ಉಡುಪಿ: ಮಳೆ ಇಳಿಮುಖ, ಇಂದು ಯಲ್ಲೋ ಅಲರ್ಟ್

| Published : Jun 19 2025, 12:35 AM IST

ಸಾರಾಂಶ

ಹವಾಮಾನ ಇಲಾಖೆ ಉಡುಪಿ ಜಿಲ್ಲೆಯಲ್ಲಿ ಬುಧವಾರ ಆರೆಂಜ್ ಅಲರ್ಟ್ ಮತ್ತು ಗುರುವಾರ ಯಲ್ಲೋ ಅಲರ್ಟ್ ಘೋಷಿಸಿದ್ದು, ಮಳೆ ಕಡಿಮೆಯಾಗುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲೆಯಲ್ಲಿ ಬುಧವಾರ ಗಣನೀಯವಾಗಿ ಮಳೆ ಇಳಿಮುಖವಾಗಿತ್ತು, ಮಂಗಳವಾರ ರಾತ್ರಿ ಉತ್ತಮ ಮಳೆಯಾಗಿದ್ದರೂ, ಬುಧವಾರ ಹಗಲು ಒಂದೆರಡು ಬಾರಿ ಸಾಧಾರಣ ಮಳೆಯಾಗಿದೆ. ಹವಾಮಾನ ಇಲಾಖೆ ಬುಧವಾರ ಆರೆಂಜ್ ಅಲರ್ಟ್ ಮತ್ತು ಗುರುವಾರ ಯಲ್ಲೋ ಅಲರ್ಟ್ ಘೋಷಿಸಿದ್ದು, ಮಳೆ ಕಡಿಮೆಯಾಗುವ ಸಾಧ್ಯತೆ ಇದೆ.

ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 50.70 ಮಿ.ಮೀ. ಮಳೆಯಾಗಿದೆ. ಈ ಮಳೆಗೆ ಜಿಲ್ಲೆಯಲ್ಲಿ 2 ಮನೆಗಳಿಗೆ, 2 ಕುಟುಂಬಗಳ ಗೃಹೋಪಯೋಗಿ ಸಾಮಾಗ್ರಿಗಳಿಗೆ ಮತ್ತು 3 ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ರಾಘವೇಂದ್ರ ಆಚಾರ್ಯ ಅವರ ಮನೆಯ ಮೇಲೆ ಮರಬಿದ್ದು 10,000 ರು. ಮತ್ತು ಕುಂದಾಪುರ ತಾಲೂಕಿನ ಕಂದಾವರ ಗ್ರಾಮದ ಕಮಲಾ ಶೇರಿಗಾರ್ ಅವರ ಮನೆಯ ಮೇಲೆ ಮರ ಬಿದ್ದು 40,000 ರು.ಗಳಷ್ಟು ಹಾನಿಯಾಗಿದೆ.

ನೆರೆ ನೀರು ಮನೆಯೊಳಗೆ ನುಗ್ಗಿ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ಪದ್ದು ಪೂಜಾರಿ ಅವರ ಗೃಹೊಪಯೋಗಿ ವಸ್ತುಗಳಿಗೆ 10,000 ಮತ್ತು ಬೈಂದೂರು ತಾಲೂಕಿನ ಕಂಬದಕೋಣೆ ಗ್ರಾಮದ ರಾಮಕೃಷ್ಣ ಗಾಣಿಗ ಅವರ ಗೃಹೊಪಯೋಗಿ ವಸ್ತು ಹಾಗೂ ದಿನಸಿ ಸಾಮಾಗ್ರಿಗಳಿಗೆ 24,000 ರು.ಗಳಷ್ಟು ಹಾನಿಯಾಗಿದೆ.

ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಬೇಬಿ ಗೋವಿಂದ ಪೂಜಾರಿ ಅವರ ಜಾನುವಾರು ಕೊಟ್ಟಿಗೆ 20,000 ರು., ಬೈಂದೂರು ತಾಲೂಕಿನ ಹಳ್ಳಿಹೊಳೆ ಗ್ರಾಮದ ಶೀನ ಪೂಜಾರಿ ಅವರ ಜಾನುವಾರು ಕೊಟ್ಟಿಗೆಗೆ 30,000 ರು. ಮತ್ತು ಉಳ್ಳೂರು ಗ್ರಾಮದ ಗಿರಿಜಮ್ಮ ಶೆಟ್ಟಿ ಅವರು ಜಾನುವಾರು ಕೊಟ್ಟಿಗೆಗೆ 10,000 ರು.ಗಳಷ್ಟು ನಷ್ಟ ಉಂಟಾಗಿದೆ.