ಸರ್ಕಾರಿ ಶಾಲೆ ಚಾವಣಿ ಕುಸಿದು ಇಬ್ಬರು ವಿದ್ಯಾರ್ಥಿಗಳು, ಶಿಕ್ಷಕನಿಗೆ ಗಾಯ

| Published : Jun 23 2025, 11:48 PM IST

ಸರ್ಕಾರಿ ಶಾಲೆ ಚಾವಣಿ ಕುಸಿದು ಇಬ್ಬರು ವಿದ್ಯಾರ್ಥಿಗಳು, ಶಿಕ್ಷಕನಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಸಮೀಪದ ಚಿಲ್‌ಝರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕುಸಿದು ಬಿದ್ದ ಪರಿಣಾಮ ಓರ್ವ ಶಿಕ್ಷಕ ಹಾಗೂ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.

ಗಜೇಂದ್ರಗಡ: ಸಮೀಪದ ಚಿಲ್‌ಝರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕುಸಿದು ಬಿದ್ದ ಪರಿಣಾಮ ಓರ್ವ ಶಿಕ್ಷಕ ಹಾಗೂ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.

ಶಾಲೆಯ 6ನೇ ತರಗತಿ ಕೊಠಡಿಯ ಚಾವಣಿ ಕುಸಿದು ಬಿದ್ದಿದೆ. ಸಾಮಾನ್ಯವಾಗಿ ಕೊಠಡಿಯಲ್ಲಿ ಒಟ್ಟು 12 ವಿದ್ಯಾರ್ಥಿಗಳು ಇರುತ್ತಾರೆ. ಆದರೆ, ಬೆಳಗ್ಗೆ ಹಾಲು ಕುಡಿಯಲು 6 ವಿದ್ಯಾರ್ಥಿಗಳು ಶಾಲಾ ಆವರಣಕ್ಕೆ ತೆರಳಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ವಿದ್ಯಾರ್ಥಿ ಶಂಕರ ಗುಡದಪ್ಪ ತಳವಾರ ತಲೆಗೆ ಪೆಟ್ಟಾಗಿದೆ. ವಿದ್ಯಾರ್ಥಿನಿ ಗೌರಮ್ಮ ನೆಹರು ಡಗ್ಗಿ ಬೆನ್ನಿಗೆ ಗಾಯವಾಗಿದೆ. ಸಹ ಶಿಕ್ಷಕ ಎಂ.ಬಿ. ಒಂಟಿ ಅವರ ತಲೆಗೆ ಪೆಟ್ಟಾಗಿದ್ದು, ಪಟ್ಟಣದ ಕಾರುಡಗಿಮಠ ಆಸ್ಪತ್ರೆಯಲ್ಲಿ ವೈದ್ಯರು 8 ಸ್ಟಿಚ್‌ ಹಾಕಿದ್ದು, ವಿಶ್ರಾಂತಿಗೆ ಸೂಚಿಸಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸರ್ಕಾರವು ಶಾಲಾ ಅಭಿವೃದ್ಧಿಗೆ ಗ್ರಾಪಂ, ತಾಪಂ ಹಾಗೂ ಶಿಕ್ಷಣ ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸಲು ಅವಕಾಶ ನೀಡುವುದರ ಜತೆಗೆ ಅಗತ್ಯ ಅನುದಾನವನ್ನು ಸಹ ಬಿಡುಗಡೆ ಮಾಡುತ್ತದೆ. ಆದರೆ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ದುರಸ್ತಿಗೆ ಪತ್ರ ಬರೆದಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ತಾಲೂಕಾಡಳಿತ ಹಾಗೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕು ಆಗ್ರಹಿಸಿದರು.

"ಶಾಲಾ ಚಾವಣಿ ಸೇರಿ ದುರಸ್ತಿ ಹಂತಕ್ಕೆ ಬಂದಿರುವ ತಾಲೂಕಿನ ಯಾವುದೇ ಶಾಲೆಗಳ ಕೊಠಡಿಯಲ್ಲಿ ಪಾಠ-ಪ್ರವಚನ ನಡೆಸದಂತೆ ಮುಖ್ಯಗುರುಗಳಿಗೆ ಮೌಖಿಕವಾಗಿ ತಿಳಿಸುವುದರ ಜತೆಗೆ ಆದೇಶಿಲಾಗಿತ್ತು. ಕೆಲ ತಿಂಗಳ ಹಿಂದೆ ಶಾಲಾ ದುರಸ್ತಿಗೆ ಪತ್ರದ ಜತೆಗೆ ಮನವಿ ಮಾಡಿದ್ದ ಶಾಲೆಯ ಕೊಠಡಿ ಚಾವಣಿ ಕುಸಿದು ಅವಘಡ ನಡೆದಿದೆ. ಶಿಕ್ಷಣ ಇಲಾಖೆ ಹಾಗೂ ಆಡಳಿತ ವರ್ಗ ತಾಲೂಕಿನಲ್ಲಿ ಶಾಲಾ ದುರಸ್ತಿಗೆ ಬಂದಿರುವ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ವಿಲೇವಾರಿಗೆ ಮುಂದಾಗಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸುತ್ತಿದ್ದಾರೆ.ಗಜೇಂದ್ರಗಡ ಸಮೀಪದ ಚಿಲ್‌ಝರಿ ಗ್ರಾಮದ ಸಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕುಸಿದಿದ್ದು, ಇಬ್ಬರು ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕನಿಗೆ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ತಾಪಂ ಇಒ ಕರೆಸಿ ಒಂದು ತಿಂಗಳ ಒಳಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ದುರಸ್ತಿ ಕಾರ್ಯ ನಡೆಸಲು ಸೂಚಿಸಲಾಗಿದೆ ಪ್ರಭಾರಿ ಬಿಇಒ ಎಂ.ಎ. ಫಣಿಬಂದ ಹೇಳಿದರು.