ಸಾರಾಂಶ
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನದಲ್ಲಿ ಸಂಘದ ಸ್ಥಾಪನಾ ದಿನಾಚರಣೆ ನಡೆಯಿತು. ಕಾರ್ಟೂನಿಸ್ಟ್ ಹಾಗೂ ಬರಹಗಾರ ಪಂಜು ಗಂಗೊಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಯಾವುದೇ ಸರ್ಕಾರಗಳು ನಿಜ ಹೇಳುವುದಿಲ್ಲ. ಈಗಿನ ಸರ್ಕಾರಗಳಂತೂ ಸುಳ್ಳು ಹೇಳುವುದು ಮಾತ್ರವಲ್ಲ ವಾಟ್ಸಾಪ್ ಮೂಲಕ ಆಡಳಿತ ನಡೆಸುತ್ತಿದೆ. ಪತ್ರಿಕಾ ರಂಗ ಆ ಸುಳ್ಳಿನ ಹಿಂದೆ ಹೋಗಿ ಸತ್ಯ ಏನು ಎಂಬುದನ್ನು ಜನರಿಗೆ ತಿಳಿಸುವ ಕಾರ್ಯ ಮಾಡಬೇಕು. ಆದರೆ ಇಂದು ಆ ಪರಿಸ್ಥಿತಿ ಬದಲಾಗಿದೆ. ಸರ್ಕಾರದ ಪರವಾಗಿ ಸುಳ್ಳುಗಳನ್ನು ಹರಡುವ ಕಾರ್ಯ ನಡೆಯುತ್ತಿದೆ ಎಂದು ಕಾರ್ಟೂನಿಸ್ಟ್ ಹಾಗೂ ಬರಹಗಾರ ಪಂಜು ಗಂಗೊಳ್ಳಿ ವಿಷಾದಿಸಿದರು.ಅವರು ಶನಿವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾದ ಸಂಘದ ಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಏನು ಮಾಡುತ್ತದೆ ಮತ್ತು ಏನು ಮಾಡುತ್ತಿಲ್ಲ ಎಂದು ತಿಳಿಸುವ ಕಾರ್ಯವನ್ನು ಪತ್ರಿಕಾ ರಂಗ ಮಾಡಬೇಕು. ಹಾಗಾಗಿ ಪತ್ರಿಕಾ ರಂಗವನ್ನು ಪ್ರಜಾಪ್ರಭುತ್ವದ ಕಾವಲು ನಾಯಿ ಎಂದು ಹೇಳಲಾಗುತ್ತದೆ. ಆದರೆ ಈಗ ಕೆಲವು ಮಾಧ್ಯಮ ನಿರ್ದಿಷ್ಟ ಪಕ್ಷದ ಪರವಾಗಿ ನಿಂತು ಕೆಲಸ ಮಾಡುತ್ತಿದೆ ಎಂದವರು ಬೇಸರ ವ್ಯಕ್ತಪಡಿಸಿದರು.ಹಿರಿಯ ಪತ್ರಕರ್ತ ಮೋಹನ್ಚಂದ್ರ ನಂಬಿಯಾರ್, ಸಂಘದ ಸ್ಥಾಪನೆ, ಅಧ್ಯಕ್ಷರ ಕೊಡುಗೆ ಕುರಿತು ಮಾತನಾಡಿದರು. ಸಂಘದ ಸ್ಥಾಪಕ ಸದಸ್ಯ ಪತ್ರಕರ್ತ ಡಾ.ಸುಧಾಕರ್ ನಂಬಿಯಾರ್ ಅವರಿಗೆ ಸ್ಥಾಪನಾ ದಿನದ ಗೌರವ ಸನ್ಮಾನವನ್ನು ಸಲ್ಲಿಸಲಾಯಿತು.ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು ಉಪಸ್ಥಿತರಿದ್ದರು.ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಸಂಘದ ಸದಸ್ಯ ಆಸ್ಟ್ರೋ ಮೋಹನ್ ಅವರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಅಸ್ಟ್ರೋ ಮೋಹನ್ ತಮ್ಮ ಪುಸ್ತಕಗಳನ್ನು ಸಂಘದ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ ಅತಿಥಿಗಳ ಪರಿಚಯ ಮಾಡಿದರು. ರಜತ ಮಹೋತ್ಸವ ಸಮಿತಿಯ ಸಂಚಾಲಕ ಶರೀಫ್ ಕಾರ್ಕಳ ವಂದಿಸಿದರು. ಪತ್ರಕರ್ತ ಮೈಕಲ್ ರಾಡಿಗ್ರಸ್ ಕಾರ್ಯಕ್ರಮ ನಿರೂಪಿಸಿದರು.