ಉಗ್ರರ ದಾಳಿಯಲ್ಲಿ ಮೃತರಾದವರಿಗೆ ಶ್ರದ್ಧಾಂಜಲಿ

| Published : Apr 24 2025, 12:04 AM IST

ಸಾರಾಂಶ

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಕೋರಿ ಹಾಗೂ ಉಗ್ರರ ಹೆಡೆ ಮುರಿಕಟ್ಟುವಂತೆ ಆಗ್ರಹಿಸಿ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ್ ದಳದ ನೇತೃತ್ವದಲ್ಲಿ ಕ್ಯಾಂಡಲ್ ಹಿಡಿದು ಮೌನ ಪ್ರತಿಭಟನೆ ರ್‍ಯಾಲಿ ಬುಧವಾರ ಸಂಜೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಕೋರಿ ಹಾಗೂ ಉಗ್ರರ ಹೆಡೆ ಮುರಿಕಟ್ಟುವಂತೆ ಆಗ್ರಹಿಸಿ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ್ ದಳದ ನೇತೃತ್ವದಲ್ಲಿ ಕ್ಯಾಂಡಲ್ ಹಿಡಿದು ಮೌನ ಪ್ರತಿಭಟನೆ ರ್‍ಯಾಲಿ ಬುಧವಾರ ಸಂಜೆ ನಡೆಸಲಾಯಿತು.

ಮುಖಂಡ ಅಳ್ಳಳ್ಳಿ ವೀರೇಶ್ ಮಾತನಾಡಿ, ಜಮ್ಮುಕಾಶ್ಮೀರಕ್ಕೆ ಪ್ರವಾಸಕ್ಕೆಂದು ತೆರಳಿದ್ದವರ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಿಂದ ಕರ್ನಾಟಕದ 3 ಸೇರಿ ಒಟ್ಟು 28 ಜನರು ಮೃತರಾಗಿದ್ದು ಇದು ಹೇಯ ಕೃತ್ಯವಾಗಿದೆ. ಪ್ರವಾಸಕ್ಕೆ ತೆರಳಿದ್ದವರಲ್ಲಿ ಪುರುಷರನ್ನೇ ಗುರಿಯಾಗಿಸಿಕೊಂಡು ಅವರ ಒಳ ಉಡುಪು ತೆಗೆದು ಅವರು ಹಿಂದೂಗಳೆಂದು ಖಾತ್ರಿ ಪಡಿಸಿಕೊಂಡು ಅವರನ್ನು ಕೊಲ್ಲಲಾಗಿದೆ. ಇದರಿಂದ ಹಿಂದೂಗಳಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಸಭೆ ನಡೆಸಿದ್ದು, ಕೂಡಲೇ ಉಗ್ರರನ್ನು ಸದೆ ಬಡೆಯುವ ಜೊತೆಗೆ ಸರ್ಜಿಕಲ್ ಸ್ಟ್ರೈಕ್ 3.0 ಕೈಗೆತ್ತಿಕೊಂಡು ಉಗ್ರ ಸಂಘಟನೆಗಳ ನಿರ್ನಾಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಇಲ್ಲಿನ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ರ್‍ಯಾಲಿ ಮುಖ್ಯ ರಸ್ತೆಯ ಮಾರ್ಗವಾಗಿ ತೆರಳಿ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದ ಬಳಿ ಸಮಾವೇಶಗೊಂಡಿತು.

ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪುಟ್ಟಿ ಸಚಿನ್, ಕಾರ್ಯದರ್ಶಿ ಎಸ್.ಎಂ. ಗುರುಪ್ರಸನ್ನ, ಬಜರಂಗದಳದ ಸಂಚಾಲಕ ಕಾರ್ತಿಕ್, ಸಂಘಟನೆಯ ಪ್ರಮುಖರಾದ ಕೃಷ್ಣ, ಇಂದ್ರಜಿತ್ ಸಿಂಗ್, ಸೋಮಶೇಖರ್, ಸಿ.ಡಿ. ಮಹದೇವ್, ಪಿ. ಬ್ರಹ್ಮಯ್ಯ, ಎಸ್.ಎಂ. ನಾಗರಾಜ್, ವಿ.ಎಲ್. ಬಾಬು, ಶ್ರೀಧರ್ ಶ್ರೇಷ್ಠಿ, ರಾಮಾಂಜಿನಿ, ಚಂದ್ರಕಾಂತ್ ರೆಡ್ಡಿ, ಅಗಳಿ ಪಂಪಾಪತಿ, ಜಿ.ಸುಧಾಕರ್, ಎಸ್. ಡಿ. ಬಸವರಾಜ್ ಸೇರಿ ಅನೇಕರಿದ್ದರು.ಸಂಡೂರು; ಭಯೋತ್ಪಾದಕರ ದಾಳಿಗೆ ಖಂಡನೆ:

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಸಿಐಟಿಯು ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ ಎಂದು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಹೇಡಿತನದ ಹಿಂಸಾಚಾರವು ಶಾಂತಿ, ಮಾನವೀಯತೆ ಮತ್ತು ನಾವು ಪ್ರೀತಿಸುವ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ. ಈ ಅಮಾನವೀಯ ಕೃತ್ಯದ ಅಪರಾಧಿಗಳನ್ನು ತ್ವರಿತವಾಗಿ ಬಂಧಿಸಿ, ಉಗ್ರ ಶಿಕ್ಷೆಗೆ ಒಳಪಡಿಸಬೇಕು ಮತ್ತು ನಿರ್ಣಾಯಕವಾಗಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು, ಕಾಶ್ಮೀರ ಸಮಸ್ಯೆಗೆ ಶಾಶ್ವತವಾದ ರಾಜಕೀಯ ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.