ಸಾರಾಂಶ
ಫ್ರೆಂಡ್ಸ್ ಗ್ರೂಪ್ ಉಡುಪಿ ಮತ್ತು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಜಂಟಿಯಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ಏ.೧೨ರಂದು ಕಾಲೇಜಿನಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಫ್ರೆಂಡ್ಸ್ ಗ್ರೂಪ್ ಉಡುಪಿ ಮತ್ತು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಜಂಟಿಯಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ಏ.೧೨ರಂದು ಕಾಲೇಜಿನಲ್ಲಿ ನಡೆಯಿತು.ಮಣಿಪಾಲದ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ. ಮೊಹಮ್ಮದ್ ಅಝೀಜ್, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಮುಂತಾದ ಮಾರಕ ರೋಗಗಳಿಂದ ಬಳಲುತ್ತಿರುವವರಿಗೆ, ಅಪಘಾತದಂತಹ ತುರ್ತು ಸಂದರ್ಭದಲ್ಲಿ ರಕ್ತವು ಅತ್ಯವಶ್ಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಮಾಜವು ಮಾಡುವ ಸ್ವಯಂ ಪ್ರೇರಿತ ರಕ್ತದಾನವು ಅತ್ಯಮೂಲ್ಯವಾಗಿದೆ. ಹಾಗೆಯೇ ರಕ್ತದಾನದಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ಕೆಲವೊಂದು ಸತ್ಯ ನಿದರ್ಶನದ ಮುಖೇನ ಹೇಳಿದರು.ಕಾಲೇಜಿನ ಪ್ರಾಚಾರ್ಯರಾದ ಆಶಾ ಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫ್ರೆಂಡ್ಸ್ ಗ್ರೂಪ್ ಉಡುಪಿ ಇದರ ಗೌರವಾಧ್ಯಕ್ಷ ವಸಂತ ರಾವ್ ಕರಂಬಳ್ಳಿ, ಅಧ್ಯಕ್ಷರಾದ ಸಂದೀಪ್ ಹಾಗೂ ಫ್ರೆಂಡ್ಸ್ ಗ್ರೂಪ್ನ ಸರ್ವ ಪದಾಧಿಕಾರಿಗಳು, ಶಿಬಿರದ ಮೇಲ್ವಿಚಾರಕಾರದ ಶ್ರೀ ಶ್ರೀಧರ್ ಉಪಸ್ಥಿತರಿದ್ದರು.ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ರಾಜೇಶ್ ಕುಮಾರ್ ಸ್ವಾಗತಿಸಿದರು. ಸಹ ಯೋಜನಾಧಿಕಾರಿ ಚಂದ್ರಶೇಖರ್ ವಂದಿಸಿದರು. ವಿದ್ಯಾರ್ಥಿನಿ ಸನ್ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.