ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಭಾಗದಲ್ಲಿ ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ನದಿ ನೀರು : ಆತಂಕದಲ್ಲಿ ಜನತೆ

| Published : Jan 17 2025, 12:48 AM IST / Updated: Jan 17 2025, 12:10 PM IST

ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಭಾಗದಲ್ಲಿ ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ನದಿ ನೀರು : ಆತಂಕದಲ್ಲಿ ಜನತೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಭಾಗ ನದಿಯಲ್ಲಿನ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ಯಾವ ಕಾರಣಕ್ಕಾಗಿ ಹೀಗಾಗಿದೆ ಎನ್ನುವ ಆಶ್ಚರ್ಯ ಮತ್ತು ಆತಂಕ

ಮುಂಡರಗಿ: ಗದಗ-ಬೆಟಗೇರಿ ಅವಳಿ ನಗರ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ಹೂವಿನ ಹಡಗಲಿ ತಾಲೂಕು ಸೇರಿದಂತೆ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಮೂಲವಾದ ತುಂಗಭದ್ರಾ ನದಿ ನೀರು ವಿಚಿತ್ರ ರೂಪ ತಾಳಿ ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಭಾಗ ನದಿಯಲ್ಲಿನ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ಯಾವ ಕಾರಣಕ್ಕಾಗಿ ಹೀಗಾಗಿದೆ ಎನ್ನುವ ಆಶ್ಚರ್ಯ ಮತ್ತು ಆತಂಕ ಹೆಚ್ಚಾಗಿದೆ.

ಎಲ್ಲೆಲ್ಲಿ ಸಮಸ್ಯೆ: ತಾಲೂಕಿನ ಶೀರನಹಳ್ಳಿ, ಗಂಗಾಪುರ, ಕೊರ್ಲಹಳ್ಳಿ, ಕಕ್ಕೂರು, ಕಕ್ಕೂರ ತಾಂಡಾ, ನಾಗರಹಳ್ಳಿ, ಹೆಸರೂರು ಭಾಗಗಳಲ್ಲಿಯೂ ಹಸಿರು ಬಣ್ಣಕ್ಕೆ ತಿರುಗಿದೆ. ರೈತರ ಪಂಪ್‌ಸೆಟ್‌ ಗಳಲ್ಲಿಯೂ ಸಹ ಹಸಿರು ನೀರು ಬರುತ್ತಿದೆ. ಈ ನೀರನ್ನು ಬೆಳೆಗೆ ಹಾಯಿಸಿದರೆ ದನಕರುಗಳಿಗೆ ಕುಡಿಸಿದರೆ ಏನಾಗಲಿದೆಯೋ ಎನ್ನುವ ಆತಂಕ ಗ್ರಾಮಗಳ ಜನರಲ್ಲಿ ಮನೆ ಮಾಡಿದೆ.

ಆತಂಕ:ತುಂಗಭದ್ರಾ ನದಿಯಿಂದಲೇ ಗದಗ-ಬೆಟಗೇರಿ ಅವಳಿ ನಗರಕ್ಕೆ ಹಾಗೂ ಡಿಬಿಓಟಿ ಮೂಲಕ ಮುಂಡರಗಿ ಪಟ್ಟಣ ಹಾಗೂ ಎಲ್ಲ ಗ್ರಾಮ, ಶಿರಹಟ್ಟಿ ಲಕ್ಷ್ಮೇಶ್ವರ ತಾಲೂಕಿನ ಎಲ್ಲ ಗ್ರಾಮಗಳು ಹಾಗೂ ಪಕ್ಕದ ಹೂವಿನಹಡಗಲಿ ತಾಲೂಕಿನ ಗ್ರಾಮಗಳಿಗೆ ಇಲ್ಲಿಂದಲೇ ನೀರು ಸರಬರಾಜಾಗುತ್ತದೆ. ಆದರೆ, ಸರಬರಾಜಾಗುವ ನೀರು ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಮ್ಮಿಗಿ ಬ್ಯಾರೇಜ್ ಹತ್ತಿರ ಗೇಟು ಹಾಕುವ ಮೂಲಕ ತಡೆ ಹಿಡಿಯಲಾಗಿದ್ದು, ಆ ಭಾಗದಲ್ಲಿನ ನೀರು ಮಾತ್ರ ಹಸಿರು ಬಣ್ಣಕ್ಕೆ ತಿರುಗಿಲ್ಲ. ಈಗಲೂ ಉತ್ತಮ ಸ್ಥಿತಿಯಲ್ಲಿಯೇ ಇರುವುದರಿಂದ ಸದ್ಯ ನದಿಯಿಂದ ಕುಡಿಯುವ ನೀರು ಸರಬರಾಜು ಆಗುವ ಯಾವುದೇ ನಗರ, ಪಟ್ಟಣ, ಗ್ರಾಮಗಳಿಗೆ ತೊಂದರೆ ಇಲ್ಲ ಎನ್ನಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಗುರುವಾರ ನದಿಗೆ ಭೇಟಿ ನೀಡಿ ಹಮ್ಮಿಗಿ ಬಳಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್ ಹತ್ತಿರ ಗದಗ-ಬೆಟಗೇರಿ ಅವಳಿ ನಗರಗಳಿಗೆ ನೀರು ಸರಬರಾಜು ಮಾಡುವ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿದೆ. ಈ ಮೊದಲಿದ್ದಂತೆಯೇ ಈಗಲೂ ಸಹ ನದಿಯಲ್ಲಿ ಅದೇ ಬಣ್ಣದ ನೀರು ಇದ್ದು ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಆದಾಗ್ಯೂ ಸಹ ಅಲ್ಲಿನ ನೀರನ್ನು ತಂದು ಲ್ಯಾಬ್ ಟೆಸ್ಟ್ ಗೆ ಕಳುಹಿಸಲಾಗಿದೆ ಎಂದು ಎಇಇ ಗದಗ-ಬೆಟಗೇರಿ ನಗರ ಸಭೆ ಎಚ್.ಎ.ಬಂಡಿವಡ್ಡರ ತಿಳಿಸಿದ್ದಾರೆ.

ಕಕ್ಕೂರು, ಕಕ್ಕೂರು ತಾಂಡಾ, ನಾಗರಹಳ್ಳಿ ಗ್ರಾಮಗಳ ಸಮೀಪದ ತುಂಗಭದ್ರಾ ನದಿಯಲ್ಲಿ ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದ ನೀರು ಬರುತ್ತಿದ್ದು, ಆತಂಕ ಮನೆ ಮಾಡಿದಂತಾಗಿದೆ. ದನ-ಕರಿಗಳಿಗೂ ನೀರು ಕುಡಿಸಲು ಯೋಚಿಸಬೇಕಾಗಿದೆ ಎಂದು ನಾಗರಹಳ್ಳಿ ಗ್ರಾಮದ ರೈತ ಮಂಜುನಾಥ ಹಂಚಿನಾಳ ಹೇಳಿದ್ದಾರೆ.

ಬುಧವಾರ ತುಂಗಭದ್ರಾ ನದಿ ಪಾತ್ರಕ್ಕೆ ಭೇಟಿ ನೀಡಿ ಹಮ್ಮಿಗಿ,ಸಿಂಗಟಾಲೂರು, ಶೀರನಹಳ್ಳಿ, ಗಂಗಾಪೂರ, ಕೊರ್ಲಹಳ್ಳಿ, ಕಕ್ಕೂರು, ಕಕ್ಕೂರು ತಾಂಡಾ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದ್ದು, ಶೀರನಹಳ್ಳಿಯಿಂದ ಹೆಸರೂರುವರೆಗೆ ಮಾತ್ರ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ನೀರನ್ನು ಲ್ಯಾಬ್ ಗೆ ಕಳಿಸಿ ಪರಿಶೀಲಿಸುವಂತೆ ನೀರಾವರಿ ಇಲಾಖೆಗೆ ತಿಳಿಸಲಾಗಿದೆ. ಲ್ಯಾಬ್ ವರದಿ ಬರುವವರೆಗೂ ಯಾರೂ ನೀರನ್ನು ದನ-ಕರುಗಳಿಗೆ ಕುಡಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಂಡರಗಿ ತಹಸೀಲ್ದಾರ ಹೇಳಿದ್ದಾರೆ.