ಸಾರಾಂಶ
ರಬಕವಿ-ಬನಹಟ್ಟಿ : ರಬಕವಿ ಬನಹಟ್ಟಿಯಲ್ಲಿ ಬೀದಿ ದನಕರುಗಳು ಹಾಗೂ ಕತ್ತೆಗಳ ಕಾಟದಿಂದ ಜನ ಬೇಸತ್ತು ಹೋಗಿದ್ದಾರೆ. ಇದರಿಂದ ಮಕ್ಕಳು, ವೃದ್ಧರು ಮಾರುಕಟ್ಟೆಯಲ್ಲಿ ಭಯದ ವಾತಾವರಣದಲ್ಲಿ ತಿರುಗಾಡುವಂತಾಗಿದೆ ಎಂದು ಅವಳಿ ನಗರದ ನಾಗರಿಕರು ಆರೋಪಿಸುತ್ತಿದ್ದಾರೆ.
ಬನಹಟ್ಟಿ ಬಸ್ ನಿಲ್ದಾಣದ ಎದುರು, ಶಂಕರಲಿಂಗ ದೇವಸ್ಥಾನದ ಸರ್ಕಲ್, ಕಾಡಸಿದ್ಧೇಶ್ವರ ದೇವಸ್ಥಾನ ದ್ವಾರಬಾಗಿಲು, ರಾಂಪುರ ರಾಮ ಮಂದಿರ, ರಬಕವಿ ಈಶ್ವರ ಸಣಕಲ್ ರಸ್ತೆ ಹೀಗೆ ಅನೇಕ ಕಡೆಗಳಲ್ಲಿ ಕತ್ತೆ ಹಾಗೂ ದನಕರುಗಳ ಹಾವಳಿಗೆ ಜನ, ವಾಹನ ಸವಾರರು ಬೇಸತ್ತು ಹೋಗಿದ್ದಾರೆ. ಅದರಲ್ಲೂ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ ಮೇಲೆಯೇ ಈ ರೀತಿ ದನಕರುಗಳು ಮಲಗಿದ್ದರಿಂದ ಪ್ರಯಾಣಿಕರಿಗೆ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಕೆಲವೊಂದು ಸಾರಿಯಂತೂ ಗಂಟೆಯವರೆಗೂ ಟ್ರಾಫಿಕ್ ಜಾಮ್ ಆಗುತ್ತದೆ. ಇದಕ್ಕೆ ಪೊಲೀಸರು ಹರಸಹಾಸ ಮಾಡಿ ಟ್ರಾಫಿಕ್ ಸರಿಮಾಡಲು ಹೈರಾಣಾಗುತ್ತಿದ್ದಾರೆ.ಈ ದನಕರುಗಳು ಖಾಸಗಿ ವ್ಯಕ್ತಿಗಳಿಗೆ ಸೇರಿವೆಯೋ ಅಥವಾ ದೇವರಿಗೆ ಬಿಟ್ಟ ಗೂಳಿಗಳೊ ಎಂಬುವುದು ತಿಳಿಯುತ್ತಿಲ್ಲ. ಕತ್ತೆಗಳಂತೂ ರಸ್ತೆಮೇಲೆ ನಿಂತರೆ ದಾರಿ ಬಿಡುವುದೇ ಇಲ್ಲ, ಇದರಿಂದ ಅವಳಿ ನಗರದ ಜನ ರಸ್ತೆ ಮೇಲೆ ತಿರುಗಾಡಲು ಭಯಪಡುವಂತಾಗಿದೆ.
ನಗರಸಭೆ ಅಧಿಕಾರಿಗಳು ಈ ದನಗಳ ಮಾಲಿಕರನ್ನು ಗುರುತಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ವಯೋವೃದ್ದರು, ಶಾಲೆಗೆ ಹೋಗುವ ಚಿಕ್ಕಚಿಕ್ಕ ಮಕ್ಕಳು ಭಯದಲ್ಲಿ ರಸ್ತೆ ದಾಟುವಂತಾಗಿದೆ. ಕೂಡಲೆ ಸರಿಪಡಿಸಬೇಕು ಎಂದು ಅವಳಿ ನಗರದ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.
ಬೀದಿ ದನಗಗಳು ಮಾಲಿಕರಿದ್ದಾರೋ ಇಲ್ಲೋ ಅಥವಾ ದೇವರ ದನಕರುಗಳೊ ಎಂಬುದನ್ನು ನಮ್ಮ ಸಿಬ್ಬಂದಿಗಳಿಂದ ಶೀಘ್ರದಲ್ಲಿ ಮಾಹಿತಿ ಕಲೆಹಾಕಿ ಸಾರ್ವಜನಿಕರಿಗಾಗುವ ತೊಂದರೆಯನ್ನು ಕೂಡಲೆ ಸರಿಪಡಿಸಲಾಗುವುದು.
-ಜಗದೀಶ ಈಟಿ. ಪೌರಾಯುಕ್ತರು ನಗರಸಭೆ ರಬಕವಿ ಬನಹಟ್ಟಿ.