ಕನ್ನಡಪ್ರಭ ವಾರ್ತೆ ಬೆಂಗಳೂರು
ಇಬ್ಬರು ಸರಗಳ್ಳರನ್ನು ಬಂಧಿಸಿರುವ ಜ್ಞಾನಭಾರತಿ ಠಾಣೆ ಪೊಲೀಸರು ಆರೋಪಿಗಳಿಂದ ₹5 ಲಕ್ಷ ಮೌಲ್ಯದ 45 ಗ್ರಾಂ ಚಿನ್ನದ ಮಾಂಗಲ್ಯ ಸರ ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.ಚಂದ್ರಲೇಔಟ್ ನಿವಾಸಿಗಳಾದ ಪ್ರಮೋದ್ ಬಸಪ್ಪ ಚಲವಾದಿ (22) ಮತ್ತು ಮನೋಹರ ಗುರುನಾಥ (22) ಬಂಧಿತರು. ಆರೋಪಿಗಳು ಗದಗ ಮೂಲದವರಾಗಿದ್ದು, ನಗರದಲ್ಲಿ ಡಿಲೆವರಿ ಬಾಯ್ಗಳಾಗಿ ಕೆಲಸ ಮಾಡುತ್ತಿದ್ದರು. ಹೆಚ್ಚಿನ ಹಣ ಸಂಪಾದಿಸುವ ಸಲುವಾಗಿ ಅಡ್ಡ ದಾರಿ ಹಿಡಿದಿದ್ದಾರೆ. ಮಲ್ಲತಹಳ್ಳಿಯ ಬಾಲಾಜಿ ಲೇಔಟ್ನ ನಿವಾಸಿಯಾದ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರರು ಮೇ 18 ರ ಸಂಜೆ ಬಾಲಾಜಿ ಲೇಔಟ್ನ 5 ನೇ ಕ್ರಾಸ್ನಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಆರೋಪಿಗಳ ಪೈಕಿ ಹಿಂಬದಿ ಸವಾರನಾಗಿದ್ದ ಪ್ರಮೋದ್ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಸಿದುಕೊಂಡು ದ್ವಿಚಕ್ರ ವಾಹನ ಹತ್ತಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನನ್ವಯ ಚಂದ್ರಲೇಔಟ್ನ ನರನಪ್ಪ ಲೇಔಟ್ನ ಮನೆಯಿಂದ ಪ್ರಮೋದ್ನನ್ನು ಬಂಧಿಸಿ ಕರೆತಂದು ವಿಚಾರಣೆ ನಡೆಸಿದಾಗ ಆತ ಮತ್ತೊಬ್ಬ ಆರೋಪಿಯ ಬಗ್ಗೆ ಬಾಯ್ಬಿಟ್ಟಿದ್ದ. ನಂತರ ಮನೋಹರನನ್ನು ಬಳ್ಳಾರಿಯ ಬಸ್ ನಿಲ್ದಾಣದ ಬಳಿ ಬಂಧಿಸಿ ಕರೆತಂದು ವಿಚಾರಣೆ ನಡೆಸಿದ್ದು, ಆರೋಪಿಗಳು ಸರಗಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.