ಕನ್ನಡಪ್ರಭ ವಾರ್ತೆ, ತುಮಕೂರು

ಅಕ್ಷರ, ಅನ್ನ, ಆಶ್ರಯ ಸೇವೆಯ ಮೂಲಕ ತ್ರಿವಿಧ ದಾಸೋಹಿಯಾಗಿರುವ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳಿಂದಾಗಿ ತುಮಕೂರು ನಗರ ದಾಸೋಹ ಯೂನಿವರ್ಸಿಟಿಯಾಗಿದೆ. ಸ್ವಾಮೀಜಿಗಳ ದಾಸೋಹ ಪ್ರೇರಣೆ ಹಾಗೂ ಅವರ ಮೇಲಿನ ಭಕ್ತಿಯಿಂದಾಗಿ ನಗರದಲ್ಲಿ ಭಕ್ತರು, ಸಂಘಸಂಸ್ಥೆಗಳು ರಾಮನವಮಿಯಾಗಲಿ, ಹನುಮ ಜಯಂತಿಯಾಗಲಿ, ರಾಜ್ಯೋತ್ಸವವಾಗಲಿ ಅಲ್ಲಿ ಅನ್ನದಾಸೋಹ ಏರ್ಪಡಿಸುವ ಪದ್ದತಿ ರೂಢಿಸಿಕೊಂಡಿದ್ದಾರೆ ಎಂದು ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶನಿವಾರ ನಗರದ ವಿಶ್ವವಿದ್ಯಾಲಯ ಎದುರು ಬಸವ ಸೇವೆ, ಕನ್ನಡ ಮತ್ತು ಸಂಸ್ಕೃತಿ ವೇದಿಕೆ ಹಾಗೂ ಭಕ್ತರು ಡಾ. ಶಿವಕುಮಾರ ಸ್ವಾಮೀಜಿಗಳ 119ನೇ ಜನ್ಮವರ್ಧಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಾಮೀಜಿಗಳಿಗೆ ಭಕ್ತಿ ಸಮರ್ಪಣೆ ಹಾಗೂ ಅನ್ನದಾಸೋಹ ಕಾರ್ಯಕ್ರಮದಲ್ಲಿ ದಾಸೋಹ ವಿತರಣೆ ಮೂಲಕ ಹಿರೇಮಠ ಶ್ರೀಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದು ಡಾ. ಶಿವಕುಮಾರ ಸ್ವಾಮೀಜಿಗಳನ್ನು ನಾವು ಭಕ್ತಿಯಿಂದ ಸ್ಮರಿಸುತ್ತೇವೆ. ಅವರ ತ್ರಿವಿಧ ದಾಸೋಹ ಸೇವೆ ವಿಶ್ವವಿಖ್ಯಾತವಾಗಿದೆ, ಪೂಜ್ಯರ ಪ್ರೇರಣೆಯಿಂದ ಭಕ್ತರು ಎಲ್ಲಾ ಕಾರ್ಯಕ್ರಮಗಳಲ್ಲಿ ಅನ್ನದಾಸೋಹದ ಸಂಸ್ಕೃತಿ ಅಳವಡಿಸಿಕೊಂಡಿದ್ದು, ಪೂಜ್ಯರ ಕಾರಣದಿಂದ ತುಮಕೂರು ದಾಸೋಹ ವಿಶ್ವವಿದ್ಯಾಲಯವಾಗಿದೆ ಎಂದರು.

ಸಿದ್ಧಗಂಗಾ ಮಠದ ಪೂಜ್ಯರ ಕಾರಣದಿಂದಾಗಿ ತುಮಕೂರು ಪ್ರಪಂಚದಲ್ಲಿ ಹೆಸರಾಗಿದೆ. ರಾಷ್ಟ್ರಪತಿ, ಪ್ರಧಾನ ಮಂತ್ರಿಗಳು, ತುಮಕೂರಿಗೆ ಬಂದುಹೋಗಲು ಶ್ರೀಮಠ ಕಾರಣವಾಗಿದೆ. ಸಿದ್ಧಗಂಗಾ ಮಠಕ್ಕೆ ನೇರ ಸಂಪರ್ಕ ಇಲ್ಲದ ಭಕ್ತರೂ ಕೂಡಾ ದಾಸೋಹ ವ್ಯವಸ್ಥೆ ಮಾಡುತ್ತಾ ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಭಕ್ತಿ ಸಮರ್ಪಣೆ ಮಾಡುತ್ತಿದ್ದಾರೆ. ಸ್ವಾಮೀಜಿಗಳು ಜೀವನಪರ್ಯಾಂತ ದಾಸೋಹ ನಡೆಸಿಕೊಂಡ ಬಂದವರು. ಇಂತಹ ದಾಸೋಹ ಸೇವೆಯಿಂದ ಅವರ ಆತ್ಮ ಸಂತಸಪಡುತ್ತದೆ. ಎಲ್ಲೆಡೆ ದಾಸೋಹ ಸಂಸ್ಕೃತಿ ಮತ್ತಷ್ಟು ಹೆಚ್ಚಾಗಲಿ ಎಂದು ಹೇಳಿದರು.


ಇಂದು ಪ್ರಪಂಚದಲ್ಲಿ ಯುದ್ಧ ನಡೆಯುತ್ತಿದೆ. ಯುದ್ಧದಿಂದ ಜಗತ್ತಿಗೆ ಒಳ್ಳೆಯದಾಗುವುದಿಲ್ಲ. ಡಾ. ಶಿವಕುಮಾರ ಸ್ವಾಮೀಜಿಗಳ ತಪೋಶಕ್ತಿಯಿಂದ ಉದ್ರಿಕ್ತ ಮನಸ್ಸುಗಳು ಶಾಂತವಾಗಿ ಯುದ್ಧ ನಿಲ್ಲುವಂತಾಗಲಿ ಎಂದು ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬಸವ ಸೇವೆ ಅಧ್ಯಕ್ಷ ಕನ್ನಡ ಪ್ರಕಾಶ್, ರೈಲ್ವೆ ಪ್ರಯಾಣಿಕರ ಮಂಡಳಿ ಸದಸ್ಯ ಲಕ್ಷ್ಮೀನಾರಾಯಣ, ಮುಖಂಡರಾದ ಬಿ.ಬಿ. ಮಹದೇವಯ್ಯ, ಕೋಮಲ ವೀರಭದ್ರಯ್ಯ, ನಂದಿನಿ ಶಿವಕುಮಾರ್, ರಾಮಕೃಷ್ಣಯ್ಯ, ಕಗ್ಗೆರೆ ಮಂಜುನಾಥ್, ರಾಮಣ್ಣ, ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಂ. ಗೋಪಿ, ಭಾನುಪ್ರಕಾಶ್, ಪ್ರೊ. ಕರಿಯಣ್ಣ, ನಂದೀಶ್, ಯಡಿಯೂರಪ್ಪ, ಬನಶಂಕರಿ ಬಾಬು, ಭಾನುಪ್ರಕಾಶ್, ಟಿ.ಕೆ. ಆನಂದ್, ಕೊಪ್ಪಲ್ ನಾಗರಾಜು, ಮಲ್ಲೇಶಯ್ಯ, ಪ್ರತಾಪ್, ಆದಿಲ್ ಬಾಷಾ, ಕೆ.ಹೆಚ್.ವೆಂಕಟೇಶ್, ಕೆ. ಶಿವಕುಮಾರ್ ಮೊದಲಾದವರು ಭಾಗವಹಿಸಿದ್ದರು.