ಸಾರಾಂಶ
ಉಡುಪಿ: ಉಡುಪಿಯಲ್ಲಿ ನೆಲೆಸಿರುವ ಕೇರಳ ರಾಜ್ಯದ ಮಾಲಯಾಳಿಗರನ್ನು ಸಂಘಟಿಸುವ ಉದ್ದೇಶದಿಂದ ಆರಂಭಿಸಲಾಗಿರುವ ಕೇರಳ ಸಮಾಜಂ ಉಡುಪಿ ಸಂಘಟನೆ ವತಿಯಿಂದ 14ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಪ್ರಥಮ ಓಣಂ ಸಂಭ್ರಮಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು.
ಈ ಬಗ್ಗೆ ಸಂಘಟನೆಯ ಅಧ್ಯಕ್ಷ ಅರುಣ್ ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಓಣಂ ಕಾರ್ಯಕ್ರಮವನ್ನು ಗೋವಾದ ಮಾಜಿ ರಾಜ್ಯಪಾಲ ಶ್ರೀಧರನ್ ಪಿಳ್ಳೈ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಯಶ್ಪಾಲ್ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಮಾಹೆಯ ಪ್ರಾಧ್ಯಾಪಕ ಡಾ. ಸಾಬೂ ಕೆ.ಎಂ., ಸುವರ್ಣ ಕರ್ನಾಟಕ ಕೇರಳ ಸಮಾಜಂ ಅಧ್ಯಕ್ಷ ರಾಜನ್ ಜಾಕೋಬ್, ಖ್ಯಾತ ಸಿನಿಮಾ ತಾರೆಯರಾದ ಹರೀಶ್ ಕನರನ್, ವಿವೇಕ್ ಗೋಪನ್ ಮತ್ತು ಸೀಮಾ ಜಿ ನಾಯರ್ ಭಾಗವಹಿಸಲಿದ್ದಾರೆ ಎಂದರು.10.30ಕ್ಕೆ ಓಣಂ ಉದ್ಘಾಟನೆಗೆ ಮೊದಲು 8.30ರಿಂದ ‘ಪೂಕಳಂ ಸ್ಪರ್ಧೆ’ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕೇರಳ ಸಮಾಜಂ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ ಓಣಂ ಹಬ್ಬದ ಪ್ರಮುಖ ಭಾಗ ‘ಒಣಂ ಸಧ್ಯ’ ಅಂದರೆ ಓಣಂ ವಿಶೇಷ ಭೋಜನವನ್ನು ಏರ್ಪಡಿಸಲಾಗಿದೆ. ಭೋಜನದ ಬಳಿಕ ಕೇರಳದ ಸಿನಿಮಾ ಕಲಾವಿದರ ತಂಡದಿಂದ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.ಸಂಜೆ ಜಯಕೇರಳ ಕಳರಿ ಸಂಘಮ್ ತಂಡದಿಂದ ಕಳರಿ ಪ್ರದರ್ಶನ ನಡೆಯಲಿದೆ. ಅಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಗಿರುವುದರಿಂದ ದಿನದ ವಿಶೇಷವಾಗಿ ಹುಲಿ ವೇಷ ಕುಣಿತ, ಕೇರಳ ಶೈಲಿಯ ಚಂಡೆ ಮೇಳ, ಓಣಂ ಹಬ್ಬ ಸಾಂಪ್ರದಾಯಿಕ ಮಾವೇಲಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ಎಸ್. ವಸಂತ್ ಕುಮಾರ್ ಮತ್ತು ಶ್ರೀಕುಮಾರ್, ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಖಜಾಂಚಿ ರಮೇಶ್ ಈಪಿ, ಜೊತೆ ಕಾರ್ಯದರ್ಶಿ ಪ್ರದೀಪ್ ಜಿ.,ಓಣಂ ಕಮಿಟಿ ಚೇರ್ ಮ್ಯಾನ್ ಡಾ. ಬಿನ್ಸಿ ಎಂ. ಜಾರ್ಜ್ ಉಪಸ್ಥಿತರಿದ್ದರು.