ಉಡುಪಿ: ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಕೊನೆಗೂ ಬಡಾನಿಡಿಯೂರು ಗ್ರಾಮದಲ್ಲಿ ನಿರ್ಮಿಸಲುದ್ದೇಶಿಸಿರುವ ರೆಸಾರ್ಟ್ಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಏಕ ವಿನ್ಯಾಸ (ಸಿಂಗಲ್ ಲೇ ಔಟ್) ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ 2 ವರ್ಷಗಳಿಂದ ತಮ್ಮ ರೆಸಾರ್ಟ್ಗೆ ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದನೆ ನೀಡುತ್ತಿಲ್ಲ, ಇದರ ಹಿಂದೆ ಉಡುಪಿಯ ಹಾಲಿ ಶಾಸಕ ಯಶ್ಪಾಲ್ ಸುವರ್ಣ ಅವರ ಹುನ್ನಾರ ಇದೆ ಎಂದು ಆರೋಪಿಸಿ ರಘುಪತಿ ಭಟ್, ಸೋಮವಾರ ನಗರಾಭಿವೃದ್ಧಿ ಪ್ರಾಧಿಕಾರದ ಮುಂದೆ ಧರಣಿ ನಡೆಸಿದ್ದರು. ಸ್ಥಳೀಯ ಯುವಕ ಮಂಡಲದವರು ಮಾಜಿ ಶಾಸಕರ ರೆಸಾರ್ಟ್ಗೆ ಅನುಮತಿ ನೀಡುವುದಕ್ಕೆ ವಿರೋಧಿಸಿ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ, ಆದ್ದರಿಂದ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅನುಮೋದನೆ ನೀಡಿಲ್ಲ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸ್ಪಷ್ಟನೆ ನೀಡಿದ್ದರು.ಮಂಗಳವಾರವೂ ಮಾಜಿ ಶಾಸಕರು ತಮ್ಮ ಧರಣಿಯನ್ನು ಮುಂದುವರಿಸಿದರು, ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರು ಬಂದು ಅವರಿಗೆ ಅನುಮೋದನೆಯ ಪತ್ರವನ್ನು ನೀಡಿದರು, ಇದಕ್ಕೆ ಸಂತಸ ವ್ಯಕ್ತಪಡಿಸಿದ ಮಾಜಿ ಶಾಸಕರು ತಮ್ಮ ಧರಣಿಯನ್ನು ಮುಕ್ತಾಯಗೊಳಿಸಿದರು.ಆದರೆ ಆಯುಕ್ತರು, ಕಾನೂನು ತಜ್ಞರ ಅಭಿಪ್ರಾಯ ಪಡೆದು ಈ ಅನುಮೋದನೆ ನೀಡಿದ್ದೇವೆ, ಇದು ತಾತ್ಕಾಲಿಕ ಅನುಮೋದನೆಯಾಗಿದ್ದು, ಮುಂದೆ ನ್ಯಾಯಾಲಯದ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ತಾನು ತಮ್ಮ ವೈಯುಕ್ತಿಕ ರೆಸಾರ್ಟಿಗಾಗಿ ಈ ಧರಣಿ ಮಾಡಿದ್ದು, ಮುಂದೆ ಸಾಮಾನ್ಯ ಜನರಿಗೆ ಕೂಡ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶೀಘ್ರ ಕೆಲಸಗಳು ಆಗುವಂತೆ ಹೋರಾಟ ಮುಂದುವರೆಸುವುದಾಗಿ ಮಾಜಿ ಶಾಸಕರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರ ಬೆಂಬಲಿಗರಾದ ಮಹೇಶ್ ಠಾಕೂರ್, ಸುವರ್ಧನ ನಾಯಕ್ ಮುಂತಾದವರಿದ್ದರು.