ಸಾರಾಂಶ
ಪಟ್ಟಣದ ಎಂಸಿ ಡಿಸಿಸಿ ಬ್ಯಾಂಕ್ ವೃತ್ತದಿಂದ ಹಳೇ ಬಸ್ ನಿಲ್ದಾಣದ ರಸ್ತೆಯಲ್ಲಿ ಭಾನುವಾರದಿಂದ ದ್ವಿಚಕ್ರ ವಾಹನಗಳ ಎಡ, ಬಲ ನಿಲುಗಡೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಎಂಸಿ ಡಿಸಿಸಿ ಬ್ಯಾಂಕ್ ವೃತ್ತದಿಂದ ಹಳೇ ಬಸ್ ನಿಲ್ದಾಣದ ರಸ್ತೆಯಲ್ಲಿ ಭಾನುವಾರದಿಂದ ದ್ವಿಚಕ್ರ ವಾಹನಗಳ ಎಡ, ಬಲ ನಿಲುಗಡೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.ಪಟ್ಟಣದ ಎಂಸಿ ಡಿಸಿಸಿ ಬ್ಯಾಂಕ್ ನಿಂದ ಪೂರ್ವಕ್ಕೆ ತೆರಳುವ ಹಳೇ ಬಸ್ ನಿಲ್ದಾಣದ ರಸ್ತೆ ಬಲ ಭಾಗದ ರಸ್ತೆಯಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಎಡ ಭಾಗದ ರಸ್ತೆಯಲ್ಲಿ ಭಾನುವಾರ, ಮಂಗಳವಾರ, ಗುರುವಾರ, ಶನಿವಾರ ದ್ವಿಚಕ್ರ ವಾಹನಗಳನ್ನು ನಿಲ್ಲಿಸಬೇಕಿದೆ.
ಶನಿವಾರ ಎಂಸಿ ಡಿಸಿಸಿ ಬ್ಯಾಂಕ್ ಪೂರ್ವ ರಸ್ತೆಯ ಎರಡು ಬದಿಯಲ್ಲಿ ದ್ವಿಚಕ್ರ ವಾಹನಗಳ ನಿಲ್ಲಿಸಬೇಕು ಎಂದು ಪೊಲೀಸರು ರಸ್ತೆಯ ಎರಡು ಬದಿ ನಾಮಫಲಕ ಹಾಕಿ ಸುಗಮ ಸಂಚಾರಕ್ಕೆ ಅವಕಾಶ ಮಾಡಲು ಪ್ರಯತ್ನಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಎನ್.ಜಯಕುಮಾರ್ ಕನ್ನಡಪ್ರಭದೊಂದಿಗೆ ಮಾತನಾಡಿ, ಪ್ರಾಯೋಗಿಕವಾಗಿ ಭಾನುವಾರದಿಂದ ವಾಹನಗಳ ನಿಲುಗಡೆಗೆ ಚಾಲನೆ ಸಿಗಲಿದೆ. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.ಮೈಸೂರು-ಊಟಿ ಹೆದ್ದಾರಿಯ ಕರ್ನಾಟಕ ಬ್ಯಾಂಕ್, ಸೂರ್ಯ ಬೇಕರಿ, ಹಳೇ ಬಸ್ ನಿಲ್ದಾಣದಲ್ಲಿ ವಾಹನಗಳು ಅಡ್ಡಾ ದಿಡ್ಡಿ ನಿಲ್ಲಿಸದಂತೆ ಹೇಳಲು ಹೋಂ ಗಾರ್ಡ್ಗಳನ್ನು ನಿಯೋಜಿಸಲಾಗಿದೆ. ಪಟ್ಟಣದಲ್ಲಿ ವಾಹನಗಳು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಲಿದೆ. ಹಾಗಾಗಿ ಇನ್ಮುಂದೆಯಾದರೂ ಜನರು ಸಹಕಾರ ನಿಡಬೇಕು ಎಂದು ಮನವಿ ಮಾಡಿದರು.