ಉಡುಪಿ: ಈ ಬಾರಿಯ ದ್ವಿತೀಯ ಪಪೂ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಶೇ 96.39 ಫಲಿತಾಂಶದೊಂದಿಗೆ ಮತ್ತೆ ರಾಜ್ಯಕ್ಕೆ ಅಗ್ರ ಸ್ಥಾನವನ್ನು ಉ‍ಳಿಸಿಕೊಂಡಿದೆ. ಕಳೆದ ವರ್ಷವೂ ಉಡುಪಿ ಜಿಲ್ಲೆ ಶೇ 93.90 ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೇ ಈ ಬಾರಿ ಶೇ 2.49 ರಷ್ಟು ಹೆಚ್ಚು ಫಲಿತಾಂಶ ಗಳಿಸಿದೆ. ಈ ವರ್ಷ (ಪುನರಾವರ್ತಿತರರು, ಖಾಸಗಿ ಸೇರಿ) ಒಟ್ಟು 17,133 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 16,275 ಮಂದಿ ಪಾಸಾಗಿದ್ದಾರೆ. ಜಿಲ್ಲೆಯ ಗ್ರಾಮೀಣ ಪ್ರದೇಶದ 10,901 ವಿದ್ಯಾರ್ಥಿಗಳ್ಲಲಿ 10,328 (ಶೇ 94.74) ಮಂದಿ ಪಾಸಾಗಿದ್ದಾರೆ, ನಗರ ಪ್ರದೇಶದ 6,232 ವಿದ್ಯಾರ್ಥಿಗಳಲ್ಲಿ 5,947 (ಶೇ 95.43) ಮಂದಿ ಪಾಸಾಗಿದ್ದಾರೆ. ಜಿಲ್ಲೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಬಾಲಕಿಯರೇ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಪರೀಕ್ಷೆ ಬರೆದ 8,681 ಬಾಲಕಿಯರಲ್ಲಿ 8,403 (ಶೇ 96.80) ಮಂದಿ ಪಾಸಾಗಿದ್ದಾರೆ, 8,452 ಬಾಲಕರಲ್ಲಿ 7,872 (ಶೇ 93.14) ಮಂದಿ ಪಾಸಾಗಿದ್ದಾರೆ.

ಕಲಾ ವಿಭಾಗದಲ್ಲಿ 1,229 ವಿದ್ಯಾರ್ಥಿಗಳಲ್ಲಿ 1,010 (ಶೇ 82.18), ವಾಣಿಜ್ಯ ವಿಭಾಗದಲ್ಲಿ 7,519 ವಿದ್ಯಾರ್ಥಿಗಳಲ್ಲಿ 7,034 (98.18) ಮತ್ತು ವಿಜ್ಞಾನ ವಿಭಾಗದಲ್ಲಿ 83,85 ವಿದ್ಯಾರ್ಥಿಗಳಲ್ಲಿ 8,232 (ಶೇ 98.16) ಮಂದಿ ಪಾಸಾಗಿ ಸಾಧನೆ ಮಾಡಿದ್ದಾರೆ. ಕನ್ನಡ ಮಾಧ್ಯಮದಲ್ಲಿ 1,834 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 1,519 (ಶೇ 82.82) ಮಂದಿ ಪಾಸಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ 15,299 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 14,756 (ಶೇ 96.45) ಮಂದಿ ಪಾಸಾಗಿದ್ದಾರೆ. ಜಿಲ್ಲೆಯ ಟಾಪರ್‌ಗಳಿವರು: ವಿಜ್ಞಾನ ವಿಭಾಗ: ಕುಂದಾಪುರದ ಹೆಮ್ಮಾಡಿಯ ಜನತಾ ಪಪೂ ಕಾಲೇಜಿನ ವಿದ್ಯಾರ್ಥಿನಿ ರಶ್ಮಿ 598 ಅಂಕಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನಿಯಾಗಿದ್ದಾರೆ. 597 ಅಂಕ ಗಳಿಸಿರುವ ಉಡುಪಿ ಜ್ಞಾನಸುಧಾ ಕಾಲೇಜಿನ ಆರ್ನವಿ, ಕಾರ್ಕಳ ಜ್ಞಾನಸುಧಾ ಕಾಲೇಜಿನ ಚೈತ್ರಿಕಾ ಚೌಧರಿ ಮತ್ತು ವೈಷ್ಣವಿ ಕುಲಕರ್ಣಿ, ಕುಂದಾಪುರದ ಹುಣ್ಸೆಮಕ್ಕಿ ಎಕ್ಸ್‌ಲೆನ್ಸ್ ಕಾಲೇಜಿನ ಮಾನ್ಯ, ಕಾರ್ಕಳ ಹಿರ್ಗಾದ ಕ್ರಿಯೇಟಿವ್ ಕಾಲೇಜಿನ ಪ್ರಾರ್ಥನಾ ಶೆಟ್ಟಿ, ಹೆಬ್ರಿಯ ಅಮೃತಭಾರತಿ ಕಾಲೇಜಿನ ಸಮೀಕ್ಷಾ ಆರ್., ಹೆಮ್ಮಾಡಿಯ ಜನತಾ ಕಾಲೇಜಿನ ಶ್ರಾವ್ಯ ದೇವಾಡಿಗ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗ: 598 ಅಂಕ ಗಳಿಸಿರುವ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಪ್ರೇರಣಾ ರಾಮಚಂದ್ರ ಹೆಗಡೆ ಕಾಮರ್ಸ್‌ನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಪು ಅದಮಾರು ಪೂರ್ಣಪ್ರಜ್ಞ ಕಾಲೇಜಿನ ಅಂಕಿತಾ ಎಸ್. ಭಟ್ ಮತ್ತು ಲಿಯೋನಾ ಅರಾನ್ಹ, ಉಡುಪಿ ಎಂಜಿಎಂ ಕಾಲೇಜಿನ ನೂತನ ನಾರಾಯಣ ನಾಯಕ್, ಕುಂದಾಪುರ ಹೆಮ್ಮಾಡಿ ಜನತಾ ಕಾಲೇಜಿನ ಶ್ಯಾಮ ಶೆಟ್ಟಿ ಅವರು 597 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಜಿಲ್ಲೆಯ ಸಾಧನೆಗೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘನೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ‌ ಶೇಕಡ 96.39 ರಷ್ಟು ಫಲಿತಾಂಶ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಉಡುಪಿ ಜಿಲ್ಲೆಯ ಸಾಧನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಪಿಯುಸಿ ಪರೀಕ್ಷೆಯಲ್ಲಿ ಅಗ್ರ ಎರಡು ಸ್ಥಾನ ಕಾಯ್ದುಕೊಂಡಿರುವ ಉಡುಪಿ‌ ಜಿಲ್ಲೆಯ ಸಾಧನೆ ನಿಜಕ್ಕೂ ಮೆಚ್ಚುವಂಥದ್ದು. ಇದಕ್ಕೆ ಕಾರಣಿಭೂತರಾದ ಶಿಕ್ಷಣ ಇಲಾಖೆ, ಎಲ್ಲಾ‌ ಕಾಲೇಜುಗಳಿಗೆ, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿದ್ಯಾರ್ಥಿಗಳ ಜೀವನ ಉಜ್ವಲವಾಗಲಿ ಎಂದು ಸಚಿವೆ ಹಾರೈಸಿದ್ದಾರೆ.