ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ನಗರದಲ್ಲಿ ಎಟಿಎಫ್ ರ್ಯಾಕಿಂಗ್‌ ವಿಶ್ವ ಮಹಿಳಾ ಟೆನ್ನಿಸ್ ಕ್ರೀಡಾಕೂಟ ಆರಂಭವಾಗಿದ್ದು, ತುಮಕೂರು ಓಪನ್ ಹೆಸರಿನಲ್ಲಿ ಪ್ರತಿವರ್ಷ ನಡೆಯಲಿದೆ. 5 ರಂದು ಐಟಿಎಫ್ ಮಹಿಳಾ ಟೆನ್ನಿಸ್ ಟೂರ್ನಿ ಡಬ್ಲು 35 ಉದ್ಘಾಟನೆಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಅಥ್ಲೆಟಿಕ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, 20ರ್ಷಗಳ ತರುವಾಯ ಮತ್ತೊಮ್ಮೆ ತುಮಕೂರು ವಿಶ್ವ ಟೆನ್ನಿಸ್ ಭೂಪಟದಲ್ಲಿ ತನ್ನ ಹೆಸರನ್ನು ಶಾಶ್ವತವಾಗಿ ಪಡೆದುಕೊಳ್ಳುತಿದ್ದು, ಯುದ್ಧದ ಕಾರ್ಮೋಡದ ನಡುವೆಯೂ ಎಂಟು ದೇಶಗಳ ಸುಮಾರು 78 ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಐಟಿಎಫ್ ಮಹಿಳಾ ಡಬ್ಲ್ಯು 35 ಟೂರ್ನಿಯಲ್ಲಿ 30 ಸಾವಿರ ಡಾಲರ್ ಬಹುಮಾನದ ಮೊತ್ತವನ್ನು ನೀಡಲಾಗಿದ್ದು,ಇಷ್ಟು ಬಹುಮಾನದ ಮೊತ್ತವನ್ನು ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆ ವತಿಯಿಂದ ದೇಣಿಗೆ ನೀಡುವ ಮೂಲಕ ಕ್ರೀಡಾಕೂಟವನ್ನು ಪ್ರೋತ್ಸಾಹಿಸುತ್ತಿದೆ ಎಂದರು.

ಪ್ರಸ್ತುತ ನಡೆಯುವ ಐಟಿಎಫ್ ವಿಶ್ವ ಮಹಿಳಾ ಟೆನ್ನಿಸ್ ಟೂರ್ನಿ ಡಬ್ಯು 35ಗಾಗಿ ನಾಲ್ಕು ಅಂಕಣಗಳು ಸಿದ್ದಗೊಂಡಿದ್ದು, ಮೂರು ಅಂಕಣಗಳಲ್ಲಿ ಪಂದ್ಯಾವಳಿ ನಡೆದರೆ, ಒಂದು ಅಂಕಣವನ್ನು ಅಭ್ಯಾಸಕ್ಕೆ ಮೀಸಲಿಡಲಾಗಿದೆ. ಏಕಕಾಲಕ್ಕೆ ನಾಲ್ಕು ಸಾವಿರ ಜನರು ಕುಳಿತು ನೋಡಬಹುದು, ಅಲ್ಲದೆ 200 ದೇಶಗಳಿಗೆ ಲೈವ್ ಪ್ರಸಾರಗೊಳ್ಳಲಿದೆ. ಕ್ರೀಡಾಕೂಟದಲ್ಲಿ ಕರ್ನಾಟಕದ 10 ಜನ ಟೆನ್ನಿಸ್ ತಾರೆಯರು ಪಾಲ್ಗೊಳ್ಳುತ್ತಿದ್ದು, ಇವರಲ್ಲಿ ತುಮಕೂರು ಜಿಲ್ಲೆಯ ಮೇಘನಾ ಮತ್ತು ಸೋಹಾ ಸಾಧಿಕ್ ಸಹ ಸೇರಿದ್ದಾರೆ. ಸ್ಥಳೀಯ ಟೆನ್ನಿಸ್ ತಾರೆಯನ್ನು ಹುಟ್ಟು ಹಾಕಲು ಇದೊಂದು ಪ್ರಮುಖ ವೇದಿಕೆಯಾಗಲಿದೆ ಎಂದರು. ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ (ಎಐಟಿಎ) ಯ ಜಂಟಿ ಕಾರ್ಯದರ್ಶಿ ಮತ್ತು ಕೆಎಎಸ್‌ಎಲ್ ಟಿಎ ಜಂಟಿ ಕಾರ್ಯದರ್ಶಿ ಸುನಿಲ್ ಯಜಮಾನ್ ಮಾತನಾಡಿ, ಈ ಪಂದ್ಯಾವಳಿಯು ಕರ್ನಾಟಕದಾದ್ಯಂತ ಟೆನಿಸ್‌ನ ಹೆಜ್ಜೆಗುರುತನ್ನು ವಿಸ್ತರಿಸುವ ದೀರ್ಘ ಕಾಲೀನ ದೃಷ್ಟಿಕೋನದ ಭಾಗವಾಗಿದೆ. ತುಮಕೂರಿನಂತಹ ನಗರಗಳಿಗೆ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಕೊಂಡೊಯ್ಯುವ ಮೂಲಕ ನಾವು ಆಟಗಾರರಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ,.ಹೊಸ ಪ್ರೇಕ್ಷಕರನ್ನು ತೊಡಗಿಸಿಕೊಳ್ಳುತ್ತಿದ್ದೇವೆ ಎಂದರು. ನಾಲ್ಕು ವೈಲ್ಡ್ ಕಾರ್ಡ್‌ಗಳು ಸೇರಿದಂತೆ 24 ಆಟಗಾರರು ನೇರ ಪ್ರವೇಶವನ್ನು ಪಡೆದಿದ್ದರೆ, ಇನ್ನೂ 32 ಆಟಗಾರರು ಉಳಿದ ಎಂಟು ಸ್ಥಾನಗಳಿಗಾಗಿ ಹೋರಾಡಲಿದ್ದಾರೆ. ಈ ಪಂದ್ಯಾವಳಿಯು ಉತ್ತಮ-ಗುಣಮಟ್ಟದ ಕ್ರಿಯೆಯ ಭರವಸೆ ನೀಡುತ್ತದೆ ಮತ್ತು ಭಾರತೀಯ ಅಭಿಮಾನಿಗಳಿಗೆ ಜಾಗತಿಕ ಪ್ರತಿಭೆಗಳ ಮುಂದಿನ ಅಲೆಯನ್ನು ಹತ್ತಿರದಿಂದ ವೀಕ್ಷಿಸುವ ಅವಕಾಶವನ್ನು ನೀಡುತ್ತದೆ ಎಂದು ಸುನಿಲ್ ಯಜಮಾನ್ ತಿಳಿಸಿದರು. ಇದೇ ವೇಳೆ ವಿಶ್ವ ಮಹಿಳಾ ಟೆನ್ನಿಸ್ ಟೂರ್ನಿಯ ನಗದು ಬಹುಮಾನವಾದ 30 ಸಾವಿರ ಯುಎಸ್ ಡಾಲರ್ ಹಣದ ಚೆಕ್‌ನ್ನು ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯೂ ಆದ ಡಾ.ಜಿ.ಪರಮೇಶ್ವರ್ ಅವರು ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ಟೂರ್ನಿ ಸಂಯೋಜಕರಿಗೆ ಹಸ್ತಾಂತರಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್,ಎಸ್ಪಿ ಅಶೋಕ್ ವೆಂಕಟ್,ನಿರ್ದೇಶಕರಾದ ಅಮರನಾಥ್ ಪಾಲ್ಗೊಂಡಿದ್ದರು.