ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರ ಸಂಘದ 2025-26ನೇ ಸಾಲಿನ ಮಹಾಸಭೆ ಆದಿ ಉಡುಪಿಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಕರ್ನಲ್ ಡಾ. ಎಫ್.ಇ.ಎ. ರೋಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಉಡುಪಿ: ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರ ಸಂಘದ 2025-26ನೇ ಸಾಲಿನ ಮಹಾಸಭೆ ಆದಿ ಉಡುಪಿಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಕರ್ನಲ್ ಡಾ. ಎಫ್.ಇ.ಎ. ರೋಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸದಸ್ಯರನ್ನುದ್ದೇಶಿಸಿ ಮಾತನಾಡಿ ಅವರು, ಸಂಘವು ಸತತವಾಗಿ ‘ಎ’ ಗ್ರೇಡ್ ಆಡಿಟ್ ವರ್ಗೀಕರಣ ಪಡೆದಿದ್ದು, 2025-26ನೇ ಸಾಲಿನಲ್ಲಿ ಒಟ್ಟು 325 ಕೋಟಿ ರು. ವ್ಯವಹಾರ ನಡೆಸಿದೆ. 40 ಕೋಟಿ ರು. ಸಾಲ ವಿತರಿಸಲಾಗಿದ್ದು, 1.79 ಕೋಟಿ ರು. ನಿವ್ವಳ ಲಾಭ ಗಳಿಸಿ, ಸದಸ್ಯರಿಗೆ ಶೇ. 22ರಷ್ಟು ಲಾಭಾಂಶ ನೀಡಲುದ್ದೇಶಿಸಲಾಗಿದೆ ಎಂದು ಪ್ರಕಟಿಸಿದರು.
ಇದೇ ಸಂದರ್ಭ 80 ವರ್ಷ ಮೇಲ್ಪಟ್ಟ ಮಾಜಿ ಸೈನಿಕರಾದ ರಮೇಶ್ ಕಾರ್ಣಿಕ್, ಪಿ. ರಾಧಾಕೃಷ್ಣ ಶೆಣೈ, ದಿನೇಶ್ ಕಿಣಿ, ಕ್ಲೇಮೆಂಟ್ ಡಿಸಿಲ್ವ, ಫರ್ನಾಂಡಿಸ್ ಡೆಸ್ಮಂಡ್ ಪೀಟರ್, ವಲೇರಿಯನ್ ನರೋನ್ಹ, ದಿನೇಶ್ ನಾಯಕ್, ಕೆ. ರಮೇಶ್ ಅವರನ್ನು ಸನ್ಮಾನಿಸಲಾಯಿತು ಮತ್ತು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರನ್ನು ಗೌರವಿಸಲಾಯಿತು. ನಂತರ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ .90ಕ್ಕಿಂತ ಹೆಚ್ಚುಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ಸಂಘದ ನಿರ್ದೇಶಕರಾದ ಗಣೇಶ್ ರಾವ್, ಗಣಪಯ್ಯ ಶೇರಿಗಾರ್, ಗಿಲ್ಬರ್ಟ್ ಬ್ರಿಗಾಂಝಾ, ಪ್ರಭಾಕರ ನಾಯ್ಕ, ತುಳಸಿ ದೇವಾಡಿಗ, ಸುಮತಿ ಶ್ರೀಧರ್, ಕೆ. ಡೊರೊತಿ ಕ್ರಾಸ್ತಾ, ವಿಶ್ವನಾಥ ಹಂದೆ, ರಾಘವೇಂದ್ರ ಪಿ.ಎಸ್., ಕಿರಣ್ ಪೈ, ದಯಾನಂದ ಸಿ. ಪುತ್ರನ್, ಸಂತೋಷ್ ನಾಯ್ಕ ಅವರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪರಮಶಿವ ವರದಿ ಮಂಡಿಸಿದರು, ಸಂಘದ ಉಪಾಧ್ಯಕ್ಷ ಕಮಾಂಡರ್ ಜೆರೋಮ್ ಕ್ಯಾಸ್ಟಲಿನ್ ವಂದಿಸಿದರು.