ಸಾರಾಂಶ
ಉಡುಪಿ ಜಿಲ್ಲಾ ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಭೆ ನಡೆಯಿತು.ಸಭೆಯಲ್ಲಿ ಪ್ರಸಕ್ತ ವಾರ್ಷಿಕ ಕಾರ್ಯಚಟುವಟಿಕೆ ಬಗ್ಗೆ ಸಮಾಲೋಚಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಉಡುಪಿ ಜಿಲ್ಲಾ ಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಭೆಯು ಮಣಿಪಾಲ ಜ್ಞಾನಸುಧಾ ಪ.ಪೂ.ಕಾಲೇಜಿನಲ್ಲಿ ನಡೆಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕರಾದ ಮಾರುತಿಯವರು, 2024 ರ ದ್ವಿತೀಯ ಪಿ.ಯು. ಫಲಿತಾಂಶದಲ್ಲಿ ಜಿಲ್ಲೆ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆಯುವಲ್ಲಿ ಖಾಸಗಿ ಕಾಲೇಜುಗಳ ಸಹಕಾರ ಮಹತ್ವ ಪೂರ್ಣವಾಗಿದೆ. ಮುಂದಿನ ದಿನಗಳಲ್ಲೂ ಮಕ್ಕಳಿಗೆ ಶೈಕ್ಷಣಿಕ ಒತ್ತಡ ಅತಿಯಾಗದ ರೀತಿಯಲ್ಲಿ ನೋಡಿಕೊಂಡು ಅವರ ಶೈಕ್ಷಣಿಕ ಬದುಕು ಗಟ್ಟಿಗೊಳಿಸುವ ಕಾರ್ಯದಲ್ಲಿ ಎಲ್ಲ ಪ್ರಾಂಶುಪಾಲರು ತೊಡಗಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷರಾದ ದಿನೇಶ್ ಎಂ ಕೊಡವೂರ್ ಮಾತನಾಡಿ, ಇಲಾಖಾ ವತಿಯಿಂದ ನಡೆಯುವ ಎಲ್ಲ ಶೈಕ್ಷಣಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳಿಗೆ ಸಂಪೂರ್ಣವಾದ ಸಹಕಾರ ನೀಡಿ ಮುಂದಿನ ವರ್ಷದಲ್ಲೂ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವತ್ತ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು.ಸಭೆಯಲ್ಲಿ ಪ್ರಸಕ್ತ ವಾರ್ಷಿಕ ಕಾರ್ಯಚಟುವಟಿಕೆಗಳ ಬಗ್ಗೆ ಸಮಾಲೋಚಿಸಲಾಯಿತು.
ಸಂಘದ ಕಾರ್ಯದರ್ಶಿಗಳಾದ ಡಾ.ದಯಾನಂದ ಪೈ ಸ್ವಾಗತಿಸಿ, ಕೋಶಾಧಿಕಾರಿ ಸಂದೀಪ್ ಕುಮಾರ್ ವಂದಿಸಿದರು. ವೇದಿಕೆಯಲ್ಲಿ ಸಹಕಾರ್ಯದರ್ಶಿ ರಾಮದಾಸ್ ಪ್ರಭು, ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಯೋಜಕರಾದ ಐವಾನ್ ಸುವಾರಿಸ್ ವೇದಿಕೆಯಲ್ಲಿದ್ದು ಇದ್ದರು. ವಿವಿಧ ಪ.ಪೂ.ಕಾಲೇಜುಗಳ ಪ್ರಾಂಶುಪಾಲರು ಸಭೆಯಲ್ಲಿ ಉಪಸ್ಥಿತರಿದ್ದರು.