ಸಾರಾಂಶ
ಉಡುಪಿ : ಉಡುಪಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ದಶಮ ವರ್ಷದ ಉಡುಪಿ ದಸರಾದ ಪ್ರಯುಕ್ತ ‘ಮಾತೃಸಂಗಮ’ ಮತ್ತು ‘ನವರಾತ್ರಿ ದಾಂಡಿಯಾ’ ಕಾರ್ಯಕ್ರಮಗಳ ಬಗ್ಗೆ ಮಹಿಳಾ ಸದಸ್ಯರ ಪೂರ್ವಭಾವಿ ಸಭೆ ಶನಿವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಿತು.
ಈ ಬಾರಿಯ ಉಡುಪಿ ದಸರಾವನ್ನು ಸೆ.22ರಿಂದ ಅ.3ರ ವರೆಗೆ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯಪಟ್ಟ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ವೈಭವದಿಂದ ನಡೆಸಲುದ್ದೇಶಿಸಲಾಗಿದೆ ಎಂದು ಶಾರದೋತ್ಸವ ಸಮಿತಿ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಬೈಕಾಡಿ ಸಭೆಯಲ್ಲಿ ಹೇಳಿದರು.ಮಾತೃಸಂಗಮದ ಸಂಚಾಲಕಿ ವೀಣಾ ಎಸ್. ಶೆಟ್ಟಿ ಮಾತನಾಡಿ, ದಶಮ ವರ್ಷದ ಪ್ರಯುಕ್ತ ಮಾತೃಸಂಗಮವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ಎಲ್ಲ ಭಜನಾ ಮಂಡಳಿ, ಮಹಿಳಾ ಮಂಡಳಿ, ಯೋಗ ಕೇಂದ್ರ, ಯುವತಿ ಮಂಡಳಿ, ಸ್ವಸಹಾಯ ಸಂಘಗಳು, ಸಾಮಾಜಿಕ, ಸಾಂಸ್ಕೃತಿಕ ಸಂಘಸಂಸ್ಥೆಗಳ ಸದಸ್ಯೆಯರು ಭಾಗವಹಿಸಲಿದ್ದಾರೆ ಎಂದರು.ಕಳೆದ ಬಾರಿಯಂತೆ ಈ ಬಾರಿಯೂ ಮಹಿಳೆಯರಿಗಾಗಿ ಸಂಗೀತ ದಾಂಡಿಯಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.
11 ದಿನಗಳ ಕಾಲ ನಡೆಯುವ ಈ ಶಾರದೋತ್ಸವ - ದಸರಾವನ್ನು ಯಶಸ್ವಿಗೊಳಿಸಲು ಸ್ವಯಂಸೇವಕಿಯರ ತಂಡವನ್ನು ರಚಿಸಲಾಗುವುದು ಎಂದು ಸಮಿತಿದ ಪ್ರಧಾನ ಕಾರ್ಯದರ್ಶಿ ತಾರಾ ಉಮೇಶ್ ಆಚಾರ್ಯ ತಿಳಿಸಿದರು.ಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮೆಂಡನ್, ಮಾತೃಸಂಗಮದ ಸಂಚಾಲಕಿಯರಾದ ಪದ್ಮಾ ರತ್ನಾಕರ್, ಸರೋಜಾ ಯಶವಂತ್, ಪ್ರಮುಖರಾದ ತಾರಾ ಸತೀಶ್, ಸುಮಿತ್ರಾ ನಾಯಕ್ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು.