ಗದಗ: ಆಧುನಿಕ ಧಾವಂತ ಮತ್ತು ಒತ್ತಡದ ಜೀವನ ಶೈಲಿಯಲ್ಲಿ ಸಂಗೀತ ಆಲಿಸುವಿಕೆಯಿಂದ ನಿಜ ಶಾಂತಿ, ನೆಮ್ಮದಿ ಪ್ರಾಪ್ತವಾಗುತ್ತದೆ ಎಂದು ಐಎಂಎ ಮಾಜಿ ಅಧ್ಯಕ್ಷೆ ಡಾ. ರಾಧಿಕಾ ಕುಲಕರ್ಣಿ ಹೇಳಿದರು.

ನಗರದಲ್ಲಿ ಮರಾಠಿ ವಾಙ್ಮಯ ಪ್ರೇಮಿ ಮಂಡಳದಿಂದ ಇತ್ತೀಚಿಗೆ ಭಾರತರತ್ನ ಭೀಮಸೇನ ಜೋಶಿ ಅವರ ಪುಣ್ಯಸ್ಮರಣೆಯ ನಿಮಿತ್ತ ಜರುಗಿದ 15ನೇ ಸ್ವರನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದಿನ ಯುವಜನತೆ ಪಾಶ್ಚಾತ್ಯ ಸಂಗೀತ ಮತ್ತು ಅಂತರ ಜಾಲದ ಲೋಕದಲ್ಲಿ ಮುಳುಗಿದ್ದು, ಅವರು ಇಂತಹ ಸದಭಿರುಚಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾದ ಅವಶ್ಯಕತೆ ಇದೆ ಎಂದರು. ವೈದಿಕ ವಿದ್ವಾಂಸ ರತ್ನಾಕರಭಟ್‌ ಜೋಶಿ ಮಾತನಾಡಿ, ಮರಾಠಿ ಮಂಡಳದಲ್ಲಿ ಪಂಡಿತ ಭೀಮಸೇನ ಜೋಶಿ ಸೇರಿದಂತೆ ಅನೇಕ ರಾಷ್ಟ್ರೀಯ ಮಟ್ಟದ ಸಂಗೀತ ಕಲಾವಿದರು, ಸಂಗೀತ ಕಚೇರಿಗಳನ್ನು ನೀಡಿದ್ದು ಇಲ್ಲಿ ಪಂಡಿತಜಿ ಅವರ ಸ್ವರನಮನ ಕಾರ್ಯಕ್ರಮ ಜರುಗುತ್ತಿರುವುದು ಸಂತೋಷವನ್ನುಂಟು ಮಾಡಿದೆ ಎಂದರು.

ಖ್ಯಾತ ವೈದ್ಯ ಡಾ. ಉದಯ ಕುಲಕರ್ಣಿ, ಸಂಗೀತ ಕಲಾವಿದೆ ಗಾಯಿತ್ರಿ ಟೋಣಪಿ, ಭೀಮಸೇನ ಜೋಶಿ ಪ್ರತಿಷ್ಠಾನದ ಅಧ್ಯಕ್ಷ ಪಂ. ಅರವಿಂದ ಹುಯಿಲಗೋಳಕರ, ರವೀಂದ್ರ ಜೋಶಿ, ವಾದಿರಾಜ ಜೋಶಿ, ವಾಸುದೇವಾಚಾರ್ಯ ಹೂಲಿ, ಶ್ರೀಕಾಂತ ಹೂಲಿ, ಆರ್.ಎಸ್. ಕುಲಕರ್ಣಿ, ಡಾ. ರಾಜಶೇಖರ ಬಳ್ಳಾರಿ, ಡಾ. ಹಿರೇಗೌಡರ, ಪ್ರಾಣೇಶ ಕುಲಕರ್ಣಿ, ಗೋಡಬೋಲೆ, ಎಚ್.ಪಿ. ಸುಬ್ಬಣ್ಣವರ, ಡಾ. ಸುಬ್ಬಣ್ಣವರ, ಕೃಷ್ಣಾಜಿ ನಾಡಿಗೇರ, ಅನಿಲ ಪುರಾಣಿಕ, ಎಸ್.ಎಲ್.ಹುಯಿಲಗೋಳ, ವಿ.ಆರ್.ಗುಡಿ, ವಾಣಿಶ್ರೀ ರಾಜಪುರೋಹಿತ, ವೈಶಾಲಿ ಕುಲಕರ್ಣಿ, ಹನುಮಂತ ಮಳಲಿ, ಸುಮನ್ ಪಾಟೀಲ, ಮಹಾಂತೇಶ ಮಾಸ್ತಮರ್ಡಿ ಸೇರಿದಂತೆ ಸಂಗೀತಾಸ್ತಕರು ಇದ್ದರು.

ಅರುಣ ರಾಜಪುರೋಹಿತ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ನಂತರ ಭೀಮಸೇನ ಜೋಶಿಯವರ ನೇರ ಶಿಷ್ಯರಾದ ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದ ಪಂ. ಮಾಧವ ಗುಡಿಯವರ ಸುಪುತ್ರಿ ಗಾಯಿತ್ರಿ ಟೋಣಪಿ (ಗುಡಿ) ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸಂತವಾಣಿ ಹಾಗೂ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ವಿಠ್ಠಲ ಕಟ್ಟೆಣ್ಣವರ ಸಂವಾದಿನಿ ಹಾಗೂ ಜಯತೀರ್ಥ ಪಂಚಮುಖಿ ತಬಲಾಸಾಥ್ ನೀಡಿದರು. ಐಶ್ವರ್ಯಾ ಹೂಲಿ ತಾನಪುರ ಮತ್ತು ಸಚಿನ್ ಹುಯಿಲಗೋಳಕರ ತಾಳ ಸಾಥ್ ನೀಡಿದರು.