ಸಾರಾಂಶ
ಸೋಮವಾರ ರಾತ್ರಿಯ ಮಳೆಗೆ ಜಿಲ್ಲೆಯಲ್ಲಿ 2 ಮನೆಗಳು ಸಂಪೂರ್ಣ ದ್ವಂಸವಾಗಿದ್ದು, ಒಟ್ಟು 24 ಮನೆಗಳಿಗೆ ಹಾನಿಯಾಗಿ ಸುಮಾರು 13 ಲಕ್ಷ ರು.ಗಳಿಗೂ ಅಧಿಕ ಹಾನಿಯನ್ನು ಅಂದಾಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ. ಬೆಳಗ್ಗೆ ಮಳೆ ಕಡಿಮೆ ಇತ್ತಾದರೂ ಮಧ್ಯಾಹ್ನದ ನಂತರ ಭಾರಿ ಗಾಳಿ ಮಳೆಯಾಗಿದೆ. ಮುಖ್ಯವಾಗಿ ಕುಂದಾಪುರ ಮತ್ತು ಬ್ರಹ್ಮಾವರ ಭಾಗದಲ್ಲಿ ಜಡಿಮಳೆಯಾಗಿದೆ.ಸೋಮವಾರ ರಾತ್ರಿಯ ಮಳೆಗೆ ಜಿಲ್ಲೆಯಲ್ಲಿ 2 ಮನೆಗಳು ಸಂಪೂರ್ಣ ದ್ವಂಸವಾಗಿದ್ದು, ಒಟ್ಟು 24 ಮನೆಗಳಿಗೆ ಹಾನಿಯಾಗಿ ಸುಮಾರು 13 ಲಕ್ಷ ರು.ಗಳಿಗೂ ಅಧಿಕ ಹಾನಿಯನ್ನು ಅಂದಾಜಿಸಲಾಗಿದೆ.
ಬ್ರಹ್ಮಾವರ ತಾಲೂಕಿನ ಪಾರಂಪಳ್ಳಿ ಗ್ರಾಮದ ರೇಣುಕಾ ಮುತ್ತು ಅವರ ವಾಸ್ತವ್ಯದ ಮನೆಗೆ ಗಾಳಿ, ಮಳೆಯಿಂದ ಸಂಪೂರ್ಣ ಹಾನಿಯಾಗಿ 3,00,000 ರು. ಮತ್ತು ಹಾರಾಡಿ ಗ್ರಾಮದ ಜಲಜ ಸದಾಶಿವ ಶೆಟ್ಟಿ ಅವರ ಮನೆ ಸಂಪೂರ್ಣ ಹಾನಿಗೊಂಡು 3,00,000 ರು.ಗಳ ನಷ್ಟ ಸಂಭವಿಸಿದೆ.ಕುಂದಾಪುರ ತಾಲೂಕಿನಲ್ಲಿ 9 ಮನೆಗಳಿಗೆ 2.15 ಲಕ್ಷ ರು., ಬ್ರಹ್ಮಾವರ ತಾಲೂಕಿನಲ್ಲಿ 10 ಮನೆಗಳಿಗೆ 8.55 ಲಕ್ಷ ರು. ಮತ್ತು ಕಾಪು ತಾಲೂಕಿನಲ್ಲಿ 5 ಮನೆಗಳಿಗೆ 2.30 ಲಕ್ಷ ರು.ಗಳಷ್ಟು ನಷ್ಟ ಉಂಟಾಗಿದೆ.
ಮಂಗಳವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 39.70 ಮಿ.ಮೀ. ಮಳೆ ದಾಖಲಾಗಿದೆ. ಅದರಲ್ಲಿ ತಾಲೂಕುವಾರು ಕಾರ್ಕಳ 32.40, ಕುಂದಾಪುರ 59.90, ಉಡುಪಿ 22, ಬೈಂದೂರು 49.90, ಬ್ರಹ್ಮಾವರ 25.50, ಕಾಪು 33.90, ಹೆಬ್ರಿ 26.70 ಮಿ.ಮೀ. ಮಳೆಯಾಗಿದೆ.