ಸಾರಾಂಶ
ಘನತ್ಯಾಜ್ಯ ನಿರ್ವಹಣೆಯಲ್ಲಿ ಪ್ರತಿ ದಿನ 1000 ಕೆ.ಜಿ.ಗೂ ಅಧಿಕ ತ್ಯಾಜ್ಯವನ್ನು ಪ್ರತ್ಯೇಕಿಸಿ ನಿರ್ವಹಣೆ ಮಾಡಿದ ಸ್ಪಂದನಾ ನಗರ ಸ್ತ್ರೀ ಶಕ್ತಿ ಗುಂಪಿನ ವನಜಾ, ಶ್ರೀ ಸಿದ್ದಿ ನಗರ ಸ್ತ್ರೀ ಶಕ್ತಿ ಗ್ರೂಪ್ನ ಚಂದಾ ಅನಂದ್ ಅಂಚನ್ ಹಾಗೂ ಕಾರುಣ್ಯ, ನಿರಂತರ ಉಳಿತಾಯ ಗುಂಪಿನ ಮೀನಾಕ್ಷಿ ಹಾಗೂ ತ್ಯಾಜ್ಯ ಸಂಗ್ರಹಣೆಯ ವಾಹನದ ಮಹಿಳಾ ಚಾಲಕಿ ಸ್ಮಿತಾ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ನಗರಸಭಾ ಕಚೇರಿಯಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ, ಪ್ರತಿದಿನ ನಗರವನ್ನು ತ್ಯಾಜ್ಯ ಮುಕ್ತ ಮಾಡುವ ಸಾಧಕಿ ಮಹಿಳೆಯರನ್ನು ಸನ್ಮಾನಿಸುವ ಮೂಲಕ ಅರ್ಥ ಪೂರ್ಣವಾಗಿ ಮಹಿಳಾ ದಿನವನ್ನು ಆಚರಿಸಲಾಯಿತು.ಈ ಸಂದರ್ಭ ಪೌರಾಯುಕ್ತ ರಾಯಪ್ಪ ಮಾತನಾಡಿ, ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲಿ ಪುರುಷರಿಗೆ ಸರಿ ಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ. ಪ್ರತೀ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎಂಬುದು ಸತ್ಯವಾದ ಮಾತು. ಅಂತಹ ಮಹಿಳೆಯರನ್ನು ಪ್ರೋತ್ಸಾಹಿಸುವುದು, ಅವರ ಸಾಧನೆಯನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಇದೇ ಕಾರ್ಯಕ್ರಮದಲ್ಲಿ ನಗರಸಭೆಯ ಘನತ್ಯಾಜ್ಯ ನಿರ್ವಹಣೆಯಲ್ಲಿ ಪ್ರತಿ ದಿನ 1000 ಕೆ.ಜಿ.ಗೂ ಅಧಿಕ ತ್ಯಾಜ್ಯವನ್ನು ಪ್ರತ್ಯೇಕಿಸಿ ನಿರ್ವಹಣೆ ಮಾಡಿದ ಸ್ಪಂದನಾ ನಗರ ಸ್ತ್ರೀ ಶಕ್ತಿ ಗುಂಪಿನ ವನಜಾ, ಶ್ರೀ ಸಿದ್ದಿ ನಗರ ಸ್ತ್ರೀ ಶಕ್ತಿ ಗ್ರೂಪ್ನ ಚಂದಾ ಅನಂದ್ ಅಂಚನ್ ಹಾಗೂ ಕಾರುಣ್ಯ, ನಿರಂತರ ಉಳಿತಾಯ ಗುಂಪಿನ ಮೀನಾಕ್ಷಿ ಹಾಗೂ ತ್ಯಾಜ್ಯ ಸಂಗ್ರಹಣೆಯ ವಾಹನದ ಮಹಿಳಾ ಚಾಲಕಿ ಸ್ಮಿತಾ ಅವರನ್ನು ಸನ್ಮಾನಿಸಲಾಯಿತು.ಈ ಕಾರ್ಯಕ್ರಮಲ್ಲಿ ನಗರಸಭೆಯ ಪರಿಸರ ಅಭಿಯಂತರಾದ ಸ್ನೇಹ ಕೆ.ಎಸ್., ಪ್ರಭಾರ ಆರೋಗ್ಯ ನಿರೀಕ್ಷಕ ಮನೋಹರ್, ಕಚೇರಿ ವ್ಯವಸ್ಥಾಪಕ ನಾಗರಾಜ ಕೆ., ಕಂದಾಯ ಅಧಿಕಾರಿ ಸಂತೋಷ್ ಎಸ್.ಬಿ., ಸಮುದಾಯ ಸಂಘಟನಾ ಅಧಿಕಾರಿ ನಾರಾಯಣ ಎಸ್.ಎಸ್., ಸುರೇಂದ್ರ ಹಾಗೂ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು. ಕಂದಾಯ ವಿಭಾಗದ ಸುಧಾಕರ್ ಕೋಟ್ಯಾನ್ ನಿರೂಪಿಸಿ, ವಂದಿಸಿದರು.