ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಸೈಬರ್ ಭದ್ರತಾ ಆಡಳಿತ ಘಟಕ ಸ್ಥಾಪನೆ ಸಾಮಾಜಿಕ ಜಾಲತಾಣದ ಸೈಬರ್ ಅಪರಾಧ ನಿಯಂತ್ರಣ ಸೇರಿದಂತೆ ಹಲವು ಯೋಜನೆಗಳಿಗೆ ಸಾಹೇ ವಿಶ್ವವಿದ್ಯಾಲಯ, ಸ್ಮಾರ್ಟ್ ಸಿಟಿ ತುಮಕೂರು ಒಡಂಬಡಿಕೆಗೆ ಸಹಿ ಹಾಕಲಾಯಿತು. ಹಸ್ತಾಕ್ಷ ಲ್ಯಾಬ್ ಸಹಯೋಗದೊಂದಿಗೆ ಸೈಬರ್ ಭದ್ರತಾ ಆಡಳಿತ ಕೋಶದ ಸ್ಥಾಪನೆ, ಸೈಬರ್ ಭದ್ರತಾ ಉಪಕ್ರಮಗಳಿಗೆ ಭದ್ರತಾ ಲೆಕ್ಕಪರಿಶೋಧಕರು, ಮತ್ತು ಸೈಬರ್ ತಜ್ಞರನ್ನು ಸಕ್ರಿಯಗೊಳಿಸುವುದು, ಇಂಟರ್ನ ಶಿಪ್ಗಳು ಮತ್ತು ಜಂಟಿ ಯೋಜನೆಗಳು ಸೇರಿದಂತೆ ಇತ್ಯಾದಿ ವಿಷಯಗಳನ್ನು ಕುರಿತಂತೆ ಒಡಂಬಡಿಕೆಗೆ ಗುರುವಾರ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಾಯಿತು.ನಗರದ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಗುರುವಾರದಂದು ಏರ್ಪಟ್ಟ ಒಡಂಬಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ , ತಂತ್ರಜ್ಞಾನದ ಸರಿಯಾದ ಬಳಕೆಯಿಂದ ಮಾನವ ಸಮಾಜವು ಸುಸಂಸ್ಕೃತವಾಗುತ್ತಾ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ, ಆದರೆ ಅಪರಾಧ ಪ್ರವೃತ್ತಿಯ ಕೆಲವರು ಅದನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಹಾನಿ ಮಾಡುತ್ತಿದ್ದಾರೆ. ಸಮಾಜದ ಭದ್ರತೆಗೆ ಸುಧಾರಿತ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿಕೊಂಡು ಸೈಬರ್ ಅಪರಾಧಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ತಿಳಿಸಿದರು.ಕಳ್ಳತನ ವಂಚನೆ ಅಪರಾಧಗಳು ಈಗ ಡಿಜಿಟಲ್ ರೂಪದಲ್ಲಿದ್ದು ಇದರಿಂದ ಎಲ್ಲ ವರ್ಗದ ನಾಗರಿಕರು ಎಚ್ಚರಿಕೆಯಿಂದ ತಂತ್ರಜ್ಞಾನವನ್ನು ಬಳಸುವಂತಹಹಾಗಬೇಕು. ಯಾವುದೇ ಲಿಂಕ್ ಗಳನ್ನು ಪರಾಮರ್ಶೆ ಪರಿಶೀಲನೆ ಮಾಡದೆ ಓಪನ್ ಮಾಡಬಾರದು ಇದಕ್ಕಾಗಿ ಸುರಕ್ಷಿತವಾದ ತಂತ್ರಜ್ಞಾನದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಬೇಕು ಎಂದು ಅವರು ಕಿವಿ ಮಾತು ಹೇಳಿದರು. ಸುಧಾರಿತ ತಂತ್ರಾಂಶವನ್ನು ಸರ್ಕಾರದ ಇಲಾಖೆಗಳು ಅಳವಡಿಸಿಕೊಂಡಿದ್ದು ನಾವು ಅಪರಾಧಿಗಳ ಪತ್ತೆಹಚ್ಚಲು ಅನೇಕ ವಿಧಾನದಲ್ಲಿ ಪ್ರಯತ್ನಿಸುತ್ತೇವೆ ಅದೇ ರೀತಿಯಾಗಿ ಸಾರ್ವಜನಿಕರು ಕೂಡ ಸುಧಾರಿತವಾದ ತಂತ್ರಾಂಶವನ್ನು ತಾವು ಬಳಸುವ ಮೊಬೈಲ್ , ಕಂಪ್ಯೂಟರ್ ಇತರ ಸಾಧನಗಳಲ್ಲಿ ಅಳವಡಿಸಿಕೊಂಡರೆ ಸೈಬರ್ ಅಪರಾಧವನ್ನು ತಡೆಗಟ್ಟಬಹುದಾಗಿದೆ. ಇಂದಿನ ಯುವ ಜನರು ವಿವಿಧ ರೀತಿಯ ತರಹೇವಾರಿ ರೀಲ್ಸ್ ಆ್ಯಪ್, ಫೋಟೋ ಡಿಸೈನ್ ಸೇರಿದಂತೆ ಇತರೆ ಆ್ಯಪ್ ಬಳಸುವ ಮುನ್ನ ಮುಂಜಾಗ್ರತೆಯ ಕ್ರಮಗಳನ್ನು ಅನುಸರಿಸುವುದು ಸೂಕ್ಷ್ಮವಾಗಿರುವ ವಿಚಾರವಾಗಿದೆ ಎಂದು ಕೆ.ವಿ.ಆಶೋಕ್ ತಿಳಿಸಿದರು. ತುಮಕೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ತುಮಕೂರಿನ ನಿರ್ದೇಶಕರಾದ ಬಿವಿ ಅಶ್ವಿಜಾ ಮಾತನಾಡಿ, ಭಾರತದಲ್ಲಿ ತುಮಕೂರು ನಗರ ಏಳನೇ ಸ್ಮಾರ್ಟ್ ಸಿಟಿಯಾಗಿ ಹೊರಹೊಮ್ಮಿ ಅನೇಕ ಮಹತ್ತರವಾದ ಸಾಧನೆಗಳನ್ನು ಮಾಡಿದೆ. ಇಂದು ತುಮಕೂರು ನಗರವನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಣೆ ಮಾಡುತ್ತಿದ್ದು ನಗರದ ಹೊರವಲಯ ಸೇರಿದಂತೆ ನಗರಕ್ಕೆ ಬರುವ ರಸ್ತೆಗಳಲ್ಲಿ ಹೈಜೆನಿಕ್ ಕ್ಯಾಮೆರಾ ಗಳನ್ನು ಅಳವಡಿಸಿ ಪ್ರತಿಯೊಂದು ಕಾರ್ಯ ಚಟುವಟಿಕೆಗಳನ್ನು ಕಣ್ಗಾವಲಿನಲ್ಲಿ ಕಾಯಲಾಗುತ್ತಿದೆ. ನಗರದಲ್ಲಿ ಇದರಿಂದ ಅಪರಾಧ ಪ್ರಕರಣಗಳು ಸೇರಿದಂತೆ ಆರೋಪಿಗಳನ್ನು ಪತ್ತೆ ಮಾಡಲು ಸುಲಭವಾದ ವಿಧಾನಗಳನ್ನು ಕಂಡುಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಐ ಟಿ ಪ್ರಾಂಶುಪಾಲ ಡಾ.ಎಂ.ಎಸ್ ರವಿಪ್ರಕಾಶ್, ಡೀನ್ ಡಾ.ರೇಣುಕಾಲತಾ, ಅಸ್ತಾಕ್ಷ ಲ್ಯಾಬ್ ನ ನಿದೇರ್ಶಕರಾದ ನಂದಿಧರ್ಮ ಕಿಶೋರ್, ಸ್ಟಾರ್ಟ್ ಆಫ್ ತುಮಕೂರು ಸಂಸ್ಥಾಪಕ ಸೂರತ್ ಉಜ್ಜಿನ್, ಸಿದ್ದಾರ್ಥ ಸ್ಕೂಲ್ ಆಫ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜೀವ್ಕುಮಾರ್ ಎಸ್, ಎಚ್.ಎಂ,ರಾಜೇಶ್, ತಮಕೂರು ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ವಿದ್ಯಾರ್ಥಿಗಳು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.