ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಯಕ್ಷಶಿಕ್ಷಣ ಟ್ರಸ್ಟಿನ ವಾರ್ಷಿಕ ಮಹಾಸಭೆ ಬುಧವಾರ ಗೀತಾ ಮಂದಿರದಲ್ಲಿ ಪರ್ಯಾಯ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು.ಶಾಸಕ, ಟ್ರಸ್ಟ್ ಅಧ್ಯಕ್ಷ ಯಶ್ಪಾಲ್ ಎ.ಸುವರ್ಣ ಮತ್ತು ದಿವಾನರಾದ ನಾಗರಾಜ ಆಚಾರ್ಯ ಉಪಸ್ಥಿತಿಯಲ್ಲಿ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ, ಅನುಮೋದಿಸಲಾಯಿತು.ಬಳಿಕ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಯಕ್ಷಗಾನ ಗುರುಗಳ ಪ್ರಥಮ ಸಭೆ ಶಾಸಕರ ಉಪಸ್ಥಿತಿಯಲ್ಲಿ ಜರುಗಿತು. ಉಡುಪಿ, ಕಾಪು, ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರಗಳ 92 ಪ್ರೌಢಶಾಲೆಗಳಿಗೆ 40 ಗುರುಗಳನ್ನು ಯಕ್ಷಗಾನ ಕಲಿಸಲು ನಿಯುಕ್ತಿಗೊಳಿಸಲಾಯಿತು.ಯಕ್ಷಶಿಕ್ಷಣ ಒಂದು ಅಪೂರ್ವ ಯೋಜನೆ, ಇದಕ್ಕೆ ತನ್ನ ಸಂಪೂರ್ಣ ಸಹಕಾರವಿದೆ ಎಂಬುದಾಗಿ ಶಾಸಕರು ಈ ಸಂದರ್ಭದಲ್ಲಿ ಭರವಸೆ ನೀಡಿದರು.ಕಾರ್ಯದರ್ಶಿ ಮುರಲಿ ಕಡೆಕಾರ್, ಗುರುಗಳಿಗೆ ವಿಶೇಷ ಸೂಚನೆಗಳನ್ನು ನೀಡಿದರು. ಟ್ರಸ್ಟಿನ ವಿಶ್ವಸ್ಥರಾದ ಎಂ. ಗಂಗಾಧರ ರಾವ್, ನಾರಾಯಣ ಎಂ. ಹೆಗಡೆ, ವಿ.ಜಿ. ಶೆಟ್ಟಿ, ಮೀನಾ ಲಕ್ಷ್ಮಣಿ ಆಡ್ಯಂತಾಯ, ನಟರಾಜ ಉಪಾಧ್ಯ, ನಾಗರಾಜ ಹೆಗಡೆ, ರಾಜಗೋಪಾಲಾಚಾರ್ಯ, ಅನಂತರಾಜ ಉಪಾಧ್ಯ, ನಿರಂಜನ ಭಟ್ ಉಪಸ್ಥಿತರಿದ್ದರು.ನೂತನ ಕೋಶಾಧಿಕಾರಿ ಗಣೇಶ ಬ್ರಹ್ಮಾವರ ಸಹಕರಿಸಿದರು. ಆರಂಭದಲ್ಲಿ, ಟ್ರಸ್ಟಿನ ಸದಸ್ಯರಾಗಿ, ಕೋಶಾಧಿಕಾರಿಯಾಗಿ ವಿಶೇಷ ಸೇವೆ ಸಲ್ಲಿಸಿ, ಅಗಲಿದ ಎಚ್.ಎನ್. ಶೃಂಗೇಶ್ವರ ಹಾಗೂ ಪ್ರೊ. ಎಚ್. ಕೃಷ್ಣ ಭಟ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.