ಉಚ್ಚಿಲ: ಇಲ್ಲಿನ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಸುಮಾರು 3.50 ಕೋಟಿ ರು. ವೆಚ್ಚದಲ್ಲಿ 30 ಅಡಿ ಎತ್ತರದ ಮೊಗವೀರ ಸಮಾಜದ ಕುಲಗುರುಗಳಾದ ಕೀರ್ತಿಶೇಷ ಶ್ರೀಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ನಿರ್ಮಾಣದ ಪ್ರಯುಕ್ತ ಭಾನುವಾರ ಸಾಮೂಹಿಕ ಗುರು ಪಾದಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಬೈಕ್ ರ್ಯಾಲಿ ಮತ್ತು ಬೃಹತ್ ಸಮಾವೇಶ ಜರುಗಿತು. ಕಾರ್ಯಕ್ರಮದ ರೂವಾರಿ ಹಾಗೂ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಪುತ್ಥಳಿ ನಿರ್ಮಾಣದ ಸ್ಥಳದಲ್ಲೇ ಗುರುಗಳ ಸ್ವರ್ಣ ಲೇಪಿತ ಪಾದುಕೆಗೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಜರುಗಿದ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಶ್ರೀ ಕ್ಷೇತ್ರದ ಜೀರ್ಣೋದ್ದಾರ ವೇಳೆ ನಡೆದ ಅಷ್ಟಮಂಗಳ ಪ್ರಶ್ನೆಯ ಸೂಚನೆಯ ಮೇರೆಗೆ ಗುರುಗಳ ಕಂಚಿನ ಪುತ್ಥಳಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಸಮಾಜದ ಗುರು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಅನಿವಾರ್ಯತೆ ಇದೆ. ಸರ್ವರೂ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಕರೆ ನೀಡಿದರು. ಇದಕ್ಕೆ ಮೊದಲು ಉತ್ತರ ಭಾಗದ ಬೈಕ್ ಜಾಥಾಕ್ಕೆ ಪಾಂಗಾಳ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆವರಣದಲ್ಲಿ ಮತ್ತು ಹಾಗೂ ದಕ್ಷಿಣ ಭಾಗದ ಜಾಥಾಕ್ಕೆ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಚಾಲನೆ ನೀಡಿ, ಎರಡೂ ಜಾಥಗಾಳನ್ನು ಉಚ್ಚಿಲದ ದೇವಸ್ಥಾನದಲ್ಲಿ ಬರ ಮಾಡಿಕೊಳ್ಳಲಾಯಿತು. ಉಪ್ಪಳದಿಂದ ಶೀರೂರುವರೆಗಿನ ಸಾವಿರಾರು ಮಂದಿ ಮೊಗವೀರ ಸಮಾಜದವರು ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ ಬೆಂಗ್ರೆ, ಉಚ್ಚಿಲ ಕ್ಷೇತ್ರಾಧ್ಯಕ್ಷ ಗಿರಿಧರ ಸುವರ್ಣ, ಪುತ್ಥಳಿ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮನೋಜ್ ಸಾಲ್ಯಾನ್, ಪ್ರಮುಖರಾದ ಹರಿಯಪ್ಪ ಕೋಟ್ಯಾನ್, ಯುವರಾಜ್ ಸಾಲ್ಯಾನ್, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು. ಶರಣ್ ಕುಮಾರ್ ಮಟ್ಟು ನಿರೂಪಿಸಿದರು.
ಕೋಟಿ ಮಿಕ್ಕಿದ ಗುರುಪಾದ ಕಾಣಿಕೆ: ಈ ಸಾಮೂಹಿಕ ಪಾದಕಾಣಿಕೆ ಕಾರ್ಯಕ್ರಮದಲ್ಲಿ ಮೊಗವೀರರ ಬಾರ್ಕೂರು ವಲಯದಿಂದ 35 ಲಕ್ಷ ರು., ಮಂಗಳೂರು ವಲಯದಿಂದ 25 ಲಕ್ಷ ರು., ಮಧ್ಯ ವಲಯದಿಂದ 25 ಲಕ್ಷ ರು., ಉಡುಪಿ ವಲಯದಿಮದ 25 ಲಕ್ಷ ರು., ಬಗ್ವಾಡಿ ವಲಯದಿಂದ 25 ಲಕ್ಷ ರು. ಸಲ್ಲಿಕೆಯಾಯಿತು.ಜೊತೆಗೆ ವೇದಪ್ರಕಾಶ್ 10 ಲಕ್ಷ ರು., ಪ್ರಸಾದ್ ರಾಜ್ ಕಾಂಚನ್ 5 ಲಕ್ಷ ರು., ಮಸ್ಕತ್ ಸಂಘಟನೆಯಿಂದ 3 ಲಕ್ಷ ರು., ಮೀನು ಮಾರಾಟ ಪೆಡರೇಷನ್ 2 ಲಕ್ಷ ರು., ಮೋಹನ್ ಬೇಂಗ್ರೆ 2 ಲಕ್ಷ ರು., ಅನಿಲ್ ಕುಮಾರ್ 2 ಲಕ್ಷ ರು., ಸಂಧ್ಯಾ ಸುನಿಲ್ 2 ಲಕ್ಷ ರು. ಮತ್ತು ನೂರಾರು ಮಂದಿ ತಂತಮ್ಮ ಶಕ್ತ್ಯಾನುಸಾರ ಪಾದಕಾಣಿಕೆ ಸಲ್ಲಿಸಿದರು.