ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ತುಮಕೂರು ದಸರಾ ಉತ್ಸವವು ಇಂದಿನಿಂದಲೇ ವಿದ್ಯುಕ್ತವಾಗಿ ಪ್ರಾರಂಭವಾಗಲಿದ್ದು, ಉತ್ಸವದ ಅಂಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭವ್ಯವಾಗಿ ನಿರ್ಮಿಸಿರುವ ತ್ರಿವಿಧ ದಾಸೋಹಿ ಶಿವಕುಮಾರ ಮಹಾ ಸ್ವಾಮೀಜಿಯವರ ದಸರಾ ಧಾರ್ಮಿಕ ಮಹಾಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ಬೆಳಗ್ಗೆ 5 ಗಂಟೆಗೆ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಗುವುದು. ನವರಾತ್ರಿ ಪ್ರಯುಕ್ತ ಶ್ರೀ ಚಾಮುಂಡೇಶ್ವರಿ ದೇವಿಗೆ ಉತ್ಸವದ ಮೊದಲ ದಿನ ಶೈಲಪುತ್ರಿ ಅಲಂಕಾರವನ್ನು ಮಾಡಲಾಗುವುದು.ಇಂದಿನ ದಸರಾ ಉತ್ಸವ ಕಾರ್ಯಕ್ರಮಗಳು ದಸರಾ ಉತ್ಸವದ ಪ್ರಯುಕ್ತ ಧಾರ್ಮಿಕ ಮಹಾಮಂಟಪದಲ್ಲಿ ಬೆಳಗ್ಗೆ 5 ಗಂಟೆಗೆ ನಾದಸ್ವರದೊಂದಿಗೆ ಭೂಮಿಪೂಜೆ ಹಾಗೂ ಧ್ವಜಾರೋಹಣವನ್ನು ನೆರವೇರಿಸಲಾಗುವುದು. ನಂತರ ಬೆಳಗ್ಗೆ 8 ಗಂಟೆಗೆ ನಗರದ ಸರ್ವೋದಯ ಹೈಸ್ಕೂಲ್ ಮೈದಾನದಲ್ಲಿ ಹಾಟ್ ಏರ್ ಬಲೂನ್ಗೆ ಚಾಲನೆ ನೀಡಲಾಗುವುದು.ಬೆಳಗ್ಗೆ 9.30 ಗಂಟೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಹಾಸ್ಯ ಚಕ್ರವರ್ತಿ ಶ್ರೀ ಟಿ.ಆರ್. ನರಸಿಂಹರಾಜು ಸಾಂಸ್ಕೃತಿಕ ದಸರಾ ವೈಭವ ವೇದಿಕೆಯಲ್ಲಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ದಸರಾ ಸಾಂಸ್ಕೃತಿಕ ವೈಭವಕ್ಕೆ ಚಾಲನೆ ನೀಡಲಿದ್ದಾರೆ.ಈ ಸಂದರ್ಭದಲ್ಲಿ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ, ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ. ಜಯಚಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಸಂಗಪ್ಪ ತಂಗಡಗಿ, ಸೇರಿದಂತೆ ಮತ್ತಿತರ ಜನಪ್ರತಿನಿಧಿಗಳು ಗಣ್ಯರು ಅಧಿಕಾರಿಗಳು ಉಪಸ್ಥಿತರಿರುತ್ತಾರೆ.ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಅಧ್ಯಕ್ಷತೆಯಲ್ಲಿ ಸಿದ್ಧಗಂಗಾ ಮಠದ ಶ್ರೀಶ್ರೀಶ್ರೀ ಸಿದ್ಧಲಿಂಗ ಸ್ವಾಮಿಜಿ, ಎಲೆರಾಂಪುರ ಕುಂಚಿಟಿಗರ ಮಠದ ಶ್ರೀಶ್ರೀಶ್ರೀ ಡಾ.ಹನುಮಂತನಾಥ ಸ್ವಾಮೀಜಿ, ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮಿ, ಸಿದ್ಧರಬೆಟ್ಟ ಮಠದ ಶ್ರೀ ಬಾಳೆಹೊನ್ನೂರು ಶ್ರೀಷ.ಬ್ರ. ವೀರಭದ್ರ ಶಿವಾಚಾರ್ಯ ಸ್ವಾಮಿ ಹಾಗೂ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಲಿದೆ.ನಂತರ ಬೆಳಗ್ಗೆ 10 ಗಂಟೆಗೆ ತುಮಕೂರು ವಿಶ್ವವಿದ್ಯಾಲಯದ ಹೆಲಿಪ್ಯಾಡ್ನಲ್ಲಿ ಹೆಲಿರೈಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಸಂಜೆ 4 ಗಂಟೆಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಹಾಸ್ಯ ಚಕ್ರವರ್ತಿ ಶ್ರೀ ಟಿ.ಆರ್. ನರಸಿಂಹರಾಜು ಸಾಂಸ್ಕೃತಿಕ ದಸರಾ ವೈಭವ ವೇದಿಕೆಯಲ್ಲಿ ಸುಗಮಸಂಗೀತ, ಶಾಸ್ತ್ರೀಯ ಸಂಗೀತ, ರಂಗಗೀತೋತ್ಸವ, ಜಾನಪದ ನೃತ್ಯ, ನೃತ್ಯ ರೂಪಕ, ಕಂಸಾಳೆ ಸೇರಿದಂತೆ ಹೆಚ್ಚು ಜನಪದ ಹಾಗೂ ಶಾಸ್ತ್ರೀಯ ಕಲಾವಿದರ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6 ಗಂಟೆಗೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಿರ್ಮಿಸಿರುವ ಮಾಸ್ಟರ್ ಹಿರಣ್ಣಯ್ಯ ರಂಗ ವೇದಿಕೆಯಲ್ಲಿ ರಂಗ ದಸರಾ ನಾಟಕೋತ್ಸವ ನಡೆಯಲಿದೆ. ಸಂಜೆ 6.30 ಗಂಟೆಗೆ ಬಿ.ಜಿ.ಎಸ್. ವೃತ್ತದಲ್ಲಿ ದಸರಾ ವಿಶೇಷ ದೀಪಾಲಂಕಾರ ಉದ್ಘಾಟನೆ ಹಾಗೂ ಅಂಬಾರಿ ಸಿಟಿ ಬಸ್ ಪ್ರಯಾಣಕ್ಕೆ ಚಾಲನೆ ನೀಡಲಾಗುವುದು.