ಸಾರಾಂಶ
ನರಸಿಂಹರಾಜಪುರ, ತುಂಗಾ ತಿರುವು ಯೋಜನೆಯಡಿ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಯ ಸಾತ್ಕೋಳಿ ಎಂಬಲ್ಲಿ ನಡೆಯುತ್ತಿರುವ ಕಾಲುವೆ ಕಾಮಗಾರಿಯ ಸುರಂಗ ಮಾರ್ಗಕ್ಕಾಗಿ ಬಂಡೆ ಸ್ಫೋಟಿಸುವಾಗ ಕಲ್ಲುಗಳು ಸಿಡಿದು ಕೆಲವು ಮನೆಗಳ ಮೇಲೆ ಬಿದ್ದು ಹೆಂಚುಗಳು ಪುಡಿಯಾದ ಘಟನೆ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ.
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ತುಂಗಾ ತಿರುವು ಯೋಜನೆಯಡಿ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಯ ಸಾತ್ಕೋಳಿ ಎಂಬಲ್ಲಿ ನಡೆಯುತ್ತಿರುವ ಕಾಲುವೆ ಕಾಮಗಾರಿಯ ಸುರಂಗ ಮಾರ್ಗಕ್ಕಾಗಿ ಬಂಡೆ ಸ್ಫೋಟಿಸುವಾಗ ಕಲ್ಲುಗಳು ಸಿಡಿದು ಕೆಲವು ಮನೆಗಳ ಮೇಲೆ ಬಿದ್ದು ಹೆಂಚುಗಳು ಪುಡಿಯಾದ ಘಟನೆ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ.ಸಾತ್ಕೋಳಿಯ ಕೃಷ್ಣಮೂರ್ತಿ, ಶ್ರೀನಿವಾಸ್, ಗಣೇಶ್, ಚಿನ್ನಯ್ಯ ಸೇರಿದಂತೆ ಕೆಲವು ಮನೆಗಳ ಮೇಲೆ ಕಲ್ಲು ಚೂರುಗಳು ಬಿದ್ದಿವೆ. ಇದರಿಂದ ಹೆಂಚುಗಳು ಪುಡಿಯಾಗಿ ಕಲ್ಲುಗಳು ಮನೆ ಒಳಗೆ ಬಿದ್ದ ಪರಿಣಾಮ ಕೆಲವು ಮನೆಯ ಗೋಡೆಗಳು ಬಿರುಕು ಮೂಡಿದ್ದು ಯಾರಿಗೂ ಪೆಟ್ಟಾಗಿಲ್ಲ. ಇದರಿಂದ ಜನರು ಗಾಬರಿಯಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಂಡೆ ಸ್ಫೋಟಿಸುವಾಗ ಮುಂಜಾಗ್ರತೆ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಘಟನೆ ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಆಮಟೆ ಭೇಟಿ ನೀಡಿ ಪರಿಸೀಲನೆ ನಡೆಸಿದರು.--ಬಾಕ್ಸ್--
ಬಂಡೆಯ ಕಲ್ಲಿನಿಂದ ಹಾನಿಯಾದ ಮನೆಗಳ ಸ್ಥಳಕ್ಕೆ ಭೇಟಿ ನೀಡಿ ಮನೆಗಳ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಂಡೆ ಸ್ಫೋಟಿಸಿದ ಜಾಗದಿಂದ 200 ಮೀ. ದೂರದಲ್ಲಿ 27 ಮನೆಗಳಿವೆ. ಇದರಲ್ಲಿ 3-4 ಮನೆಗಳ ಮೇಲೆ ಕಲ್ಲು ಬಿದ್ದು ಹೆಂಚು ಪುಡಿಯಾಗಿದೆ. ಯಾರಿಗೂ ಪೆಟ್ಟಾಗಿಲ್ಲ. ಕಾಮಗಾರಿ ಮಾಡುತ್ತಿರುವ ಕಂಪನಿ ಮನೆಗೆ ಹಾನಿಯಾದ ಕುಟುಂಬದವರಿಗೆ ಪರಿಹಾರ ಕೊಡಲು ಒಪ್ಪಿಗೆ ನೀಡಿದ್ದಾರೆ. ಇದು ಅಕ್ರಮ ಗಣಿಗಾರಿಕೆ ಅಲ್ಲ. ಸರ್ಕಾರದಿಂದ ಟೆಂಡರ್ ಆಗಿರುವ ಕಂಪನಿ ನಡೆಸುತ್ತಿರುವ ಕಾಮಗಾರಿ. ಬಂಡೆಯಲ್ಲಿ ನೀರು ಬಂದಿದ್ದರಿಂದ ಕಲ್ಲುಗಳು ಸಿಡಿದು ಹಾರಿದೆ. ಆದರೂ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಕಂಪನಿಯವರಿಗೆ ಸೂಚಿಸಿದ್ದೇವೆ.- ಡಾ.ವಿಕ್ರಂ ಆಮಟೆ, ಜಿಲ್ಲಾ ವರಿಷ್ಠಾಧಿಕಾರಿ