ಅಸಹಾಯಕತೆಗೆ ಸ್ಪಂದಿಸುವುದೇ ನಿಜವಾದ ಧರ್ಮ: ವಾಸರೆ

| Published : Nov 16 2025, 02:45 AM IST

ಸಾರಾಂಶ

ಅಬಲರ ಅಸಹಾಯಕತೆಗೆ ಸ್ಪಂದಿಸುವುದೇ ನಿಜವಾದ ಜೀವನ ಧರ್ಮ. ಅದು ಸಂಘಟನೆಯ ಧ್ಯೇಯ ಕೂಡಾ ಆಗಬೇಕು.

ರಾಜ್ಯ ಸರ್ಕಾರಿ ನೌಕರರ ಸಂಘದ ದಾಂಡೇಲಿ ಘಟಕದ ವಾರ್ಷಿಕ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಕನ್ನಡಪ್ರಭ ವಾರ್ತೆ ದಾಂಡೇಲಿ

ಅಬಲರ ಅಸಹಾಯಕತೆಗೆ ಸ್ಪಂದಿಸುವುದೇ ನಿಜವಾದ ಜೀವನ ಧರ್ಮ. ಅದು ಸಂಘಟನೆಯ ಧ್ಯೇಯ ಕೂಡಾ ಆಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಹೇಳಿದರು.

ಇಲ್ಲಿಯ ರೋಟರಿ ಶಾಲಾ ಸಭಾಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದಾಂಡೇಲಿ ತಾಲೂಕು ಘಟಕದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು. ದಾಂಡೇಲಿಯ ಸರ್ಕಾರಿ ನೌಕರರ ಸಂಘಟನೆ ಜನಹಿತ ಕಾರ್ಯಗಳನ್ನು ಮಾಡುತ್ತಿದೆ. ನೌಕರನೋರ್ವನ ಮಗ ಆನಾರೋಗ್ಯದಿಂದ ಸಮಸ್ಯೆಯಲ್ಲಿದ್ದಾಗ ಅವರಿಗೆ ಹಣಕಾಸಿನ ನೆರವು ನೀಡಿ ಸಹಾಯ ಮಾಡಿದೆ. ಇದೇ ನಿಜವಾದ ಮನುಷ್ಯತ್ವ ಎಂದು ತಿಳಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚವ್ಹಾಣ ಮಾತನಾಡಿ, ಸರ್ಕಾರಿ ನೌಕರರು ಒಮ್ಮೊಮ್ಮೆ ವಿನಾಕಾರಣವಾಗಿ ಆರೋಪಕ್ಕೆ, ಶಿಕ್ಷೆಗೆ ಗುರಿಯಾಗುತ್ತಾರೆ. ಇಂತಹ ಸಂದರ್ಭದಲ್ಲಿ ಸಂಘಟನೆ ಗಟ್ಟಿಯಾದ ಧ್ವನಿ ಎತ್ತಬೇಕು ಎಂದು ಹೇಳಿದರು.

ಸಂಘದ ಮಾಜಿ ಅಧ್ಯಕ್ಷ ಸುರೇಶ ನಾಯಕ ಮಾತನಾಡಿ, ಸರ್ಕಾರಿ ನೌಕರರು ಸಂಘಟನೆ ಬಲಪಡಿಸುವಂತೆ ಹಾಗೂ ನೌಕರರ ಭವನವನ್ನು ಆದಷ್ಟು ಬೇಗ ನಿರ್ಮಿಸಿಕೊಳ್ಳುವಂತೆ ತಿಳಿಸಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉತ್ಪಲ ಶಿರೋಡ್ಕರ ಅಧ್ಯಕ್ಷತೆ ವಹಿಸಿದ್ದರು. ವಲಯ ಅರಣ್ಯಾಧಿಕಾರಿ ಎನ್.ಎಲ್. ನದಾಫ್‌, ಸಂಘದ ಗೌರವಾಧ್ಯಕ್ಷ ಬಸವರಾಜ ಉಪಸ್ಥಿತರಿದ್ದರು.

ರಾಜ್ಯ ಪರಿಷತ್ ಸದಸ್ಯ ವಿನಾಯಕ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಗೌಡಪ್ಪ ಬನಕದಿನ್ನಿ ವರದಿ ವಾಚಿಸಿದರು. ಕಾರ್ಯದರ್ಶಿ ಪ್ರವೀಣ ನಾಯ್ಕ ಸ್ವಾಗತಿಸಿದರು. ನಾಗರಾಜ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ನಿವೃತ್ತ ಶಿಕ್ಷಕರು ಹಾಗೂ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರು ಸಹಕರಿಸಿದರು.