ಸಾರಾಂಶ
ಕೋಟ: ರಾಜ್ಯ ಕನ್ನಡ ಜಾನಪದ ಪರಿಷತ್ನ ಉಡುಪಿ ಜಿಲ್ಲಾ ಘಟಕದ ದಶಮಾನೋತ್ಸವ ಸಮಾರಂಭ ಮತ್ತು ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ದಶಮಾನೋತ್ಸವ ಗೌರವ ಪುರಸ್ಕಾರ ಕಾರ್ಯಕ್ರಮ ಸೋಮವಾರ ಕೋಟದ ಆಶ್ರಿತ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕನ್ನಡ ಜಾನಪದ ಪರಿಷತ್ ಜನಪದ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಜನಪದವು ಅಳಿದರೆ ಮಾನವ ಕುಲವೇ ನಾಶವಾದಂತೆ, ನಮ್ಮ ಹಿರಿಯರು ನೀಡಿದ ಈ ಅಪೂರ್ವವಾದ ಸಂಪತ್ತನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಕೋಟ ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಎಕ್ಕಾರು, ಜನಪದವು ನಮ್ಮ ಪೂರ್ವಜರ ಜೀವನ ಪದ್ಧತಿಯಾಗಿತ್ತು, ಜನಪದವು ದೊಡ್ಡ ಸಾಗರವಿದ್ದಂತೆ, ಇದರ ಸದುಪಯೋಗವನ್ನು ನಾವೆಲ್ಲರೂ ಬಳಕೆ ಮಾಡಬೇಕು ಎಂದು ಕರೆ ನೀಡಿದರು.ಮುಖ್ಯ ಅತಿಥಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಜನಪದ ಕುರಿತು ಮಾಹಿತಿ ನೀಡಿದರು. ಸಭಾಧ್ಯಕ್ಷತೆ ವಹಿಸಿದ್ದ ಆಶ್ರಿತ್ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿದ್ಯಾಧರ್ ಶೆಟ್ಟಿ ಮತ್ತು ಕಜಾಪ ಜಿಲ್ಲಾಧ್ಯಕ್ಷ ಗಣೇಶ್ ಗಂಗೊಳ್ಳಿ ಶುಭ ಹಾರೈಸಿದರು.
ಸಂಸ್ಥೆಯ ಪ್ರಾಂಶುಪಾಲ ಡಾ. ಮೋಹನ್ ಎಸ್, ಉದ್ಯಮಿ ಸುಧೀರ್ ಶೆಟ್ಟಿ, ಕಜಾಪ ಬೈಂದೂರು ತಾಲೂಕಿನ ಅಧ್ಯಕ್ಷ ಗಣೇಶ್ ದೇವಾಡಿಗ, ಹೆಬ್ರಿ ತಾಲೂಕು ಅಧ್ಯಕ್ಷೆ ಶೈಲಜಾ ಶಿವಪುರ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಬಿ.ಟಿ ನಾಯ್ಕ್, ಉಡುಪಿ ತಾಲೂಕ ಅಧ್ಯಕ್ಷೆ ಮಾಯಾ ಕಾಮತ್, ಜಿಲ್ಲಾ ಪತಿಕಾ ಕಾರ್ಯದರ್ಶಿ ನರಸಿಂಹ ನಾಯಕ್, ಜಿಲ್ಲಾ ಕಾರ್ಯಧ್ಯಕ್ಷ ಉದಯ್ ಕುಮಾರ್ಮುಂತಾದವರು ಉಪಸ್ಥಿತರಿದ್ದರು.ಕುಂದಾಪುರ ತಾಲೂಕು ಅಧ್ಯಕ್ಷೆ ಸುಪ್ರಿತಾ ಪುರಾಣಿಕ್ ನಿರೂಪಿಸಿದರು, ಕೋಶಾಧಿಕಾರಿ ಚಂದ್ರ ಬಿ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿದರು.
ಕಾರ್ಯಕ್ರಮದ ಬಳಿಕ ಗಣೇಶ್ ಗಂಗೊಳ್ಳಿ ಮತ್ತು ಬಳಗದ ವತಿಯಿಂದ ಜನಪದ ಸಂಗೀತ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ವಿವಿಧ ತಾಲೂಕುಗಳ ಸದಸ್ಯರು ಕಾಲೇಜಿನ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು