ಕೊಪ್ಪಳ: ನನ್ನನ್ನು ಎರಡು ಸಲ ಸೋಲಿಸಿದ ಕನಕಗಿರಿ, ಕೊಪ್ಪಳ, ಯಲಬುರ್ಗಾದವರ ಸೋಲಿಗೆ ಮಸೀದಿಗೆ ಒಂದು ಪತ್ರ ಬರೆದರೆ ಸಾಕು, ನಮ್ಮ ಮುಸ್ಲಿಂ ಬಾಂಧವರು ಅವರಿಗೆ ವೋಟ್‌ ಹಾಕುವದಿಲ್ಲ. ಆದರೆ ನಾನು ಆ ರೀತಿ ಮಾಡುವುದಿಲ್ಲ ಎಂದು ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರನ್ನು ಕೊಪ್ಪಳ ಜಿಲ್ಲೆಯಲ್ಲಿ ಸೋಲಿಸಲು ಎರಡು ಸೆಕೆಂಡ್ ಸಾಕು ನನಗೆ. ಆದರೆ, ನಿಮ್ಮ ಕೆಲಸ ಮಾಡಿದವರಿಗೆ ಮತ ನೀಡಿ ಎಂದು ಹೇಳುತ್ತೇನೆ ಎಂದರು.

ಜಿಲ್ಲೆಯ ಕಾಂಗ್ರೆಸ್ ಮುಖಂಡರು ನನ್ನನ್ನು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಸಲ ಸೋಲಿಸಿದ್ದಾರೆ. ಎಲ್ಲ ಕಾಂಗ್ರೆಸ್ ಶಾಸಕರನ್ನು ಸೋಲಿಸುವ ತಾಕತ್ತು ನನ್ನಲ್ಲಿದೆ ಎಂದು ಸ್ವಪಕ್ಷದವರ ವಿರುದ್ಧ ಅನ್ಸಾರಿ ಗುಡುಗಿದರು.

ಜಿಲ್ಲೆಯಲ್ಲಿ ಕೆಲ ಕಾಂಗ್ರೆಸ್‌ ಮುಖಂಡರು ನನ್ನನ್ನು ಕಾಂಗ್ರೆಸ್ಸಿನಿಂದ ಹೊರ ಹಾಕಲು ಸಂಚು ರೂಪಿಸಿದ್ದಾರೆ. ಇಕ್ಬಾಲ್‌ ಅನ್ಸಾರಿ ಕಾಂಗ್ರೆಸ್‌ ತೊರೆಯುತ್ತಾರೆ ಎಂಬ ಸುಳ್ಳನ್ನು ಪದೇ ಪದೇ ಹೇಳುತ್ತಿದ್ದಾರೆ. ಹೀಗಾಗಿ ನಾನು ಕಾರ್ಯಕರ್ತರ ಸಮ್ಮುಖದಲ್ಲಿ ಈ ಹೇಳಿಕೆ ನೀಡುತ್ತಿದ್ದೇನೆ. ನಾನು ಸಿದ್ದರಾಮಯ್ಯ ಅವರನ್ನು ನೋಡಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ಬಿಜೆಪಿಗೆ ಹೋಗುತ್ತೇನೆ, ಜೆಡಿಎಸ್‌ಗೆ ಹೋಗುತ್ತೇನೆ ಎಂಬ ಗಾಳಿ ಸುದ್ದಿ ನಂಬಬಾರದು, ಗಂಗಾವತಿ ಜನ ನನ್ನ ಹೃದಯದಲ್ಲಿದ್ದಾರೆ. ಆಂಜನೇಯನು ಶ್ರೀ ರಾಮಚಂದ್ರ- ಸೀತೆಯನ್ನು ಎದೆ ಬಗೆದು ತೋರಿಸಿದಂತೆ ಆಗುವುದಿಲ್ಲ. ಜನರು ನನ್ನ ಹೃದಯದಲ್ಲಿದ್ದಾರೆ ಎಂದರು.

ಡಿವೈಎಸ್ಪಿ ವರ್ಗಾವಣೆಗೆ ಒಂದೂವರೆ ಕೋಟಿ;


ಜನರು ಮಂತ್ರಿ ಮಾಡಲು ವೋಟ್‌ ಕೊಡಬೇಕು, ಮತ್ತೆ ಅಧಿಕಾರಿಗೆ ನೋಟು ಕೊಡಬೇಕು. ಸಂವಿಧಾನದಡಿಯಲ್ಲಿ ಕೆಲಸ ಮಾಡಲು ಬಿಡಬೇಕು. ಡಿವೈಎಸ್ಪಿ ವರ್ಗಾವಣೆಯಲ್ಲಿ ಒಂದೂವರೆ ಕೋಟಿ ಹಣದ ಆಮಿಷ ಇದೆ. ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್ ವರ್ಗಾವಣೆಗೂ ಹಣ ನೀಡಬೇಕು. ಉತ್ತಮ ವಾತಾವರಣ ಇರುವುದರಿಂದ ನಮ್ಮ ಭಾಗಕ್ಕೆ ಅಧಿಕಾರಿಗಳು ಬರುತ್ತಾರೆ. ಆದರೆ ಇಲ್ಲಿಯ ಜನಪ್ರತಿನಿಧಿಗಳು ವರ್ಗಾವಣೆಗೆ ಒಂದು ಹಣದ ಫಿಗರ್ ಕೊಡುತ್ತಾರೆ. ಏನು ಮಾಡಲಿಕ್ಕೆ ಆಗಲ್ಲ, ಲೂಟಿ ಮಾಡು ಎಂದು ಹಣ ಪಡೆದವರು ಹೇಳುತ್ತಾರೆ. ಈ ಸುಲಿಗೆ ದಂಧೆ ಲೀಡರ್‌ಗಳಿಂದ ಜಿಲ್ಲೆಯಲ್ಲಿ ಹೆಚ್ಚಾಗಿದೆ ಎಂದು ಹೇಳಿದರು.