ಕನ್ನಡಪ್ರಭ ವಾರ್ತೆ ಹಾಸನ

ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತ ಕೆ. ಆರ್‌. ಮಂಜುನಾಥ್ ಅವರಿಗೆ ಕೆ.ಕೆ. ಶೆಟ್ಟಿ ಕುತ್ತಿಕಾರ್‌ ದತ್ತಿನಿಧಿ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ. ಆರ್‌. ಮಂಜುನಾಥ್, ತಮ್ಮ ನಾಲ್ಕು ದಶಕಗಳ ಪತ್ರಿಕಾ ಬದುಕಿನ ನೆನಪುಗಳನ್ನು ಹಂಚಿಕೊಂಡು, ಪತ್ರಕರ್ತ ಜೀವನವನ್ನು ಹಂತ ಹಂತವಾಗಿ ಕಟ್ಟಿಕೊಂಡು ಬಂದಿದ್ದೇನೆ. ಹಿಂದಿನ ದಿನಗಳಲ್ಲಿ ಪತ್ರಿಕಾ ಕ್ಷೇತ್ರದಲ್ಲಿ ಪರಿಸ್ಥಿತಿಗಳು ತುಂಬಾ ಕಷ್ಟಕರವಾಗಿದ್ದವು. ಆರ್ಥಿಕವಾಗಿ ಸಂಕಷ್ಟಗಳಿದ್ದರೂ ವೃತ್ತಿಯ ಮೇಲಿನ ನಿಷ್ಠೆಯಿಂದ ಕೆಲಸ ಮಾಡಿದೆವು. ಇಂದು ನನಗೆ ಕೆ.ಕೆ. ಶೆಟ್ಟಿ ಕುತ್ತಿಕಾರ್‌ ದತ್ತಿನಿಧಿ ಪ್ರಶಸ್ತಿ ಲಭಿಸಿರುವುದು ಸಂತೋಷ ತಂದಿದೆ. ಈ ಪ್ರಶಸ್ತಿ ಸಿಗುತ್ತದೆ ಎಂಬ ನಿರೀಕ್ಷೆಯೇ ಇರಲಿಲ್ಲ. ೧೯೯೬ರಲ್ಲಿ ಶೇಷಾದ್ರಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತಾವು ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ನೆನಪುಗಳನ್ನು ಅವರು ಹಂಚಿಕೊಂಡರು. ನಂತರ ಸಂಘದ ಅಧ್ಯಕ್ಷರಾಗಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವುದಾಗಿ ಹೇಳಿದರು. ಪತ್ರಿಕೋದ್ಯಮವನ್ನು ಶ್ರಮ, ತಾಳ್ಮೆ ಹಾಗೂ ಪ್ರಾಮಾಣಿಕತೆಯಿಂದ ಮಾಡಬೇಕು. ಹಿರಿಯರು, ಕಿರಿಯರು ಎಲ್ಲರೂ ನನ್ನನ್ನು ಗೌರವಿಸಿ ಅಭಿನಂದಿಸಿರುವುದು ಸಂತೋಷ ತಂದಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಂಘದ ಅಧ್ಯಕ್ಷ ಜೆ. ಆರ್‌. ಕೆಂಚೇಗೌಡ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷ ಉದಯಕುಮಾರ್ ಮಾತನಾಡಿ, ಮಾಜಿ ಅಧ್ಯಕ್ಷ ಅತೀಖುರ್ ರೆಹಮಾನ್ ಮಾತನಾಡಿದರು. ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ, ಕಿರಿಯ ಪತ್ರಕರ್ತರು ಇದ್ದರು.