್ವಾಸ, ನಿರೀಕ್ಷೆ ಮೂಡಿದೆ.ಕಾಮಗಾರಿಯಲ್ಲಿನ ಲೋಪಗಳನ್ನು ಸರಿಪಡಿಸಿ ಸೆ. 14 ಕ್ಕೆ ನಡೆಸಿದ ಟ್ರಯಲ್‌ನಿಂದ ಭೀಮೆಯ ನದಿಯ ಉಪ ನಾಲಾ ಭೋರಿ ಹಳ್ಳದಿಂದ ನೀರನ್ನೆತ್ತುವ ಕೆಲಸ ಸುಗಮವಾಗಿದ್ದು, ಇದರಿಂದ ಕೆರೆಗಳತ್ತ ನೀರು ದೌಡಾಯಿಸುತ್ತಿದೆ. ಅಮರ್ಜಾ ಅಣೆಕಟ್ಟೆ ತುಂಬುವ ಕೆಲಸವೂ ನಡೆಯಲಿದೆ.*318 ಕೋಟಿ ರು., 3 ಹಂತದ ಕಾಮಗಾರಿ: ಭೀಮಾ ನದಿಗೆ ಅಡ್ಡಲಾಗಿರುವ ಸೊನ್ನ ಜಲಾಶಯದಿಂದ ನೀರನ್ನೆತ್ತಿ ಅಫಜಲ್ಪೂರ, ಆಳಂದದ 13 ಕೆರೆ, ಅಮರ್ಜಾ ಕೆರೆಗೆ ನೀರು ತುಂಬಿಸುವ ಯೋಜನೆ ಹಲವು ಕಾರಣಗಳಿಂದಾಗಿ ಮೊದಲೇ ಕುಂಟುತ್ತಲೇ ಸಾಗಿರುವುದು ರೈತರ ದೌರ್ಬಾಗ್ಯ. ಬರಪೀಡಿತ ಆಳಂದ ಹಾಗೂ ಅಫಜಲ್ಪೂರ ತಾಲೂಕಿನ ಜನ- ಜಾನುವಾರುಗಳಿಗೆ, ಅನ್ನದಾತರಿಗೆ ಅನುಕೂಲವಾಗಲೆಂದು 2028ರಲ್ಲಿ ಶಾಸಕ ಬಿಆರ್‌ ಪಾಟೀಲರ ಒತ್ತಾಸೆಯಿಂದ 318 ಕೋಟಿ ರು. ಮೊತ್ತದ ಕರೆ, ಕಟ್ಟೆಗೆ ನೀರು ತುಂಬಿಸುವ ಸದರಿ ಯೋಜನೆಗೆ ಅನುಮತಿ ದೊರಕಿತ್ತು.2019ರ ಮಾರ್ಚ್‌ನಲ್ಲಿ ಅಧಿಕೃತವಾಗಿ ಕಾಮಗಾರಿ ಆರಂಭಗೊಂಡು ಗುತ್ತಿಗೆ ಕರಾರಿನ ಅನ್ವಯ 18 ತಿಂಗಳಲ್ಲಿ ಅಂದರೆ ಜುಲೈ 2020 ರೊಳಗೆ ಅದು ಪೂರ್ಣಗೊಂಡು ಅಫಜಲ್ಪೂರ ಹಾಗೂ ಆಳಂದದ ಕೆರೆ, ಕಟ್ಟೆಗಳು ನೀರಿನಿಂದ ತುಂಬಿತುಳುಕಾಡಬೇಕಿತ್ತು. ಆದರೆ ಹಲವು ಕಾರಣಗಳಿಂದ ಸದರಿ ಯೋಜನೆ ನನಗೆಗುದಿಗೆ ಬಿದ್ದಿತ್ತು.ಏತನ್ಮಧ್ಯೆ ಭೀಮಾ ಕೊಳವೆ ಮಾರ್ಗದಲ್ಲೇ ಚೆನ್ನೈ- ಸೂರತ್‌ ಗ್ರೀನ್‌ ಫೀಲ್ಡ್‌ ರಾಷ್ಟ್ರೀಯ ಹೆದ್ದರಿ ಕಾಮಗಾರಿ ನಡೆಯುತ್ತಿದೆ. ಇದನ್ನು ನಿರ್ವಹಿಸುತ್ತಿರುವ ರಾ.ಹೆ. ಪ್ರಾಧಿಕಾರ ರಸ್ತೆ ನಿರ್ಮಿಸಲು ಅಗೆಯುವಾಗ ಬಡದಾಳ- ಅರ್ಜುಣಗಿ ನಡುವೆ 19. 66 ಕೀಮೀ, ಚೈನೇಜ್‌ ಬಳಿ 1. 80 ಮೀ ವ್ಯಾಸದ ಕೊಳವೆ ತುಂಡು ಮಾಡಿ ಬಿಸಾಕಿದ್ದರೂ ಕೇಳುವವರಿರಲಿಲ್ಲ. ರೈತರನ್ನು ಒಗ್ಗೂಡಿಸಿ ಆರ್‌ಕೆ ಪಾಟೀಲ್‌ ನಡೆಸಿದ ಹೋರಾಟ ಜಿಲ್ಲಾಡಳಿತದ ಮುಂದೆ ಹಲವು ಪ್ರಶ್ನೆ ಹುಟ್ಟುಹಾಕಿದ್ದರ ಜತೆಗೆ ಹೊಸ ಸಂಚಲನ ಹುಟ್ಟುಹಾಕುವಲ್ಲಿ ಯಶ ಕಂಡಿದೆ.

ಮಾತು ಕೊಟ್ಟಂತೆ ಭೀಮಾ ನದಿಯ ನೀರನ್ನು ಅಮರ್ಜಾ ಜಲಾಶಯಕ್ಕೆ ತಲುಪಿಸಿ, ಅಫಜಲ್ಪುರದ 10 ಕೆರೆ, ಆಳಂದದ ಕೆರೆ, ಅಮರ್ಜಾ ಅಣೆ ತುಂಬಿಸುವ ಕೆಲಸವಾಗುತ್ತಿದೆ. ರೈತರ ಮತ್ತು ಸಾರ್ವಜನಿಕರ ದಶಕಗಳ ಕನಸು ನನಸಾಗಿದೆ. ನನ್ನ 19 ದಿನಗಳ ಹೋರಾಟಕ್ಕೆ ಸ್ಪಂದಿಸಿದ, ಬೆಂಬಲಿಸಿದ ಸಾರ್ವಜನಿಕರು, ಮಠಾಧೀಶರು, ಶಾಸಕರು, ಅಧಿಕಾರಿಗಳಿಗೆ ಧನ್ಯವಾದ. ನಮ್ಮ ಭಾಗದ ಕುಡಿಯುವ ನೀರಿನ ದಾಹ ತೀರಲಿದ್ದು, ಅನ್ನದಾತರ ಮೊಗದಲ್ಲಿ ಹರ್ಷ ಮೂಡಲಿದೆ ಎಂದು ಕಲಬುರಗಿ ಹಾಲು ಒಕ್ಕೂಟ ಅಧ್ಯಕ್ಷ ಆರ್‌ಕೆ ಪಾಟೀಲ್‌ ಹೇಳಿದರು.

ಧರಣಿಯಿಂದ ಸಂಚಲನ: ಅರ್ಜುಣಗಿ - ಬಡದಾಳ ನಡುವೆ ಕೊಳವೆ ತುಂಡಾಗಿರುವ ಸ್ಥಳದಲ್ಲೇ ಮಳೆ, ಬಿಸಿಲು ಎನ್ನದಂತೆ ಕೆಎಂಎಫ್‌ ಅಧ್ಯಕ್ಷ ಆರ್‌ಕೆ ಪಾಟೀಲ್‌ ನೇತೃತ್ವದಲ್ಲಿ ನಡೆದ 19 ದಿನಗಳ ಧರಣಿಯಲ್ಲಿ ಸಿದ್ದರಾಮ ಪ್ಯಾಟಿ, ಸತೀಶ ಕಡಗಂಚಿ ಸೇರಿದಂತೆ ಅವರ ಸಮಾನ ಮನಸ್ಕ ಗೆಳೆಯರು ಒಳಗೊಂಡು ನಿರಂತರತೆ ಕಾಪಾಡಿದ್ದರು. ಶಾಸಕರಾದ ಬಿಆರ್‌ ಪಾಟೀಲ್‌, ವೈಎಂ ಪಾಟೀಲ್‌, ಅಲ್ಲಂಪ್ರಭು ಪಾಟೀಲ್‌, ಡಿಸಿ ಇಕ್ರಮ್‌ ಶರೀಫ್‌, ನಿಗಮದ ಅಧಿಕಾರಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಮಾಜಿ ಸಚಿವ ಕಾಂತಾ, ಭೀಮಾ ತೀರದ ಹೋರಾಟಗಾರ ಪಂಚಪ್ಪ ಕಲಬುರಗಿ , ಅಫಜಲ್ಪುರ, ಆಳಂದ ಸುತ್ತಲಿನ ವಿವಿಧ ಮಠಗಳ ಮಠಾಧೀಶರು, ರೈತರು, ರೈತ ಮಹಿಳೆಯರು ಸಹಿತ ನಿತ್ಯ ನೂರಾರು ಜನ ಧರಣಿಗೆ ಬೆಂಬಲಿಸಿದ್ದರಿಂದ ಹೊಸ ಸಂಚಲನವೇ ಮೂಡಿತ್ತು.